ರಾಮನಗರ : ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಿದ್ದಾರೆ ಸಂತೋಷ. ನಾನು ಕೂಡ ರಾಮ ಭಕ್ತೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ರಾಮನಗರ ಜಿಲ್ಲೆ ಮಾಗಡಿಯ ಕೋಟೆ ಮೈದಾನದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
5 ಸಾವಿರ ಕೋಟಿ ಖರ್ಚು ಮಾಡಿ ರಾಮಮಂದಿರ ಕಟ್ಟಿದ್ದಾರೆ. ನಾವು ಒಂದು ತಿಂಗಳಿಗೆ 4 ಸಾವಿರ ಕೋಟಿ ಖರ್ಚು ಮಾಡಿ ರಾಜ್ಯದಲ್ಲಿ ರಾಮರಾಜ್ಯ ಮಾಡಿದ್ದೇವೆ. ಗ್ಯಾರಂಟಿ ಯೋಜನೆಗಳನ್ನು ಸ್ವಾರ್ಥಕ್ಕಾಗಿ ಕೊಟ್ಟಿರೋದಲ್ಲ ಎಂದು ಕುಟುಕಿದರು.
ಯಾರ ಕೈಲೂ ಗ್ಯಾರಂಟಿ ನಿಲ್ಲಿಸೋಕೆ ಸಾಧ್ಯವಿಲ್ಲ
ಕೋವಿಡ್-19 ನಿಂದ ಜನ ಸಾಕಷ್ಟು ತೊಂದರೆ ಅನುಭವಿಸಿದ್ದರು. ಬಡ ಜನರಿಗೆ ಅನುಕೂಲವಾಗಲಿ ಎಂದು ಗ್ಯಾರಂಟಿ ಕೊಟ್ಟಿದ್ದೇವೆ. ಈ ಗ್ಯಾರಂಟಿಗಳನ್ನು ಯಾರ ಕೈಲೂ ನಿಲ್ಲಿಸೋಕೆ ಸಾಧ್ಯವಿಲ್ಲ. ಬಿಜೆಪಿಯವರು ಸದನದಲ್ಲಿ ಜೋರಾಗಿ ಮಾತನಾಡ್ತಾ ಇದ್ದರು. ಗೃಹಲಕ್ಷ್ಮೀ ಯಾರಿಗೂ ಸಿಕ್ಕಿಲ್ಲ ಅಂತ ಬೊಬ್ಬೆ ಹೊಡೀತಾ ಇದ್ರು ಎಂದು ಚಾಟಿ ಬೀಸಿದರು.
ನಾವು ಅದಾನಿ, ಅಂಬಾನಿ ಸಾಲಮನ್ನಾ ಮಾಡಿಲ್ಲ
ನಾವು ಅದಾನಿ, ಅಂಬಾನಿಗೆ ಸಹಾಯ ಮಾಡ್ತಾ ಇಲ್ಲ. ಅವರ ಸಾಲಮನ್ನಾ ಮಾಡಿಲ್ಲ. ನಮ್ಮ ಗೃಹಲಕ್ಷ್ಮೀಯರಿಗೆ ಸಹಾಯ ಆಗಲಿ ಅಂತ 2 ಸಾವಿರ ರೂಪಾಯಿ ಕೊಡ್ತಾ ಇದ್ದೀವಿ. ಒಂದು ವರ್ಷಕ್ಕೆ ಮಹಿಳೆಯರಿಗೆ 24 ಸಾವಿರ ಕೊಡ್ತಾ ಇದ್ದೀವಿ. ಯಾವುದೇ ಮಧ್ಯವರ್ತಿಗಳಿಲ್ಲದೇ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹಾಕ್ತಾ ಇದ್ದೇವೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.