ತುಮಕೂರು : ನಿನ್ನೆ ಮಧ್ಯಾಹ್ನ ವಿಜಯಪುರಕ್ಕೆ ಹೋಗಬೇಕಾದರೆ ದೆಹಲಿಯಿಂದ ಕರೆ ಬಂತು. ದೆಹಲಿಗೆ ತುರ್ತಾಗಿ ಬರುವುದಕ್ಕೆ ಹೇಳಿದ್ರು. ನಾನು ನಾಳೆ, ನಾಡಿದ್ದು ಬರುವುದಕ್ಕೆ ಆಗಲ್ಲ ಅಂತ ಹೇಳ್ದೆ ಎಂದು ಮಾಜಿ ಸಚಿವ ವಿ. ಸೋಮಣ್ಣ ತಿಳಿಸಿದರು.
ತುಮಕೂರಿನ ಹನಮಂತಪುರದ ಕೊಲ್ಲಾಪುರದಮ್ಮ ದೇವಾಲಯಕ್ಕೆ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ತುಮಕೂರಿಗೂ ನನಗೂ ಅವಿನಾಭಾವ ಸಂಬಂಧವಿದೆ. ವಿಧಿ ಲಿಖಿತ ಏನಿದೇಯೋ ಹಾಗಾಗುತ್ತೆ ಎಂದರು.
ಇನ್ನೆರಡು ಮೂರು ದಿನದಲ್ಲಿ ನನ್ನ ತಾಯಿ ಆರಾಧನೆ ಇದೆ. ಅದನ್ನು ಮುಗಿಸಿಕೊಂಡು ದೆಹಲಿಗೆ ಹೋಗುತ್ತೇನೆ. ನಾನು ಎಳೆ ಮಗುವಲ್ಲ. ಆರೇಳು ಜನ ಮುಖ್ಯಮಂತ್ರಿಗಳ ಜೊತೆ ಕೆಲಸ ಮಾಡಿದ್ದೇನೆ. ಇವತ್ತು ರಾತ್ರಿ ಮತ್ತೆ ದೆಹಲಿಗೆ ಪೋನ್ ಮಾಡಿ ದಿನಾಂಕ (ಡೇಟ್) ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.
ಒಂದು ಸತ್ಯ ದೇಶಕ್ಕೆ ಮೋದಿ ಬೇಕು
ಮೂರು ರಾಜ್ಯದ ಮುಖ್ಯಮಂತ್ರಿ ಆಯ್ಕೆ ಮುಗಿದಿದೆ. ಅದಾದ ಬಳಿಕ ಯಾವತ್ತು ಕರೆಯುತ್ತಾರೋ ಅವತ್ತು ಹೋಗ್ತೇನೆ. ಒಂದು ಸತ್ಯ ದೇಶಕ್ಕೆ ಮೋದಿ ಬೇಕು. ನಿನ್ಮೆ ಬಿಜಾಪುರದ ಸಿದ್ದನಕೊಳದ ಮಠಕ್ಕೆ ಭೇಟಿ ಕೊಟ್ಟೆ. ಅಲ್ಲಿ ಆ ತಪಸ್ವಿಗಳ ಜೀವಂತ ಸಮಾಧಿ ನೋಡಿ. ಒಂದು ರೀತಿಯ ಅನುಭವವಾಯಿತು. ಯಾರು ನಡವಳಿಕೆಯಲ್ಲಿ ದೇವರನ್ನು ಕಾಣುತ್ತಾರೋ, ಕೆಲವು ಸಂದರ್ಭದಲ್ಲಿ ಆಗುವ ಅನಾಹುತಗಳು, ಸ್ವಪಕ್ಷಿಯರಿಂದ ಆದ ಕೆಟ್ಟ ಸಂದೇಶಗಳು ಜಾಸ್ತಿ ದಿನ ಉಳಿಯೋದಿಲ್ಲ ಎಂಬುದು ಅನುಭವಕ್ಕೆ ಬಂತು. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ವರಿಷ್ಠರ ಜೊತೆ ಮಾತನಾಡಿ ಅವರು ಏನು ಹೇಳ್ತಾರೋ ಹಾಗೆ ಮಾಡ್ತೀನಿ ಎಂದು ತಿಳಿಸಿದರು.
ಯತ್ನಾಳ್ ಒಬ್ಬರು ಸುಸಂಸ್ಕೃತ ರಾಜಕಾರಣಿ
ಯತ್ನಾಳ್ ಯಡಿಯೂರಪ್ಪ ವಿರುದ್ದ ವಾಗ್ದಾಳಿ ವಿಚಾರವಾಗಿ ಮಾತನಾಡಿದ ಅವರು, ಯತ್ನಾಳ್ ಒಬ್ಬರು ಸುಸಂಸ್ಕೃತ ರಾಜಕಾರಣಿ. ನನ್ನ ನೋವು ನನಗೆ ಗೊತ್ತು, ಅವರ ನೋವು ಅವರಿಗೆ ಗೊತ್ತು. ನನಗೆ ದೊಡ್ಡ ನಾಯಕರುಗಳ ಒಂದು ಸೂಚನೆಯೂ ಇರುವುದರಿಂದ ನಾನು ಹೆಚ್ಚಿಗೆ ಮಾತನಾಡುವುದಿಲ್ಲ. 40 ವರ್ಷ ನನ್ನ ರಾಜಕೀಯ ಅಧಿಕಾರಾವಧಿಯಲ್ಲಿ, ನನ್ನ ವೈಯಕ್ತಿಕ ಬದುಕಿನಲ್ಲಿ ಯಾರೊಬ್ಬರನ್ನ ಬೊಟ್ಟು ಮಾಡಿ ತೋರಿಸಿಲ್ಲ ಎಂದು ವಿ. ಸೋಮಣ್ಣ ಪರೋಕ್ಷವಾಗಿಯೇ ಮನದ ನೋವು ತೋಡಿಕೊಂಡರು.