Friday, May 17, 2024

‘ಹಿಂದೂಗಳು ಗುಲಾಮರಂತೆ ವರ್ತಿಸದೇ ಎಚ್ಚೆತ್ತುಕೊಳ್ಳುವ‌ ಕಾಲ ಬಂದಿದೆ’

ವಿಜಯನಗರ: ಹಿಂದೂಗಳು ಗುಲಾಮರಂತೆ ವರ್ತಿಸದೇ ಎಚ್ಚೆತ್ತುಕೊಳ್ಳುವ‌ ಕಾಲ ಬಂದಿದೆ ಎಂದು ಶ್ರೀರಾಮಸೇನರ ಹೊಸಪೇಟೆ ತಾಲೂಕು ಅಧ್ಯಕ್ಷ ಜಗದೀಶ್ ಕಾಮಟಗಿ ಹೇಳಿದ್ದಾರೆ.

ರಾಜಸ್ಥಾನದ ಉದಯಪುರದಲ್ಲಿ ಕನ್ಹಯ್ಯ ಲಾಲ್ ಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸುದ್ದಿಗೋಷ್ಠಿಯನ್ನು ಏರ್ಪಡಿಸಿ ಮಾತನಾಡಿದ ಅವರು, ಕೊಲೆ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗಬೇಕು. ಇದೇ ಶನಿವಾರ ( 02/07/2022) ವಿಜಯನಗರ ಜಿಲ್ಲೆಯಲ್ಲಿ ಸ್ವಯಂ ಪ್ರೇರಿತ ಬಂದ್​​ಗೆ ಕರೆ ನೀಡಿದ್ದಾರೆ. ಹಾಗೂ ವಿವಿಧ ಸಂಘಟನೆಗಳನ್ನು ಸಂಪರ್ಕ ಮಾಡುತ್ತಿದ್ದೇವೆ. ಸ್ವಯಂ ಪ್ರೇರಿತ ಬಂದ್​​ಗೆ ಬೆಂಬಲ ಕೇಳಿದ್ದೇವೆ. ಆಂಜನೇಯ ದೇಗುಲದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮಾಡುತ್ತೇವೆ ಎಂದರು.

ನಿರಂತರವಾಗಿ ಹಿಂದೂಗಳ ಕೊಲೆ ನಡೆಯುತ್ತಲೇ ಇದೆ. ಯಾವುದೋ ಊರಲ್ಲಿ ಹತ್ಯೆ ಆಗಿದೆ ಎಂದು ಸುಮ್ಮನೆ ಕೂರಬಾರದು. ಮುಂದೊಂದು ದಿನ ನಮ್ಮ ಮನೆಯಲ್ಲಿಯೇ ನಡೆಯಬಹುದು. ರಾಜಕಾರಣಿಗಳು ವೋಟ್ ಬ್ಯಾಂಕಿಗಾಗಿ ಕೆಲಸ ಮಾಡುತ್ತಿದ್ದಾರೆ. ಕೊಲೆಗಡುಕರಿಗೆ ನಿರ್ದಾಕ್ಷಿಣ್ಯ ಕ್ರಮ ಅಥವಾ ಗಲ್ಲು ಶಿಕ್ಷೆ ಆಗಲೇಬೇಕು. 36 ಮಂದಿ ಹಿಂದೂಗಳ ಕೊಲೆ ನಡೆದಿದೆ. ಕೊಲೆಯಾದ ಕನ್ಹಯ್ಯ ಲಾಲ್ ಯಾವುದೇ ಸಂಘಟನೆಗೆ ಸೇರಿದವರಲ್ಲ. ಆದ್ರೂ ದೇಶದಲ್ಲಿ ಅಮಾಯಕರ ಕೊಲೆ ನಡೆಯುತ್ತಿದೆ. ಹೀಗಾಗಿ ಸ್ವಯಂ ಪ್ರೇರಿತ ಬಂದ್ ಬಳಿಕ ರಾಷ್ಟ್ರಪತಿಗಳಿಗೆ ಮನವಿ ನೀಡುತ್ತೇವೆ ಎಂದು ತಿಳಿಸಿದರು.

ತಿಂಗಳುಗಟ್ಟಲೆ ಪ್ರಕರಣ ತನಿಖೆ ನಡೆಯಲು ಬಿಡಬೇಡಿ. ಕೊಲೆ ಮಾಡಿದವರೇ ನಾವೇ ಕೊಲೆ ಮಾಡಿದ್ದೇವೆ ಅಂತ ಒಪ್ಪಿಕೊಂಡಿದ್ದಾರೆ. ಇನ್ನು ಪ್ರತಿಭಟನೆ ದಿನ ಶ್ರೀರಾಮಸೇನೆ ಪ್ರ. ಕಾರ್ಯದರ್ಶಿ ಗಂಗಾಧರ್ ಕುಲಕರ್ಣಿ, ವಿಭಾಗೀಯ ಅಧ್ಯಕ್ಷ ಸಂಜೀವ್ ಮರಡಿ ಭಾಗಿಯಾಗುತ್ತಾರೆ ಎಂದು ಮಾಹಿತಿ ತಿಳಿಸಿದರು.

RELATED ARTICLES

Related Articles

TRENDING ARTICLES