Saturday, May 18, 2024

ಮುಂದಿನ 4 ದಿನ ಕರ್ನಾಟಕ, ಉತ್ತರಾಖಂಡಕ್ಕೆ ಯೆಲ್ಲೋ ಅಲರ್ಟ್

ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ಮಳೆ ಮುಂದುವರೆದಿದೆ. ಉತ್ತರಾಖಂಡ್ನ 5 ಜಿಲ್ಲೆಗಳು ಹಾಗೂ ಕರ್ನಾಟಕಕ್ಕೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಒಡಿಶಾ, ಗುಜರಾತ್, ಪಶ್ಚಿಮ ಬಂಗಾಳದಲ್ಲೂ ಅಧಿಕ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಸಾಮಾನ್ಯವಾಗಿ ಚೌತಿ ಕಳೆದ ಬಳಿಕ ಕ್ರಮೇಣವಾಗಿ ಮಳೆ ಕಡಿಮೆಯಾಗುತ್ತಿತ್ತು, ಆದರೆ ಈ ಬಾರಿ ಮಳೆ ನಿಲ್ಲುವ ಲಕ್ಷಣವೇ ಕಾಣುತ್ತಿಲ್ಲ. ಮಳೆಗಾಲ ಆರಂಭದಲ್ಲಿ ಗುಡುಗು, ಸಿಡಿಲು ಮಳೆಯನ್ನು ನಾವು ನೋಡುತ್ತೇವೆ, ಆದರೆ ಈ ಬಾರಿ ಮಳೆಗಾದಲ್ಲೂ ಗುಡುಗು, ಸಿಡಿಲಿನ ಆರ್ಭಟದ ಜತೆಗೆ ಮಳೆಯಾಗಿದೆ.

ಉತ್ತರಾಖಂಡದ ಪಿಥೋರಾಗಢ, ಡೆಹ್ರಾಡೂನ್ ಜಿಲ್ಲೆಗಳಲ್ಲಿ ಮುಂದಿನ 4 ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ನೇಪಾಳದ ಛಪ್ಲಿ ಪ್ರದೇಶದಲ್ಲಿ ಮೇಘಸ್ಫೋಟ ಉಂಟಾಗಿದ್ದು, ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಹಾಗೆಯೇ ಅಲ್ಲಿ ಮಳೆಯಾದ ಕಾರಣ ಉತ್ತರಾಖಂಡದ ಧಾರ್ಚೂಲಾದಲ್ಲೂ ಹೆಚ್ಚು ಪ್ರಮಾಣದ ಮಳೆ ಸುರಿದಿತ್ತು. ಇನ್ನು ರುದ್ರ ಪ್ರಯಾಗದಲ್ಲಿ ಮಳೆ ಕಡಿಮೆಯಾಗಿದ್ದು, ಭಕ್ತರು ಅಧಿಕ ಪ್ರಮಾಣದಲ್ಲಿ ಆಗಮಿಸುತ್ತಿದ್ದಾರೆ.

ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳದಲ್ಲಿಯೂ ಮುಂದಿನ ನಾಲ್ಕು ದಿನ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ತೆಲಂಗಾಣ, ಕರ್ನಾಟಕ, ತಮಿಳುನಾಡಿನಲ್ಲೂ ವರುಣನ ಆರ್ಭಟ ಇರಲಿದ್ದು, ಭಾರತೀಯ ಹವಾಮಾನ ಇಲಾಖೆಯು ಸೆಪ್ಟೆಂಬರ್ 11ರಿಂದ ನಾಲ್ಕು ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಿಸಿದೆ. ಗುಜರಾತ್‌ನಲ್ಲಿ ಸೆಪ್ಟೆಂಬರ್‌ 13ರವರೆಗೆ ಮಳೆ ಬರಲಿದೆ.

ಕರ್ನಾಟಕದಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರಗಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಸೆಪ್ಟೆಂಬರ್‌ 13ರವರೆಗೆ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕೊಟ್ಟಿಗೆಹಾರ, ಅಂಕೋಲಾ, ಲೋಂಡಾ, ಬನವಾಸಿ, ಭಾಲ್ಕಿ, ಯಲ್ಲಾಪುರ, ಕದ್ರಾ, ಸಿದ್ದಾಪುರ, ಬ್ರಹ್ಮಾವರ, ಭಾಗಮಂಡಲ, ಕೊಲ್ಲೂರು, ವಿಮಾನ ನಿಲ್ದಾಣ, ಔರಾದ್, ಕುಂದಾಪುರ, ಹಳಿಯಾಳ, ಸಿದ್ದಾಪುರ, ಕಾರವಾರ, ಶಿರಾಲಿ, ಪುತ್ತೂರು, ಉಪ್ಪಿನಂಗಡಿ, ರೋಣ, ಕುಮಟಾ, ಕಮ್ಮರಡಿ, ಶೃಂಗೇರಿ, ಕೊಪ್ಪ, ಕಳಸದಲ್ಲಿ ಮಳೆಯಾಗಲಿದೆ.

RELATED ARTICLES

Related Articles

TRENDING ARTICLES