ಬೆಂಗಳೂರು : ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಿಚಾರ ಕುರಿತು ಕರ್ನಾಟಕ ಫಿಲಂ ಅಕಾಡೆಮಿ ಅಧ್ಯಕ್ಷ ಹಾಗೂ ನಟ ಸಾಧು ಕೋಕಿಲ ಪ್ರತಿಕ್ರಿಯಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಟಿಕೆಟ್ ಕೊಡಿ.. ಟಿಕೆಟ್ ಕೊಟ್ರೆ 100ಕ್ಕೆ 100 ನಿಲ್ತೇನೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಾನು ಒಬ್ಬ ಜನರಲ್ ಕಂಪಾರ್ಟ್ಮೆಂಟ್. ನಾನೊಬ್ಬ ಕಲಾವಿದ. ಎಲ್ಲರನ್ನೂ ಸಮಾನತೆಯಿಂದ ನೋಡ್ತೀನಿ. ನಾನು ಯಾವ ಜಾತಿಗೂ ಸೇರಿಲ್ಲ, ನೀವು ಯಾವ ಜಾತಿಗೂ ಸೇರಿಸಬೇಡಿ ಎಂದು ಮನವಿ ಮಾಡಿದ್ದಾರೆ.
ಕೊಟ್ರೆ ಅಲ್ಲಿ ನನಗೆ ಟಿಕೆಟ್ ಕೊಡಿ
ಕ್ರಿಶ್ಚಿಯನ್ ಸಮುದಾಯ ಬೆಂಗಳೂರಿನಲ್ಲಿ 15 ಲಕ್ಷ ಜನ ಇದ್ದಾರೆ. ಸೆಂಟ್ರಲ್ ನಲ್ಲಿ ಕ್ರಿಶ್ಚಿಯನ್ನರಿಗೆ ಟಿಕೆಟ್ ಕೊಡಿ. ನನ್ನ ಹೆಸರು ಮುಂಚೂಣಿಯಲ್ಲಿ ಇಟ್ಟುಕೊಂಡಿದ್ದಾರೆ. ಕೊಟ್ರೆ ನನಗೆ ಟಿಕೆಟ್ ಕೊಡಿ. ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ. ಟಿಕೆಟ್ ಕೊಟ್ರೆ ನೂರಕ್ಕೆ ನೂರು ನಿಲ್ತೇನೆ ಎಂದು ತಿಳಿಸಿದ್ದಾರೆ.
ಬಡವರ ಪಕ್ಷ ಅಂದ್ರೆ ಕಾಂಗ್ರೆಸ್
ನನ್ನ ಜೀವನದಲ್ಲಿ ಮೊದಲ ಬಾರಿ ವಿಧಾನಸೌಧ ಮೆಟ್ಟಿಲುಗಳ ಬಳಿ ನಿಂತು ಮಾತನಾಡ್ತಿದ್ದೀನಿ. ಇದಕ್ಕೆ ಕಾರಣ ಕಾಂಗ್ರೆಸ್ ಪಕ್ಷ. ನಮ್ಮ ತಾಯಿ ಕಾಲದಿಂದ ಬಡವರ ಪಕ್ಷ ಅಂದ್ರೆ ಕಾಂಗ್ರೆಸ್. ನಿಷ್ಠಾವಂತನಾಗಿ ಜೊತೆಗಿದ್ದು ಕೆಲಸ ಮಾಡ್ತಿದ್ದೇನೆ. ನನಗೆ ಕರ್ನಾಟಕ ಫಿಲಂ ಅಕಾಡೆಮಿ ಅಧ್ಯಕ್ಷನಾಗಿ ಆಯ್ಕೆ ಮಾಡಿದ್ದಾರೆ. ಒಂದೊಂದೇ ಮೆಟ್ಟಿಲು ಹತ್ತಿ ಅಂತ ಸಿಎಂ, ಡಿಸಿಎಂ ಹೇಳಿದ್ದಾರೆ. ಅಕಾಡೆಮಿಯಲ್ಲಿ ತುಂಬಾ ಕೆಲಸಗಳು ಇವೆ ಎಂದು ಸಾಧು ಕೋಕಿಲ ಹೇಳಿದ್ದಾರೆ.