Monday, May 13, 2024

ಸಂಗೀತ ಸಂಚಾರಿ ಕೆಕೆಗೆ ಭಾವಪೂರ್ಣ ವಿದಾಯ

ಆತನ ಸ್ವರ ಮಾಧುರ್ಯಕ್ಕೆ ಜನಸಾಗರವೇ ತಲೆದೂಗುತ್ತಿತ್ತು. ಸಂಗೀತ ಸಾಗರದಲ್ಲಿ ತೇಲಿ, ಮೈಮರೆಯುತ್ತಿತ್ತು. ಆದ್ರೆ ವಿಧಿಯಾಟದ ಮುಂದೆ ಕೋಟ್ಯಂತರ ಅಭಿಮಾನಿಗಳ ನೆಚ್ಚಿನ ಸ್ವರ ನಿಂತು ಹೋಗಿದೆ. ಯೆಸ್​​.. ಕೆಕೆ ಎಂದೇ  ಖ್ಯಾತಿಯಾಗಿದ್ದ ಬಾಲಿವುಡ್​ ಸೂಪರ್​ ಸಿಂಗರ್​ ಕೃಷ್ಣಕುಮಾರ್​ ಕುನ್ನತ್​​ ಹೃದಯಾಘಾತದಿಂದ ಇನ್ನಿಲ್ಲವಾಗಿದ್ದಾರೆ. ಈ ಸುದ್ದಿ ಕೇಳಿ ಇಡೀ ಚಿತ್ರರಂಗವೇ ಶೋಕಸಾಗರದಲ್ಲಿ ಮುಳುಗಿದೆ.

  • ಸಂಗೀತ ಸಂಚಾರಿ ಕೆಕೆಗೆ ಭಾವಪೂರ್ಣ ವಿದಾಯ
  • ಉಸಿರು ಚೆಲ್ಲುವ ಮುನ್ನವೂ ಗಾನಸುಧೆಯ ಹೊಳೆ

ಕೋಟಿ ಕೋಟಿ ಅಭಿಮಾನಿ ಬಳಗವನ್ನು ತಮ್ಮ ಸುಮಧುರ ಕಂಠದಿಂದ ಮಂತ್ರಮುಗ್ಧಗೊಳಿಸುತ್ತಿದ್ದ ಗಾಯಕ ಕೆಕೆ. ಆದ್ರೆ, 53 ರ ಹರೆಯದಲ್ಲೇ ಹೃದಯಾಘಾತದಿಂದ ಕೆಕೆ ನಮ್ಮನ್ನೆಲ್ಲಾ ಅಗಲಿ ಬಾರದ ಲೋಕಕ್ಕೆ ಹೋಗಿದ್ದಾರೆ. ಇವ್ರ ಸಾವಿನ ಸುದ್ದಿ ಕೇಳಿ ಸುದ್ದಿ ಕೇಳಿ ಚಿತ್ರರಂಗವೇ ಅರೆಕ್ಷಣ ಬೆಚ್ಚಿ ಬಿದ್ದಿದೆ. ಶಾಕ್​​ಗೆ ಒಳಗಾಗಿದೆ. ಕೆಕೆ ನೆನೆದು ಕಂಬಿನಿ ಮಿಡಿಯುತ್ತಿದ್ದಾರೆ. ಅವರ ನೆಚ್ಚಿನ ಹಾಡುಗಳನ್ನು ಮೆಲುಕು ಹಾಕುತ್ತಾ ಕಣ್ಣೀರಿಡುತ್ತಿದ್ದಾರೆ.

ಬೀದಿ ಬೀದಿಗಳಲ್ಲಿ ಕೆಕೆ ಸ್ಟೇಜ್​ ಲೈವ್​ ಶೋ ಕೊಡ್ತಿದ್ರೆ, ಅಭಿಮಾನಿಗಳು  ಹುಚ್ಚೆದ್ದು ಕುಣಿಯುತಿದ್ರು. ಸಂಗೀತ ಲೋಕದ ದಂತಕಥೆ ಕೆಕೆ, ಕೊನೆಗೂ ಸಂಗೀತ ಕಾರ್ಯಕ್ರಮದಲ್ಲೇ ತಮ್ಮ ಉಸಿರು ಚೆಲ್ಲಿದ್ದಾರೆ. ಕೊಲ್ಕತ್ತಾದ ನಜ್ರುಲ್​​ ಮಂಚಾ ಆಡಿಟೋರಿಯಂನಲ್ಲಿ  ಲೈವ್​ ಶೋ ಮುಗಿಸಿ ಹೋಟೇಲ್​ಗೆ ತೆರಳುವಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲು ಮಾಡಿದ್ರು ದುರದೃಷ್ಠವಶಾತ್​​ ಕೆಕೆ ಅವರನ್ನು ಉಳಿಸಿಕೊಳ್ಳಲು ಸಾದ್ಯವಾಗಿಲ್ಲ. ಎಲ್ಲ ವಯೋಮಾನದವರನ್ನು ಕುಂತಲ್ಲೇ ಕುಣಿಸುತ್ತಿದ್ದ ಸ್ವರ ಸಾಮ್ರಾಟನ ಜರ್ನಿಗೆ ಫುಲ್​ ಸ್ಟಾಪ್​ ಬಿದ್ದಿದೆ.

ಅದ್ಭುತ ಹಾಡುಗಳ ಮೂಲಕ ಹೆಸರು ಮಾಡಿದ್ದ ಕೆಕೆ ರೋಚಕ ಬದುಕನ್ನು ಸ್ಮರಿಸುವುದೇ ಹೆಮ್ಮೆಯ ವಿಚಾರ. ಮೆಲೋಡಿ , ಲವ್​​ ಹೀಗೆ ಎಲ್ಲಾ ಹಾಡುಗಳ ಮೂಲಕ ಮರುಳು ಮಾಡೋ ಜಾದುಗಾರ ಕೆಕೆ ಇಂದು ನಮ್ಮೊಂದಿಗಿಲ್ಲ. ಕನ್ನಡದ ಕೆಲವು ಸಿನಿಮಾಗಳಿಗೂ ಕೆಕೆ ದನಿಯಾಗಿದ್ದಾರೆ. ನಟ ಆದಿತ್ಯ ನಟಿಸಿರೋ ಲವ್​ ಸಿನಿಮಾದ ‘ಏಳು ಬಣ್ಣದ ಪ್ರೀತಿ ಇದು’ ಹಾಡಿಗೆ ಕೆಕೆ ದನಿಗೂಡಿಸಿದ್ದಾರೆ. ಪರಿಚಯ ಚಿತ್ರದ ‘ನಡೆದಾಡುವ ಕಾಮನ ಬಿಲ್ಲು’ ಸಾಂಗ್​ ಕೇಳಿದವ್ರು, ನಿಜಕ್ಕೂ ಇದು ಇವರ ದನಿಯಾ ಅನ್ನಿಸುತ್ತೆ.

ದಿಗಂತ್​, ಐಂದ್ರಿತಾ ಅಭಿನಯದ ಮನಸಾರೆ ಚಿತ್ರದ ಕಣ್ಣ ಹನಿಯೊಂದಿಗೆ ಹಾಡು ಎಲ್ಲರ ಮನಸೂರೆ ಮಾಡಿತ್ತು. ಪದೇ ಪದೇ ರಿಪೀಡ್​ ಮೋಡ್​ನಲ್ಲಿ ಕೇಳ್ಬೇಕು ಅನ್ನಿಸೋ ಹಾಡುಗಳಿಗೆ ಕೆಕೆ ದನಿಯಾಗಿದ್ದಾರೆ. ಹುಬ್ಬಳ್ಳಿಯ ಶೆಹರಾದಾದ ಹಾಡಂತೂ ಪಡ್ಡೆ ಹೈಕಳ ಮೈಕೈ ಕುಣಿಸಿಬಿಡುತ್ತೆ.  ಇಂತಹ ಮಹಾನ್​ ಚೇತನ ಇಷ್ಟು ಚಿಕ್ಕ ವಯಸ್ಸಿಗೆ ಅಗಲಿ ಹೋದದ್ದು ಮಾತ್ರ ಅರಗಿಸಿಕೊಳ್ಳೋಕೆ ಕಷ್ಟಸಾಧ್ಯ.

ಹಿಂದಿ, ತೆಲುಗು,  ಕನ್ನಡ, ಮಲಯಾಳಂ, ತಮಿಳು ಭಾಷೆಗಳಲ್ಲಿ 800ಕ್ಕೂ ಅಧಿಕ ಹಾಡುಗಳನ್ನು ಹಾಡಿರುವ ಬಹುಮುಖ ಪ್ರತಿಭೆಗೆ ಸಾಕಷ್ಟು ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ಸಂಗೀತವನ್ನೇ ಉಸಿರಾಗಿಸಿಕೊಂಡಿದ್ದ ಅಧ್ಬುತ ಕಲಾವಿದನನ್ನು ಕಳೆದುಕೊಂಡಿದ್ದು ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಠ. ನಿಮ್ಮ ಹಾಡುಗಳು ಯುಗ ಯುಗಗಳೆ ಕಳೆದರೂ ಸದಾ ಜೀವಂತ. ಎನಿವೇ ಮತ್ತೆ ಹುಟ್ಟಿ ಬನ್ನಿ ಕೆಕೆ.

ರಾಕೇಶ್​​​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES