ಬೆಂಗಳೂರು : ನಾನು ಅಥವಾ ಕಾಂಗ್ರೆಸ್ ಪಕ್ಷದವರು ದೇಶ ಭಕ್ತರು ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ದೇಶದ ಸಲುವಾಗಿ, ಸ್ವಾತಂತ್ರ್ಯಕ್ಕೊಸ್ಕರ ಅನೇಕ ಕಾಂಗ್ರೆಸ್ಸಿಗರು ಪ್ರಾಣತ್ಯಾಗ ಮಾಡಿದ್ರು. ಆಗ ಬಿಜೆಪಿಯವರು ಏನು ಮಾಡಿದ್ದಾರೆ?ಎಂದು ಕುಟುಕಿದರು.
ಯಾರಾದರೂ ಪಾಕಿಸ್ತಾನ ಜಿಂದಾಬಾದ್ ಅಂತ ಘೋಷಣೆ ಕೂಗಿದ್ರೆ, ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ತನಿಖೆ ಆಗುವುದಕ್ಕೂ ಮುಂಚೆ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ. ಈ ರೀತಿ ಘಟನೆ ಸಿಂದಗಿಯಲ್ಲೂ ಆಗಿತ್ತು. ಆದ್ರೆ, ಅದಕ್ಕೂ ಇದಕ್ಕೂ ಹೋಲಿಕೆ ಮಾಡುತ್ತಿಲ್ಲ ಎಂದು ಹೇಳಿದರು.
ತಪ್ಪು ಮಾಡಿದ್ರೆ ಕ್ರಮ ತೆಗೆದುಕೊಳ್ಳುತ್ತಾರೆ
ಆ ಘಟನೆ ಬಗ್ಗೆ ತನಿಖೆ ನಡೆದಾಗ ಬೇರೆ ಸಂಘಟನೆಯವರು ಮಾಡಿದ ಕೃತ್ಯ ಅಂತ ಬೆಳಕಿಗೆ ಬಂದಿತ್ತು. ಇಲ್ಲೂ ಕೂಡ ಬೇರೆ ಏನೋ ಆಗಿರಬಹುದು. ತನಿಖೆಯಾಗಲಿ, ತನಿಖೆಯ ನಂತರ ಯಾರಾದರೂ ತಪ್ಪು ಮಾಡಿದ್ರೆ ಕ್ರಮ ತೆಗೆದುಕೊಳ್ಳುತ್ತಾರೆ. ಈ ಬಗ್ಗೆ ಸದನದಲ್ಲಿ ಗೃಹ ಸಚಿವರು ಸ್ಪಷ್ಟನೆ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಇನ್ನು ನಾನು ಆಡಿಯೋವನ್ನು ನೋಡಿಲ್ಲ
ಪ್ರಿಯಾಂಕ್ ಖರ್ಗೆ ಸೇರಿದಂತೆ ಕೆಲ ನಾಯಕರು ಘಟನೆ ಬಗ್ಗೆ ಕ್ಲೀನ್ ಚಿಟ್ ಕೊಟ್ಟಿರುವ ವಿಚಾರವಾಗಿ ಮಾತನಾಡಿ, ಇದು ಅವರ ವೈಯಕ್ತಿಕ ಹೇಳಿಕೆ. ಅವರು ಯಾಕೆ ಹೇಳಿದ್ದಾರೆ ಗೊತ್ತಿಲ್ಲ. ಇನ್ನು ಕೂಡ ನಾನು ಆಡಿಯೋವನ್ನು ನೋಡಿಲ್ಲ. ಯಾರೋ ನಿನ್ನೆ ನನಗೆ ಫ್ಯಾಕ್ಟ್ ಚೆಕ್ ಅಂತ ಕಳಿಸಿದ್ರು, ಅದನ್ನು ನೋಡಿದ್ದೇನೆ ಅಷ್ಟೇ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದರು.