ದಾವಣಗೆರೆ : ನನಗೆ ಹಾಗೂ ನನ್ನ ಕುಟುಂಬಕ್ಕೆ ಕಾಂಗ್ರೆಸ್ ಸರ್ಕಾರದ ಫ್ರೀ ಗ್ಯಾರಂಟಿ ಯೋಜನೆ ಬೇಡ. ಬಡವರಿಗೆ ಸಿಗಲಿ ಎಂದು ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ.
ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಜನರ ಕಿವಿಗೆ ಹೂ ಇಡಬೇಡಿ. ಷರತ್ತು ಹಾಕದೇ ಉಚಿತ ಗ್ಯಾರಂಟಿ ಯೋಜನೆ ಜಾರಿ ಮಾಡಿ ಎಂದು ತಿಳಿಸಿದ್ದಾರೆ.
ಎಲ್ಲದಕ್ಕೂ ಷರತ್ತು ವಿಧಿಸುವುದು ಸರಿಯಲ್ಲ. ಮುಂಚೆ ಷರತ್ತು ಅನ್ವಯ ಎಂದು ಹೇಳದೇ ಉಚಿತ ಗ್ಯಾರಂಟಿ ಘೋಷಣೆ ಮಾಡಿದ್ದೀರಿ. ಈಗ ಕರೆಂಟ್ ಬಿಲ್, ಅನ್ನಭಾಗ್ಯ, ಬಸ್ ಪ್ರಯಾಣ ಎಲ್ಲದಕ್ಕೂ ಷರತ್ತು ಹಾಕುತ್ತಿದ್ದೀರಿ. ಯಾವುದೇ ಷರತ್ತು ಹಾಕದೇ ಯೋಜನೆ ಜಾರಿ ಮಾಡಿ ಎಂದು ಪುನರುಚ್ಚರಿಸಿದ್ದಾರೆ.
ಇದನ್ನೂ ಓದಿ : ಬಾಡಿಗೆದಾರರಿಗೂ ಉಚಿತ ವಿದ್ಯುತ್ ಸಿಗುತ್ತದೆ : ಸಿದ್ದರಾಮಯ್ಯ
ಅತ್ತೆ, ಸೋಸೆಗೆ ಜಗಳ ಹಚ್ಚಿದ್ದೀರಿ
ಕೊಟ್ಟು ಮಾತು ಉಳಿಸಿಕೊಳ್ಳಿ, ವಚನ ಭ್ರಷ್ಟರಾಗಬೇಡಿ. ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿದೆ, ಅದನ್ನ ಬಿಟ್ಟು ನೀವು ಕೊಡಿ. ಗೃಹಲಕ್ಷ್ಮಿ ಯೋಜನೆ ಜಾರಿ ಮಾಡಿ ಮನೆಯಲ್ಲಿ ಅತ್ತೆ ಹಾಗೂ ಸೋಸೆಗೆ ಜಗಳ ಹಚ್ಚಿದ್ದೀರಿ. ಮನೆಗಳಲ್ಲಿ ಅತ್ತೆ-ಸೋಸೆ ಗಲಾಟೆ ಶುರುವಾಗಿದೆ. ಬಾಡಿಗೆ ಇದ್ದ ಮನೆಗೂ ಕರೆಂಟ್ ಫ್ರೀ ಕೊಡಿ ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ರಾಜ್ಯವನ್ನ ಬರ್ಬಾದ್ ಮಾಡ್ಬೇಡಿ
ಆ ಬಸ್ ಇಲ್ಲ, ಈ ಬಸ್ ಫ್ರೀ ಇಲ್ಲ ಎಂದು ಕಂಡೀಶನ್ ಆಗಿದ್ದೀರಿ. ಮುಂಚೆ ಎಸಿ ಬಸ್ ಇಲ್ಲ ಅಂತಾ ಹೇಳಿದ್ರಾ?ಹಾಲಿಗೆ ಪ್ರೋತ್ಸಾಹ ಧನ ಕಡಿತ ಮಾಡಿದ್ದೀರಿ. ಹೆಚ್ಚಿನ ತೆರಿಗೆ ಹಾಕಬೇಡಿ, ಪಾಕಿಸ್ತಾನ, ಶ್ರೀಲಂಕಾ ಬರ್ಬಾದ್ ಆಗೋ ತರ ಆಗೋದು ಬೇಡ. ನನ್ನ ಕುಟುಂಬಕ್ಕೆ ನಿಮ್ಮ ಫ್ರೀ ಯೋಜನೆ ಬೇಡ. ಬಡಜನರಿಗೆ ಯಾವುದೇ ಷರತ್ತು ಹಾಕಲೇಬೇಡಿ ಎಂದು ಒತ್ತಾಯಿಸಿದ್ದಾರೆ.