Tuesday, May 21, 2024

ನೀನಾಸಂ ಸತೀಶ್​​ಗೆ ಹೂಮಳೆ; ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್

ಪೆಟ್ರೋಮ್ಯಾಕ್ಸ್​ ಬೆಳಕಲ್ಲಿ ದೀಪ ರಾಜ್ಯಾದ್ಯಂತ ಜೋರಾಗಿ ಉರಿಯುತ್ತಿದೆ. ಚೇಷ್ಟೆ ಜೊತೆಗೆ ಸಾಮಾಜಿಕ ಸಂದೇಶ ಸಾರಿದ ವಿಜಯ್ ​​​ಪ್ರಸಾದ್​​ ನಿರ್ದೇಶನಕ್ಕೆ ಪ್ರೇಕ್ಷಕರು ಮತ್ತೊಮ್ಮೆ ಜೈಕಾರ ಹಾಕಿದ್ದಾರೆ. ಪೋಲಿ ಜೋಕ್ಸ್​​ಗೆ ಹೊಟ್ಟೆ ಹುಣ್ಣಾಗೋವಷ್ಟು ನಕ್ಕಿದ್ದಾರೆ. ರಾಜ್ಯದ ಎಲ್ಲಾ ಥಿಯೇಟರ್​ಗಳಿಗೆ ಲಗ್ಗೆ ಇಡ್ತಿರೋ ಚಿತ್ರತಂಡಕ್ಕೆ ಭರ್ಜರಿ ರೆಸ್ಪಾನ್ಸ್​​ ಸಿಗ್ತಿದೆ.  ಯೆಸ್​​​.. ಪೆಟ್ರೋಮ್ಯಾಕ್ಸ್​​ಗೆ ಮಂಡ್ಯ , ಮೈಸೂರ ಜನರ ರೆಸ್ಪಾನ್ಸ್​ ಹೇಗಿದೆ..?

ಅಭಿನಯ ಚತುರ ಪೆಟ್ರೋಮ್ಯಾಕ್ಸ್ ಬೆಳಕಲ್ಲಿ ಸಿನಿರಸಿಕರ ಹಬ್ಬ

ನೀನಾಸಂ ಸತೀಶ್​​ಗೆ ಹೂಮಳೆ; ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್

ವಿಜಯ್ ಕೊಟ್ಟ ಪೋಲಿ ಪ್ರಸಾದಕ್ಕೆ ಭರ್ಜರಿ ರೆಸ್ಪಾನ್ಸ್..!

ಪೆಟ್ರೋಮ್ಯಾಕ್ಸ್ ಚೇಷ್ಟೆ, ತಲೆಹರಟೆ, ​​ಫಿಲಾಸಫಿಯ ಭರಾಟೆ

ಸಿದ್ಲಿಂಗು, ನೀರ್​ದೋಸೆ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದ ಚಿತ್ರಪ್ರೇಮಿಗಳು ಪೆಟ್ರೋಮ್ಯಾಕ್ಸ್​​ ಸಿನಿಮಾಗಾಗಿ ಕಾತರದಿಂದ ಕಾಯ್ತಾ ಇದ್ದರು. ಇದೀಗ ರಾಜ್ಯಾದ್ಯಂತ ಪೆಟ್ರೋಮ್ಯಾಕ್ಸ್​​ ಬೆಳಕು ಪ್ರಜ್ವಲಿಸುತ್ತಾ ಇದೆ. ಡಬಲ್​ ಮೀನಿಂಗ್​​ ಜೋಕ್ಸ್​​​ಗೂ ಪ್ರೇಕ್ಷಕ ಯೆಸ್​​ ಎಂದಿದ್ದಾನೆ. ನೀನಾಸಂ ಸತೀಶ್​, ಹರಿಪ್ರಿಯಾ ಗ್ಲಾಮರಸ್​ ಕಾಂಬಿನೇಷನ್​​ಗೆ ಚಪ್ಪಾಳೆ ತಟ್ಟಿದ್ದಾನೆ. ಚಿತ್ರದ ಪ್ರಚಾರಕ್ಕಾಗಿ ರಾಜ್ಯದ ಜಿಲ್ಲೆಗಳಿಗೆ ಚಿತ್ರತಂಡ ಪ್ರವಾಸ ಮಾಡ್ತಿದೆ. ಹೋದ ಕಡೆಯೆಲ್ಲಾ ಪೆಟ್ರೋಮ್ಯಾಕ್ಸ್​​ ಟೀಮ್​ಗೆ ಬಹುಪರಾಕ್​ ಅಂತಿದ್ದು, ಬೃಹತ್​​ ಹೂವಿನ ಹಾರಗಳ ಮೂಲಕ ಗ್ರ್ಯಾಂಡ್​ ವೆಲ್ಕಮ್​ ಮಾಡಲಾಗ್ತಿದೆ.

ನಾಟಿ, ಘಾಟಿ ಸಂಭಾಷಣೆಗಳ ಮೂಲಕ ಪೋಲಿತನವನ್ನು ವಿಭಿನ್ನವಾಗಿ ಹೇಳಿ ಬದುಕಿನ ನೈಜತೆಯನ್ನು ಅರ್ಥಮಾಡಿಸುವಲ್ಲಿ ವಿಜಯ್​​ ಪ್ರಸಾದ್​​ ಪ್ರವೀಣರು. ಬದುಕಲ್ಲಿ ಜಿಡ್ಡಿನಂತೆ ಅಂಟಿಕೊಂಡಿರುವ ಅಶ್ಲೀಲತೆಯನ್ನು ಹದವಾಗಿ ಬೆರೆಸಿ ಫ್ಯಾಮಿಲಿ ಸೆಂಟಿಮೆಂಟ್​​​​ ಮೂಲಕ ಕಣ್ಣೀರು ತರಿಸುವ ಪ್ರತಿಭಾನ್ವಿತ ನಿರ್ದೇಶಕ. ಇದೀಗ  ಪೆಟ್ರೊಮ್ಯಾಕ್ಸ್​​ ಟೀಮ್​​ ಮಂಡ್ಯ, ಮೈಸೂರು ಪ್ರವಾಸದಲ್ಲಿದೆ. ಎಲ್ಲಾ ಕಡೆ ಚಿತ್ರರಸಿಕರು ಅದ್ಧೂರಿಯಾಗಿ ವೆಲ್ಕಮ್​ ಮಾಡಿಕೊಳ್ತಿದ್ದಾರೆ. ಸತೀಶ್​​ಗೆ ಬೃಹತ್​​ ಹಾರ ಹಾಕಿ, ಹೂವಿನ ಮಳೆ ಸುರಿಸುತ್ತಿದ್ದಾರೆ.

ಗಂಭೀರ ವಿಷಯಗಳನ್ನು ಸಿಂಪಲ್​ ಆಗಿ ಅರ್ಥ ಮಾಡಿಸುವ ವಿಜಯ್ ಪ್ರಸಾದ್​ ಈ ಸಿನಿಮಾದಲ್ಲೂ ಅದೇ ಖಯಾಲಿಯನ್ನು ಮುಂದುವರೆಸಿದ್ದಾರೆ. ಅವರ ಪೆನ್ನು ನಿರೀಕ್ಷೆಗೂ ಮೀರಿ ಪೋಲಿತನದ ಪರಾಕಾಷ್ಠೆ ಮೆರೆದಿದೆ. ಜೊತೆಗೆ ಅನಾಥರ ಫ್ಯಾಮಿಲಿ ಸೆಂಟಿಮೆಂಟ್​​​​​​ನ್ನು ಮನಮುಟ್ಟುವಂತೆ ತೋರಿಸಿದೆ. ಇದಕ್ಕೆ ಸಿಕ್ಕ ಗೆಲುವೇ ಪ್ರೇಕ್ಷಕರ ಪಾಸಿಟಿವ್​ ರೆಸ್ಪಾನ್ಸ್​​​​. ಮಂಡ್ಯ, ಮೈಸೂರಿನ ಥಿಯೇಟರ್​​​​​ಗಳಿಗೆ ಕಾಲಿಟ್ಟ ತಕ್ಷಣ ಚಿತ್ರರಸಿಕರ ನೂಕು ನುಗ್ಗಲು ಇದಕ್ಕೆ ಸಾಕ್ಷಿಯಾಗಿದೆ. ಇದ್ರ ಜೊತೆಯಲ್ಲಿ ಇಡೀ ಚಿತ್ರತಂಡ ಹೋಟೆಲ್​​​​ನಲ್ಲಿ ನಾನ್​ವೆಜ್​ ಸವಿದು ಡಬಲ್​​​​ ಖುಷಿ ಪಟ್ಟಿದ್ದಾರೆ.

ಅನಾಥಾಶ್ರಮಗಳಲ್ಲಿ ಇರುತ್ತಾರಲ್ಲಾ ಅವರು ಅನಾಥರಲ್ಲ, ಎಲ್ಲರೂ ಇದ್ದು ಯಾರು ಇಲ್ಲದಂತೆ ಒಂಟಿ ಜೀವನ ನಡೆಸುತ್ತಾರಲ್ಲಾ ಅವರು ನಿಜವಾದ ಅನಾಥರು ಎಂಬುದನ್ನು ಈ ಸಿನಿಮಾದಲ್ಲಿ ಜನರ ಹೃದಯ ಕಲಕುವಂತೆ ತೋರಿಸಲಾಗಿದೆ. ಇದೇ ಕಾರಣಕ್ಕೆ ಈ ಸಿನಿಮಾ ಎಲ್ಲರ ಹೃದಯ ತಲುಪಿದೆ. ಸಿನಿಮಾದಲ್ಲಿ  ಸತೀಶ್​​, ಹರಿಪ್ರಿಯಾ, ಕಾರುಣ್ಯಾ ರಾಮ್​ ಕೂಡ  ಅದ್ಭುತವಾಗಿ ನಟಿಸಿದ್ದಾರೆ. ಪಂಚಿಂಗ್ ಮಾತುಗಳು ತುರಿಕೆಯ ಫೀಲ್​ ಕೊಟ್ಟರು ಮಜಾ ಅನುಭವ ನೀಡುತ್ತವೆ.

ಕಾಮನ್​ ಡೈಲಾಗ್​ಗಳ ಮೂಲಕ ಬೋಲ್ಡ್​ ಕಂಟೆಂಟ್​​ನ ಭಾವನಾತ್ಮಕವಾಗಿ ಕಟ್ಟಿಕೊಟ್ಟಿರುವ ನಿರ್ದೇಶಕ ವಿಜಯ್​ಪ್ರಸಾದ್​ ಸಕ್ಸಸ್​ ಕಂಡಿದ್ದಾರೆ. ಸತೀಶ್​ ನೀನಾಸಂಗೂ ಈ ಸಿನಿಮಾ ಗ್ರ್ಯಾಂಡ್​ ಸಕ್ಸಸ್​​ ತಂದುಕೊಟ್ಟಿದೆ. ಅನೂಪ್​ ಸೀಳಿನ್​ ಸಂಗೀತ ಸಂಯೋಜನೆಗೆ ಚಿತ್ರರಸಿಕರು ಕೂಡ ದಿಲ್​​​​ಖುಷ್​ ಆಗಿದ್ದಾರೆ. ಹೋದಲ್ಲಿ, ಬಂದಲ್ಲಿ ಒಳ್ಳೆ ರೆಸ್ಪಾನ್ಸ್ ಸಿಗ್ತಾ ಇರೋದ್ರಿಂದ ಪೆಟ್ರೋಮ್ಯಾಕ್ಸ್​​ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದೆ.

ರಾಕೇಶ್​ ಅರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES