ದೊಡ್ಡಬಳ್ಳಾಪುರ: ತಾಲ್ಲೂಕಿನ ತೂಬಗೆರೆ ಹೋಬಳಿ ಕೊಂಡಸಂದ್ರ ಗ್ರಾಮದಲ್ಲಿ ದುಷ್ಕರ್ಮಿಗಳು ಶನಿವಾರ ಮಧ್ಯಾಹ್ನ ಹುಲ್ಲಿನ ಬಣವೆಗೆ ಬೆಂಕಿ ಇಟ್ಟು, ಸುಟ್ಟಿರುವ ಘಟನೆ ನಡೆದಿದೆ.
ಕೊಂಡಸಂದ್ರ ಗ್ರಾಮದ ರಾಮಚಂದ್ರ ಎಂಬುವವರಿಗೆ ಸೇರಿದ ಬಣವೆ ಸುಟ್ಟು ಭಸ್ಮವಾಗಿದೆ. ತಮ್ಮ ಹೊಲದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ರಾಗಿ ಹುಲ್ಲಿನ ಬಣವೆ ನಿರ್ಮಿಸಿದ್ದರು. ಕಿಡಿಗೇಡಿಗಳು ಶನಿವಾರ ಮಧ್ಯಾಹ್ನ ಬೆಂಕಿ ಇಟ್ಟಿರುವ ಪರಿಣಾಮ ಬಣವೆ ಸಂಪೂರ್ಣ ಸುಟ್ಟು ಭಸ್ಮವಾಗಿದೆ.
ಬೆಂಕಿಯನ್ನು ನಂದಿಸಲು ಸ್ಥಳೀಯರು ಹರಸಾಹಸ ಪಟ್ಟರು ಅಸಾಧ್ಯವಾದ ಕಾರಣ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ, ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಿ ಬಣವೆ ಸಂಪೂರ್ಣ ಸುಟ್ಟು ಬಸ್ಮವಾಗಿದೆ.
ಇದನ್ನೂ ಓದಿ: ಅಪ್ರಾಪ್ತೆಯನ್ನು ಗರ್ಭಿಣಿ ಮಾಡಿದ ಯುವಕ: ಆರೋಪಿ ಕಾಲಿಗೆ ಗುಂಡು ಹಾರಿಸಿದ ಪೊಲೀಸರು
ಈ ಕುರಿತು ಮಾತಾನಾಡಿದ ರಾಮಚಂದ್ರ, ಮನೆಯಲ್ಲಿ 8 ಜಾನುವಾರುಗಳಿವೆ. ಅವುಗಳಿಗೆ ಹೇಗೆ ಮೇವು ಒದಗಿಸಬೇಕು ಎಂಬುವುದರ ಬಗ್ಗೆ ದಿಕ್ಕು ತೋಚುತ್ತಿಲ್ಲ. ಈಗಾಗಲೇ ಬರಗಾಲದಿಂದ ಅಪಾರ ನಷ್ಟ ವಾಗಿದೆ, ವಿರೋಧಿಗಳು ಯಾರೇ ಆಗಿರಲಿ ನೇರವಾಗಿ ಬಂದು ಮಾತನಾಡಬೇಕು. ಅದು ಬಿಟ್ಟು ಮೂಕ ಪ್ರಾಣಿಗಳು ತಿನ್ನುವ ಮೇವಿಗೆ ಬೆಂಕಿ ಇಡುವುದು ಹೇಡಿತನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ನಷ್ಟ ಪರಿಹಾರ ನೀಡುವುದರ ಜೊತೆ ಬಣವೆಗೆ ಬೆಂಕಿ ಇಟ್ಟಿರುವ ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಗ್ರಾಮಸ್ಥರಾದ ಉದಯ ಆರಾಧ್ಯ ಅವರು ಆಗ್ರಹಿಸಿದ್ದಾರೆ. ಈ ಘಟನೆ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.