ಚಿಕ್ಕಬಳ್ಳಾಪುರ : ನಾವು ಉಚಿತವಾಗಿ ಪಡಿತರ ನೀಡುತ್ತಿದ್ದೇವೆ. ಬಡವರಿಗೆ ಮುಂದಿನ 5 ವರ್ಷವೂ ಉಚಿತವಾಗಿ ರೇಷನ್ ನೀಡುತ್ತೇವೆ. ಇದು ಮೋದಿ ಗ್ಯಾರಂಟಿ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ನಡದ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ್ದಾರೆ. ‘ಚಿಕ್ಕಬಳ್ಳಾಪುರದ ನನ್ನ ಸಹೋದರ, ಸಹೋದರಿಯರಿಗೆ ನಮಸ್ಕಾರಗಳು’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ್ದಾರೆ.
ಸಂತ ಕೈವಾರ ತಾತಯ್ಯರನ್ನು ನೆನೆದ ಅವರು, ವಿಶ್ವೇಶ್ವರಯ್ಯ ನೆಲದಲ್ಲಿ ನಿಂತು ಮಾತಾಡುವುದು ಖುಷಿ ತಂದಿದೆ. ನಾನು ನಿಮ್ಮೆಲ್ಲರನ್ನೂ ನನ್ನ ಪರಿವಾರವೆಂದು ಭಾವಿಸಿದ್ದೇನೆ. ನಿಮ್ಮ ಏಳಿಗೆಗಾಗಿ ಹಗಲು ರಾತ್ರಿ ಎನ್ನದೆ ನಿರಂತರವಾಗಿ ಶ್ರಮಿಸುತ್ತಿದ್ದೇನೆ. ದಿನದ 24 ಗಂಟೆಯೂ ನಿಮಗಾಗಿ ಕೆಲಸ ಮಾಡುವ ಸಂಕಲ್ಪ ಹೊಂದಿದ್ದು, ನಿಮ್ಮ ಆಶೀರ್ವಾದ ಪಡೆಯಲೆಂದು ಬಂದಿದ್ದೇನೆ. ನಿಮಗೆ ನಾನೇ ಗ್ಯಾರಂಟಿ ಎಂದು ಹೇಳಿದ್ದಾರೆ.
ಬುಡಕಟ್ಟು ಮಹಿಳೆಗೆ ರಾಷ್ಟ್ರಪತಿ ಹುದ್ದೆ
ನನ್ನನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲು ದೊಡ್ಡ ದೊಡ್ಡ ನಾಯಕರು ಯತ್ನಿಸುತ್ತಿದ್ದಾರೆ. ಅದಕ್ಕಾಗಿ ದೊಡ್ಡ ಮಟ್ಟದಲ್ಲಿ ಸಂಚು ನಡೆಯುತ್ತಿದೆ. ಆದರೆ, ನನಗೆ ದೇಶದ ತಾಯಂದಿರ ಆಶೀರ್ವಾದ ಇದೆ. ಎಸ್ಸಿ, ಎಸ್ಟಿ ಸಮುದಾಯಗಳಿಗೆ ಬಿಜೆಪಿ ಗೌರವ ನೀಡುತ್ತ ಬಂದಿದೆ. ಕೊನೆಯ ಸಾಲಿನಲ್ಲಿ ಕೂರಿತ್ತಿದ್ದವರನ್ನ ಎನ್ಡಿಎ ಮುಂದೆ ತಂದಿದೆ. 2014ರಲ್ಲಿ ಮೊದಲ ಬಾರಿ ಎಸ್ಸಿ ಕುಟುಂಬದ ವ್ಯಕ್ತಿ ರಾಷ್ಟ್ರಪತಿ, 2019ರಲ್ಲಿ ಹಿಂದುಳಿದ ವರ್ಗದ ಬುಡಕಟ್ಟು ಮಹಿಳೆಗೆ ರಾಷ್ಟ್ರಪತಿ ಹುದ್ದೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಶ್ಯೂರಿಟಿ ಇಲ್ಲದೆ 20 ಲಕ್ಷ ಸಾಲ
ಕಳೆದ 10 ವರ್ಷಗಳಲ್ಲಿ ಎಸ್ಸಿ, ಎಸ್ಟಿ ಸಮುದಾಯ 25 ಕೋಟಿ ಮಂದಿಯನ್ನು ಬಡತನ ರೇಖೆಗಿಂತ ಮೇಲೆ ತಂದಿದ್ದೇವೆ. ಮುದ್ರಾ ಯೋಜನೆಯಡಿ ಶ್ಯೂರಿಟಿ ಇಲ್ಲದೆ 20 ಲಕ್ಷ ಸಾಲ ನೀಡಲಾಗುತ್ತಿದೆ. ಪ್ರತಿಯೊಬ್ಬ ಮಹಿಳೆಯ ಸುರಕ್ಷತೆಯೇ ನನ್ನ ಮೊದಲ ಆದ್ಯತೆ. ಹೆಣ್ಣು ಮಕ್ಕಳಿಗೂ ಡ್ರೋನ್ ತರಬೇತಿ ನೀಡಲಾಗುತ್ತಿದೆ. ಹೈನುಗಾರಿಕೆ, ಮೀನುಗಾರಿಕೆ ಮಾಡುವವರಿಗೂ ಕಿಸಾನ್ ಕಾರ್ಡ್ ನೀಡಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.