Saturday, May 18, 2024

ರಸ್ತೆ ಗುಂಡಿಗಳು: ನಗರಸಭೆಯ ನಿರ್ಲಕ್ಷ್ಯಕ್ಕೆ ಬೇಸತ್ತ ವಾಹನ ಸವಾರರು

ರಾಯಚೂರು: ಬಿಸಿಲನಾಡು ರಾಯಚೂರು ನಗರದೆಲ್ಲೆಡೆ ರಸ್ತೆಗಳಲ್ಲಿ ಗುಂಡಿಗಳದ್ದೆ ದರ್ಬಾರ್. ತಗ್ಗು ದಿನ್ನೆಗಳಿಂದ ಕೂಡಿದ ರಸ್ತೆಗಳಲ್ಲಿ ಸಂಚರಿಸಲು ನಿತ್ಯವೂ ಜನ ನರಕಯಾತನೆ ಅನುಭವಿಸ್ತಿದ್ದಾರೆ.

ಎತ್ತ ನೋಡಿದ್ರು ತಗ್ಗು ಗುಂಡಿಗಳು.. ರಸ್ತೆ ಮಧ್ಯದ ಗುಂಡಿಗಳಲ್ಲಿ ಮೊಳಕಾಲುದ್ದ ನೀರು. ನಿತ್ಯವೂ ಇಂತಹ ತಗ್ಗು ದಿನ್ನೆಗಳಿಂದ ಕೂಡಿದ ರಸ್ತೆಗಳಲ್ಲಿ ಸಂಚರಿಸುತ್ತಿರುವ ರಾಯಚೂರ ನಗರದ ನಿವಾಸಿಗಳು ನಗರಸಭೆಗೆ ಹಿಡಿಶಾಪ ಹಾಕ್ತಿದ್ದಾರೆ. ನಿತ್ಯವೂ ಬೈಕ್ ಸವಾರರು ಗುಂಡಿ ತುಂಬಿದ ರಸ್ತೆಗಳಲ್ಲೇ ಸಂಚರಿಸುತ್ತಾ, ಬಿದ್ದು ಕೈ ಕಾಲು ಮುರಿಕೊಂಡು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇಷ್ಟಾದ್ರೂ ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಳ್ತಿಲ್ಲ. ಈ ಬಗ್ಗೆ ಅಧಿಕಾರಿಗಳನ್ನ ಕೇಳಿದ್ರೆ, ಆದಷ್ಟು ಬೇಗ ಗುಂಡಿ ಮುಚ್ಚುವ ಕೆಲಸ ಮಾಡಲಾಗುತ್ತದೆ ಅಂತ ಸಬೂಬು ನೀಡ್ತಾರೆ.

ಕೊಂಚ ಮಳೆ ಬಂದ್ರೆ ಸಾಕು ರಾಯಚೂರು ನಗರದ 35 ವಾರ್ಡ್​​​ಗಳಲ್ಲಿನ ಬಹುತೇಕ ರಸ್ತೆಗಳೆಲ್ಲ ಚರಂಡಿಯಾಗಿ ಮಾರ್ಪಡುತ್ತಿವೆ. ಮಳೆ ನೀರು ರಸ್ತೆಗೆ ಬಂದು ತಗ್ಗು ಗುಂಡಿಗಳೆಲ್ಲ ಮುಚ್ಚಿ ಹೋಗಿವೆ. ನೀರು ತುಂಬಿದ ಗುಂಡಿಗಳ ಮಧ್ಯ ಸಂಚರಿಸಲು ವಾಹನ ಸವಾರರು ನಿತ್ಯ ನರಕಯಾತನೆ ಅನುಭವಿಸ್ತಿದ್ದಾರೆ. ಅದರಲ್ಲೂ ಆಟೋದಲ್ಲಿ ಶಾಲೆಗೆ ತೆರಳುವ ಶಾಲಾ ಮಕ್ಕಳಿಗೂ ಸಹ ಸಂಕಟ ಅನುಭವಿಸುವಂತಾಗಿದ್ದು, ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ನಲ್ಲಿ ಶಾಸಕ ಡಾ. ಶಿವರಾಜ ಪಾಟೀಲ್ ಅವರಿಗೂ ಕೂಡ ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದ್ರೂ ನಗರಸಭೆ ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತು, ರಾಯಚೂರು ನಗರದ 35 ವಾರ್ಡ್​​ಗಳಲ್ಲಿ ಕಿತ್ತು ಹೋದ ರಸ್ತೆಗಳ ದುರಸ್ತಿ ಕಾರ್ಯಕ್ಕೆ ಮುಂದಾಗಿ ಜನರ ನರಕೆಯಾತನೆಗೆ ಅಂತ್ಯವಾಡಬೇಕಿದೆ.

ಸಿದ್ದು ಬಿರಾದಾರ್, ಪವರ್​​​ ಟಿವಿ ರಾಯಚೂರು

RELATED ARTICLES

Related Articles

TRENDING ARTICLES