ಬೆಂಗಳೂರು: ಲೋಕಸಭೆ ಎಲೆಕ್ಷನ್ ಹೊಸ್ತಿಲಲ್ಲೇ ಕೇಂದ್ರದ ಮಹತ್ವದ ನಿರ್ಧಾರ ತಗೆದುಕೊಂಡಿದೆ. ಭಾರೀ ವಿರೋಧದ ನಡುವೆಯೂ ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ(CAA)ಯನ್ನೂ ಜಾರಿ ಮಾಡಿದೆ.
ಹೌದು,ಲೋಕಸಭೆ ಚುನಾವಣೆ ಘೋಷಣೆಯಾಗುವ ಮುನ್ನವೇ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (CAA) ಜಾರಿಗೆ ತರಲು ಕೇಂದ್ರ ಗೃಹ ಸಚಿವಾಲಯವು ಅಧಿಸೂಚನೆಯನ್ನು ಹೊರಡಿಸಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದೆ.
ಕಾಯ್ದೆ ಜಾರಿಯಾದ 4 ವರ್ಷಗಳ ಬಳಿಕ ಅಧಿಸೂಚನೆ
ಪೌರತ್ವ ತಿದ್ದುಪಡಿ ಕಾಯ್ದೆಗಾಗಿ ಸದನದಲ್ಲಿ ತೀವ್ರ ಚರ್ಚೆ ಮತ್ತು ದೇಶಾದ್ಯಂತ ಪ್ರತಿಭಟನೆಗಳು ನಡೆದಿದ್ದವು.ವಿರೋಧ ಪಕ್ಷದ ರಾಜಕಾರಣಿಗಳು ಮತ್ತು ಬಿಜೆಪಿಯೇತರ ರಾಜ್ಯಗಳ ಮುಖ್ಯಮಂತ್ರಿಗಳ ತೀವ್ರ ಪ್ರತಿರೋಧದ ನಡುವೆ 2019ರ ಡಿಸೆಂಬರ್ ನಲ್ಲಿ ಸಂಸತ್ತಿನಲ್ಲಿ ಕಾಯ್ದೆ ಅಂಗೀಕಾರವಾಗಿತ್ತು.
2014ರ ಡಿಸೆಂಬರ್ 31ಕ್ಕೂ ಮೊದಲು ಭಾರತಕ್ಕೆ ವಲಸೆ ಬಂದ ಹಿಂದೂ, ಸಿಖ್, ಜೈನ್, ಕ್ರಿಶ್ಚಿಯನ್, ಬೌದ್ಧ ಮತ್ತು ಪಾರ್ಸಿ ಸಮುದಾಯಗಳಿಗೆ ಸೇರಿದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ನಾಗರಿಕರಿಗೆ ಪೌರತ್ವವನ್ನು ನೀಡಲು ಕಾನೂನಿನ ನಿಯಮಗಳನ್ನು ಕೇಂದ್ರ ಇಂದು ಘೋಷಿಸಿದೆ.