Monday, May 13, 2024

ಸಾಧನಾ ಸಮಾವೇಶ ಅಲ್ಲ, ಬಿಜೆಪಿಯ ಭ್ರಷ್ಟೋತ್ಸವ: ಡಿ.ಕೆ ಶಿವಕುಮಾರ್​​

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಅವರ ರಾಜ್ಯ ಬಿಜೆಪಿ ಸರ್ಕಾರ 1 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್‌, ರಾಜ್ಯ ಸರ್ಕಾರದ ಒಂದು ವರ್ಷದ ಸಾಧನಾ ಜನೋತ್ಸವದ ವಿರುದ್ಧ ಗುಡುಗಿದ್ದಾರೆ. ಕರ್ನಾಟಕ ಸರ್ಕಾರ ಒಂದು ವರ್ಷದ ಸಾಧನಾ ಸಮಾವೇಶ ಮಾಡ್ತಿದೆ. ಅದನ್ನು ನಾವು ಜನೋತ್ಸವ ಅನ್ನಲ್ಲ, ಬಿಜೆಪಿಯ ಭ್ರಷ್ಟೋತ್ಸವ ಎನ್ನುತ್ತೇವೆ ಎಂದರು.

ಬಿಜೆಪಿಯವರು ರಾಜ್ಯದ ಜನತೆಯನ್ನು ಸೆಳೆಯುತ್ತಿದ್ದಾರೆ. ಸರ್ಕಾರ ಬಂದು ನಾಲ್ಕು ವರ್ಷ ಆಯ್ತು. ನಾಲ್ಕು ವರ್ಷದ ಸಾಧನೆಯೇ ನಿಮ್ಮ ಭ್ರಷ್ಟೋತ್ಸವ. ಒಂದು ವರ್ಷದ ಸಾಧನಾ ಸಮಾವೇಶ ಅಲ್ಲ, ಇದು ಬಿಜೆಪಿಯ ಭ್ರಷ್ಟೋತ್ಸವ. ನಿಮ್ಮ ಅಧಿಕಾರ ಬಂದ ದಿನದಿಂದ ಭ್ರಷ್ಟಾಚಾರ ತಾಂಡವವಾಡ್ತಿದೆ. ಬೆಂಗಳೂರು ಹಾಗೂ ರಾಜ್ಯ ಕರೆಪ್ಷನ್ ಕ್ಯಾಪಿಟಲ್ ಅಫ್ ಇಂಡಿಯಾ ಆಗಿದೆ. ಇದು ನಿಮ್ಮ ಸಾಧನೆ ಎಂದು ಡಿಕೆ ಶಿವಕುಮಾರ್ ಟೀಕೆ ಮಾಡಿದರು.

ಎಲ್ಲಾ ಸರ್ಕಾರಿ ನೇಮಕಾತಿಯಲ್ಲೂ ಭ್ರಷ್ಟಾಚಾರ ನಡೆದಿದೆ. ಇದು ರಾಜ್ಯ ಸರ್ಕಾರದ ಸಾಧನೆ. ಹಾಲು, ಮೊಸರಿಗೆ ಜಿಎಸ್‌ಟಿ ಹಾಕಿ ಹೊಸ ಇತಿಹಾಸ ಬರೆದಿದ್ದೀರಿ. ರೈತರು ಸೇರಿದಂತೆ ರಾಜ್ಯಸರ್ಕಾರ ಯಾರಿಗೂ ಸಹಾಯ ಮಾಡಿಲ್ಲ. ಭ್ರಷ್ಟರಿಗೆ ಕ್ಲೀನ್‌ಚಿಟ್‌ ಕೊಡಿಸುವುದರಲ್ಲೇ ಸರ್ಕಾರ ನಿರತವಾಗಿದೆ ಎಂದು ಆಡಳಿತ ಪಕ್ಷವನ್ನು ಆರೋಪಿಸಿದರು.

RELATED ARTICLES

Related Articles

TRENDING ARTICLES