Friday, May 17, 2024

ಅಂಬರೀಶ್ ಹುಟ್ಟುಹಬ್ಬದಂದು ಕಾಳಿ ಪೋಸ್ಟರ್ ಲಾಂಚ್

ಸರಳತೆಯ ಸಾಮ್ರಾಟ, ಅಭಿಮಾನಿಗಳ ಆರಾಧ್ಯ ದೈವ, ಯುವಕರ ಪಾಲಿನ ಯುವರತ್ನ, ಅಪ್ಪು ಇಲ್ಲದೆ ಏಳು ತಿಂಗಳು ಕಳೆದಿದೆ. ಅಭಿಮಾನಿಗಳು ಅವರನ್ನ ನೆನೆಯದ ದಿನವಿಲ್ಲ. ಅಪ್ಪು ಸಮಾಧಿಗೆ ಜನ ಬಾರದ ದಿನವೂ ಇಲ್ಲ. ಕಂಠೀರವ ಸ್ಟುಡಿಯೋಗೆ ಪುನೀತ್ ರಾಜ್‌ಕುಮಾರ್ ಕುಟುಂಬಸ್ಥರು ಆಗಮಿಸಿ ಅಪ್ಪು ಪುಣ್ಯಭೂಮಿಗೆ ಪೂಜೆ ಸಲ್ಲಿಸಿದರು.

ಒಂದು ಕಡೆ ಅಪ್ಪು ಪುಣ್ಯಸ್ಮರಣೆ. ಮತ್ತೊಂದು ಕಡೆ ಅಂಬಿ ಹುಟ್ಟುಹಬ್ಬದ ಸಂಭ್ರಮದಲ್ಲಿ ಅವರ ಅಭಿಮಾನಿಗಳು. ವಿಧಿಯ ಆಟ ನೋಡಿ ಅಕ್ಕಪಕ್ಕದ ಪುಣ್ಯ ಭೂಮಿಯಲ್ಲಿ ಇಬ್ಬರೂ ದಿಗ್ಗಜರ ಸಂಸ್ಮರಣೆ. ರೆಬಲ್ ಸ್ಟಾರ್ ಅಂಬರೀಶ್ ಹುಟ್ಟಿ ಭಾನುವಾರಕ್ಕೆ 70 ವರ್ಷ. ಅವರು ಇಂದು ನಮ್ಮೊಂದಿಗೆ ಇಲ್ಲವಾದರೂ, ಅವರ ಹೆಸರಿನಲ್ಲಿ ಸಾಕಷ್ಟು ಕೆಲಸಗಳನ್ನು ಅಂಬಿ ಕುಟುಂಬ ಮತ್ತು ಅವರ ಅಭಿಮಾನಿಗಳು ಮಾಡುತ್ತಿದ್ದಾರೆ.

ಬೆಳಗ್ಗೆ ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಅವರ ಸಮಾಧಿಗೆ ಸುಮಲತಾ ಅಂಬರಿಶ್, ಪುತ್ರ ಅಭಿಶೇಕ್, ದೊಡಣ್ಣ, ರಾಕ್ಲೈನ್ ವೆಂಕಟೇಶ್ ಆಗಮಿಸಿ ಪೂಜೆ ಸಲ್ಲಿಸಿದ್ರು. ನಂತರ ಸುಮಲತಾ ತಮ್ಮ ಅಮೃತ ಹಸ್ತದಿಂದ ಸಾರ್ವಜನಿಕರಿಗೆ ಅನ್ನಧಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು. ಜೊತೆಗೆ ಅಂಬರೀಶ್ ಸಿನಿ ಪಯಣದ 50ನೇ ವರ್ಷದ ಸಂಭ್ರಮ ಆಚರಣೆ ಪ್ರಯುಕ್ತ ಅಂಬಿ ಭಾವಚಿತ್ರದ ಬೆಳ್ಳಿ ನಾಣ್ಯವನ್ನು ಸುಮಲತಾ ಬಿಡುಗಡೆ ಮಾಡಿದ್ರು.

ಜೂನಿಯರ್ ಯಂಗ್ ರೆಬಲ್ ಸ್ಟಾರ್ ಅಭಿಶೇಕ್ ಅಂಬರೀಶ್ ಸಹ ಆಗಮಿಸಿದ್ದು, ತಂದೆಯ ಸಮಾಧಿಗೆ ಪೂಜೆ ಸಲ್ಲಿಸಿ ಅಭಿಮಾನಿಗಳು ತಯಾರಿ ಮಾಡಿಸಿದ್ದ 70 ಕೆಜಿ ಕೇಕ್ ಕಟ್ ಮಾಡಿ ತಮ್ಮ ನೂತನ ಚಿತ್ರ ಕಾಳಿ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಲಾಂಚ್ ಆಗೋದರ ಮಾಹಿತಿ ಹಂಚಿಕೊಂಡಿದ್ದಾರೆ.

ಇನ್ನೂ ಅಂಬಿ ಅಭಿಮಾನಿಗಳು ರಕ್ತದಾನ ಶಿಬಿರ, ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ, ಅನ್ನದಾನ, ಆಟೋ ರ್ಯಾಲಿ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಒಟ್ಟಾರೆ ಮಂಡ್ಯದ ಗಂಡು ಅಂಬಿ ಹುಟ್ಟುಹಬ್ಬವನ್ನ ಅವರ ಅಭಿಮಾನಿಗಳು ಸಂಭ್ರಮಿಸಿದ್ರೆ, ಇತ್ತ ಪುನೀತ್ ಅಭಿಮಾನಿಗಳು ಅಪ್ಪು ಹೆಸರಲ್ಲಿ ಹೂಗುಚ್ಛ ಹಿಡಿದು ಸಮಾಧಿಗೆ ಅರ್ಪಿಸಿ ನೆನಪಿನಂಗಳಕ್ಕೆ ಜಾರಿದ್ರು.

RELATED ARTICLES

Related Articles

TRENDING ARTICLES