ವಿಜಯನಗರ : ನೀರಿಗಾಗಿ ಹಾಹಾಕಾರ ಶುರುವಾಗಿದ್ದು, ಕುಡಿಯುವ ನೀರಿನ ಸೌಕರ್ಯಕ್ಕೆ ಆಗ್ರಹಿಸಿ ಮರಿಯಮ್ಮನಹಳ್ಳಿ ಪಟ್ಟಣವನ್ನು ಬಂದ್ ಮಾಡಿದ್ದಾರೆ.
ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಬಂದ್ ಮಾಡಿದ್ದು, ಮರಿಯಮ್ಮನಹಳ್ಳಿ ಪಟ್ಟಣವು ಸಂಪೂರ್ಣ ಸ್ಥಬ್ಧವಾಗಿದೆ. ತುಂಗಭದ್ರಾ ಜಲಾಶಯದಿಂದ ನಾಲ್ಕೇ ಕಿ.ಮೀ ದೂರದಲ್ಲಿ ಮರಿಯಮ್ಮನಹಳ್ಳಿ ಪಟ್ಟಣವಿದ್ದು, ಅಲ್ಲಿಗೆ ನೀರಿನ ಸೌಕರ್ಯ ನೀಡದೆ ಜಲಾಶಯದಿಂದ ಪಾವಗಡಕ್ಕೆ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಇದ್ದರಿಂದ ಗ್ರಾಮಸ್ಥರು ದೂರದೂರಿಗೆ ನೀರು, ನಮಗೇಕೆ ಕಣ್ಣೀರು ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕುತ್ತಿದ್ದಾರೆ.
ಕಳೆದ ಏಳು ದಶಕಗಳಿಂದ ನೀರಿಗಾಗಿ ಗ್ರಾಮದ ಜನರು ಪರಾದಾಡುತ್ತಿದ್ದು, ರಾಜಕಾರಣಿಗಳ ಭಾಷಣದ ವಿಷಯ ವಸ್ತುವಾಗಿರೋ ಕುಡಿಯುವ ನೀರಿನ ಯೋಜನೆಯನ್ನು ಕೂಡಲೇ ಜಾರಿಗೊಳಿಸಬೇಕು. ಇಲ್ಲವಾದಲ್ಲಿ ಪಾವಗಡಕ್ಕೆ ನೀರು ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಆಗ್ರಹಿಸುತ್ತಿದಾರೆ.