ಬೆಂಗಳೂರು : ಜಾತಿಗಣತಿ ವರದಿಯಲ್ಲಿ ಕೆಲವು ಉಪ ಪಂಗಡಗಳನ್ನು ಸೇರಿಸಿಲ್ಲ. ಅವುಗಳನ್ನೂ ಸೇರಿಸಿ ಎನ್ನುವುದು ನಮ್ಮ ವಾದ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದರು.
ಜಾತಿಗಣತಿ ವರದಿ ಸಲ್ಲಿಕೆ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈಗಲೇ ನಾವು ಯಾಕೆ ನೆಗೆಟೀವ್ ತಿಳಿಯೋಣ. ಕ್ಯಾಬಿನೆಟ್ ಮುಂದೆ ಬರಲಿ ನೊಡೋಣ. ಜಾತಿಗಣತಿಗೆ ನಮ್ಮ ವಿರೋಧವೇನಿಲ್ಲ ಎಂದು ತಿಳಿಸಿದರು.
ಜಾತಿಗಣತಿ ವರದಿ ಸಲ್ಲಿಕೆ ಆಗಿದೆ. ರಾಜ್ಯ ಸರ್ಕಾರ ಒಪ್ಪೋದು, ಬಿಡೋದು ಬರುತ್ತದೆ. ವರದಿಯಲ್ಲಿ ಏನಿದೆ ಅಂತ ನೋಡಬೇಕು. ಕೆಲವು ಸಂದೇಹ ನಮಗಿತ್ತು. ಮೀಸಲಾತಿ ಸಲುವಾಗಿ 2ಎ, ಹಿಂದೂ ಗಾಣಿಗ ಅನೇಕ ರೀತಿ ಬರೆಸಿದ್ದಾರೆ. ಅವರನ್ನೆಲ್ಲಾ ಒಂದೇ ಸೂರಿನಲ್ಲಿ ಬರೆಸಬೇಕು. ಆದರೆ, ಆ ರೀತಿ ಆಗಿಲ್ಲ ಎಂದು ಬೇಸರಿಸಿದರು.
ಸಿಎಂ ಏನು ಮಾಡ್ತಾರೆ ನೋಡಬೇಕು
ಇಂದಿನ ಕ್ಯಾಬಿನೆಟ್ ಸಭೆಯಲ್ಲಿ ಜಾತಿಗಣತಿ ವರದಿ ಸಲ್ಲಿಕೆ ಬಗ್ಗೆ ಚರ್ಚೆಯಾಗುತ್ತಾ? ಎಂಬ ಪ್ರಶ್ನೆಗೆ, ಗೊತ್ತಿಲ್ಲ ಸಿಎಂ ಸಿದ್ದರಾಮಯ್ಯ ಏನು ಮಾಡ್ತಾರೆ ನೋಡಬೇಕು. ಜಾತಿಗಣತಿ ಬಗ್ಗೆ ನೆಗೆಟೀವ್ ಆಗಿ ಯಾಕೆ ಯೋಚನೆ ಮಾಡಬೇಕು ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದರು.