Friday, May 17, 2024

‘ಪವರ್’ನಲ್ಲಿ ಆಸ್ಕರ್ ನಾಮಾಂಕಿತ ‘ಚೆಲ್ಲೋ ಶೋ’ ತಂತ್ರಜ್ಞ

ವಿಶ್ವ ಸಿನಿದುನಿಯಾದ ಶ್ರೇಷ್ಠ ಪ್ರಶಸ್ತಿ ಆಸ್ಕರ್​ ಅಂಗಳದಲ್ಲಿ ನಮ್ಮ ಗುಜರಾತಿ ಸಿನಿಮಾ ಚೆಲ್ಲೋ ಶೋ ಸಂಚಲನ ಮೂಡಿಸಿದೆ. ಲಾಸ್ಟ್ ಫಿಲ್ಮ್ ಶೋಗೆ ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ ಬೆರಗಾಗಿದ್ದು ಹೇಗೆ..? ವಿಶ್ವದ ಅಚ್ಚರಿ ಮೂಡಿಸಿದ ಸಮಯ್ ಕಥೆ ಏನು ಅನ್ನೋದ್ರ ಜೊತೆ ಅದ್ರ ಹಿಂದಿನ ಕನ್ನಡ ಟೆಕ್ನಿಷಿಯನ್ ಪವನ್ ಭಟ್ ಎಕ್ಸ್​ಕ್ಲೂಸಿವ್ ಮಾತು ಫಿಲ್ಮಿ ಪವರ್​ನಲ್ಲಿ ಮಾತ್ರ.

  • ಇಲ್ಲಿಯವರೆಗೆ ಆಸ್ಕರ್ ಪಡೆದ ಇಂಡಿಯನ್ಸ್ ಐದು ಮಂದಿ..!
  • ತ್ರಿಬಲ್ ಆರ್, ದಿ ಕಾಶ್ಮೀರ್ ಫೈಲ್ಸ್​​ನ ಹಿಂದಿಕ್ಕಿದ ಚೆಲ್ಲೋ ಶೋ
  • ಪವನ್ ಯಾರು..? 150 ಗಂಟೆಯನ್ನ​ 1.55ಕ್ಕೆ ಇಳಿಸಿದ್ದೇಗೆ..?

ಯೆಸ್.. ಭಾರತದ ಮಟ್ಟಿಗೆ ಚಿತ್ರರಂಗದ ಶ್ರೇಷ್ಟ ಪ್ರಶಸ್ತಿ ಅಂದ್ರೆ ಅದು ದಾದಾ ಸಾಹೇಬ್ ಫಾಲ್ಕೆ, ನ್ಯಾಷನಲ್ ಅವಾರ್ಡ್​ ಹಾಗೂ ಫಿಲ್ಮ್ ಫೇರ್ ​. ಆದ್ರೆ ಹಾಲಿವುಡ್​ ಸೇರಿದಂತೆ ಇಡೀ ವಿಶ್ವ ಸಿನಿದುನಿಯಾಗೆ ಆಸ್ಕರ್ ಪ್ರಶಸ್ತಿಯೇ ಸರ್ವ ಶ್ರೇಷ್ಟ ಪ್ರಶಸ್ತಿ. ಇಲ್ಲಿಯವರೆಗೆ ನಮ್ಮಲ್ಲಿ ಐದು ಮಂದಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. 1982ರಲ್ಲಿ ಗಾಂಧಿ ಚಿತ್ರದ ಕಾಸ್ಟ್ಯೂಮ್ ಡಿಸೈನರ್ ಭಾನು ಅತ್ತಯ್ಯ, ಜೀವಮಾನ ಸಾಧನೆಗಾಗಿ ಸತ್ಯಜಿತ್ ರೇ, ಸ್ಲಮ್ ಡಾಗ್ ಮಿಲಿಯನೇರ್ ಚಿತ್ರದ ಸೌಂಡ್ ಮಿಕ್ಸಿಂಗ್ ಹಾಗೂ ಮ್ಯೂಸಿಕ್​ಗಾಗಿ ರಸುಲ್ ಪೂಕುಟ್ಟಿ, ಎಆರ್ ರೆಹಮಾನ್ ಪಡೆದಿದ್ದಾರೆ. ಜೈ ಹೋ ಒರಿಜಿನಲ್ ಸಾಂಗ್​ಗಾಗಿ ಗುಲ್ಜಾರ್ ಅವ್ರಿಗೂ ಆಸ್ಕರ್ ಲಭಿಸಿದೆ.

ಇದೀಗ ಈ ಸಾಲಿನ ಆಸ್ಕರ್​ಗೆ ಭಾರತದಿಂದ ಅಫಿಶಿಯಲಿ ನಾಮಿನೇಟ್ ಆಗಿರೋದು ಚೆಲ್ಲೋ ಶೋ ಸಿನಿಮಾ. ಇದು ಗುಜರಾತಿ ಚಿತ್ರವಾಗಿದ್ದು, ಚೆಲ್ಲೋ ಶೋ ಅಂದ್ರೆ ಲಾಸ್ಟ್ ಫಿಲ್ಮ್ ಶೋ ಎಂದರ್ಥ. ಪ್ಯಾನ್ ನಳಿನ್ ನಿರ್ದೇಶನದ ಈ ಸಿನಿಮಾ 9 ವರ್ಷದ ಸಮಯ್ ಅನ್ನೋ ಹುಡ್ಗನ ಸಿನಿಮೋತ್ಸಾಹದ ಕುರಿತಾದ ರೋಚಕ ಜರ್ನಿ ಆಗಿದೆ. ಪ್ರೊಜೆಕ್ಟರ್ ರೂಂನಿಂದ ಸಿನಿಮಾಗಳನ್ನ ಕದ್ದು ನೋಡ್ತಿದ್ದ ಸಮಯ್, ಕೊನೆಗೆ ರೀಲ್​ಗಳನ್ನೇ ಕದ್ದು ಲೈಟ್​​ನಿಂದ ಅದ್ರಲ್ಲಿದ್ದ ಸೂಪರ್ ಸ್ಟಾರ್​ಗಳನ್ನ ನೋಡಿ ಸಂಭ್ರಮಿಸೋ ಕಥೆಯಾಗಿದೆ.

ಈ ಬಾರಿ ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ ಆಸ್ಕರ್ ಜ್ಯೂರಿ ಕಮಿಟಿಯನ್ನ ನಮ್ಮ ಕನ್ನಡದ ಟಿಎಸ್ ನಾಗಾಭರಣ ನೇತೃತ್ವದಲ್ಲಿ ಫಾರ್ಮ್​ ಮಾಡಿತ್ತು. ಅದರಲ್ಲಿ ನಮ್ಮ ಪವನ್ ಒಡೆಯರ್, ಪ್ರಮಿಳಾ ಜೋಷಾಯಿ ಸೇರಿದಂತೆ ಸುಮಾರು ಭಾರತದ 17 ಮಂದಿ ಜ್ಯೂರಿಗಳಿದ್ದರು. ರಾಜಮೌಳಿಯ ತ್ರಿಬಲ್ ಆರ್, ಸಂಚಲನ ಮೂಡಿಸಿದ ದಿ ಕಾಶ್ಮೀರ್ ಫೈಲ್ಸ್ ಸಿನಿಮಾಗಳು ಸೇರಿದಂತೆ ಚೆಲ್ಲೋ ಶೋ ಜೊತೆ ಬರೋಬ್ಬರಿ 13 ಚಿತ್ರಗಳಿದ್ದವು. ಅವೆಲ್ಲವುಗಳನ್ನ ಹಿಂದಿಕ್ಕಿ ಚೆಲ್ಲೋ ಶೋ ನಾಮನಿರ್ದೇಶನಗೊಂಡಿದೆ.

ಇದೇ ಅಕ್ಟೋಬರ್ 14ಕ್ಕೆ ಭಾರತದಲ್ಲಿ ರಿಲೀಸ್ ಆಗ್ತಿರೋ ಚೆಲ್ಲೋ ಶೋ ಚಿತ್ರದ ಹಿಂದೆ ಸಾಕಷ್ಟು ಮಂದಿ ಟೆಕ್ನಿಷಿಯನ್ಸ್ ಕೈಚಳಕವಿದ್ದು, ನಮ್ಮ ಕನ್ನಡಿಗರದ್ದೂ ಪಾತ್ರವಿದೆ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ. ಹೌದು.. ಕರಾವಳಿ ಮೂಲದ ಪವನ್ ಭಟ್ ಅನ್ನೋರು ಈ ಚಿತ್ರದ ಸಂಕಲನಕಾರರು. ಮುಂಬೈನಲ್ಲಿ ಏಳೆಂಟು ವರ್ಷ ಕೆಲಸ ಮಾಡಿರೋ ಪವನ್, ಇಂಜಿನಿಯರಿಂಗ್ ಮುಗಿಸಿ ಉದ್ಯೋಗ ಹರಸಿ ಮುಂಬೈಗೆ ಕಾಲಿಟ್ಟಿದ್ರು. ನಂತ್ರ ಫಿಲ್ಮ್ ಎಡಿಟರ್ ಆಗಿದ್ದು ಹೇಗೆ..? ಈ ಸಿನಿಮಾದ 150 ಗಂಟೆಯ ಫೂಟೇಜ್​ನ ಒಂದು ಗಂಟೆ ಐವತ್ತೈದು ನಿಮಿಷಕ್ಕೆ ಇಳಿಸಿದ್ದೇಗೆ ಅನ್ನೋದನ್ನ ಎಕ್ಸ್​ಕ್ಲೂಸಿವ್ ಆಗಿ ಮಾತನಾಡಿದ್ದಾರೆ ನೋಡಿ.

ನಿರ್ದೇಶನದ ಕನಸು ಹೊತ್ತಿರೋ ಪವನ್, ರಿಷಬ್, ರಕ್ಷಿತ್ ಹಾಗೂ ರಾಜ್ ಬಿ ಶೆಟ್ಟಿಯ ಬಗ್ಗೆ ಹೆಮ್ಮೆಯ ಮಾತುಗಳಾಡಿದ್ದಾರೆ. ಅಷ್ಟೇ ಅಲ್ಲ ಯಶ್​ರ ಕೆಜಿಎಫ್ ಟ್ರೆಂಡ್ ಸೆಟ್ ಮಾಡಿದ ಪರಿಯ ಜೊತೆ ಅಣ್ಣಾವ್ರು, ಅಪ್ಪು, ಶಿವಣ್ಣ, ವಿಷ್ಣುದಾದಾ, ಅಂಬಿ ಸಿನಿಮಾಗಳನ್ನ ನೋಡಿ ಬೆಳೆದ ಹುಡ್ಗನ ಮಾತನ್ನ ನೀವೇ ಒಮ್ಮೆ ಕೇಳಿ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ  

RELATED ARTICLES

Related Articles

TRENDING ARTICLES