ಬೆಂಗಳೂರು : ನಟ ದರ್ಶನ್ ತೂಗುದೀಪ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಪ್ರಚಾರ ನಡೆಸಿದ್ದರು. ಇದೀಗ ಮತ್ತೋರ್ವ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ಮಾಡಲಿದ್ದಾರೆ.
ಇಂದು ಸಂಸದ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರ ಪರವಾಗಿ ನಟ ದರ್ಶನ್ ಬಹೃತ್ ರೋಡ್ ಶೋ ನಡೆಸಲಿದ್ದಾರೆ.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಯಶವಂತಪುರ ಮಾರ್ಕೆಟ್, ಲಗ್ಗೆರೆ ಸರ್ಕಲ್, ಕೊಟ್ಟಿಗೆ ಪಾಳ್ಯ ಮತ್ತು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಉತ್ತರಹಳ್ಳಿ, ವೀವರ್ಸ್ ಕಾಲೋನಿ, ಕೊಟ್ಟಿಗೆರೆ ವಾರ್ಡ್ ಗಳಲ್ಲಿ ಇಂದು ದರ್ಶನ್ ರೋಡ್ ಶೋನಲ್ಲಿ ಭಾಗಿಯಾಗಲಿದ್ದಾರೆ.
ದರ್ಶನ್ ಪ್ರಚಾರದ ಬಗ್ಗೆ ಸುಮಲತಾ ಹೇಳಿದ್ದೇನು?
ದರ್ಶನ್ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದ ವಿಚಾರಕ್ಕೆ ಸಂಸದೆ ಸುಮಲತಾ ಅಂಬರೀಶ್ ಪ್ರತಿಕ್ರಿಯೆ ನೀಡಿದ್ದಾರೆ. ಯಾರ ಪರ ಪ್ರಚಾರ ಮಾಡಬೇಕು ಎನ್ನುವುದು ಅವರವರ ಇಚ್ಛೆ. ದರ್ಶನ್ ತಮಗಿಷ್ಟವಾದವರ ಪರ ಪ್ರಚಾರ ಮಾಡಿದರೆ ನಾನೇಕೆ ಪ್ರಶ್ನಿಸಲಿ. ಆ ಪಕ್ಷಕ್ಕೆ ಹೋಗು ಅಥವಾ ಬೇಡ ಎನ್ನುವುದಕ್ಕೆ ನಾನ್ಯಾರು? ನಾನು ಸ್ಪರ್ಧೆ ಮಾಡಿದ್ದರೆ ನನ್ನ ಪರ ದರ್ಶನ್ ಪ್ರಚಾರ ಮಾಡುತ್ತಿದ್ದರು. ಅವರನ್ನು ನಾನು ಪ್ರಚಾರಕ್ಕೆ ಕಳುಹಿಸುವುದಾದರೆ ನಾನೇಕೆ ಬಿಜೆಪಿ ಪಕ್ಷಕ್ಕೆ ಸೇರಬೇಕಿತ್ತು? ಎಂದು ತಿಳಿಸಿದ್ದಾರೆ.