Saturday, May 18, 2024

ಬೆಂಗಳೂರನ್ನು ಹೈರಾಣಾಗಿಸಿದ ಗಾಳಿ, ಮಳೆ..!

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಸುರಿದ ಅಕಾಲಿಕ ಮಳೆಗೆ ಸುಮಾರು ನಾನೂರಕ್ಕೂ ಹೆಚ್ಚು ಮನೆಗಳಿಗಳು ನೀರು ಪಾಲಾಗಿದ್ದವು. ದಿನ ಬಿರುಗಾಳಿ ಸಮೇತ ಜೋರು ಮಳೆಯಾಗ್ತಿದ್ದು, ನಿತ್ಯ 20ಕ್ಕೂ ಹೆಚ್ಚು ಮರಗಿಡಗಳು ನೆಲಕ್ಕುರುಳುತ್ತಿವೆ. ಇದು ಪಾಲಿಕೆಗೆ ತಲೆನೋವು ತರಿಸಿದೆ.

ಇನ್ನು ರಾತ್ರಿ ಸುರಿದ ಧಾರಾಕಾರ ಮಳೆಗೆ HSR ಲೇ ಔಟ್‌ನಲ್ಲಿ ಹತ್ತಾರು ಮರಗಳು ಧರೆಗುರುಳಿದ್ದು,ಜೊತೆಗೆ ಮಾರ್ಚ್ 1ರಂದು ಲೋಕಾರ್ಪಣೆ ಮಾಡಿದ್ದ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣ ನೆಲಕ್ಕುರುಳಿದೆ. ಇದ್ರಿಂದ ಕಳಪೆ ಕಾಮಗಾರಿಗೆ ಕ್ರೀಡಾಂಗಣ ಬಲಿಯಾಯ್ತಾ ಅನ್ನೋ ಅನುಮಾನ ಕಾಡ್ತಿದ್ದು, ಶಾಸಕ ಸತೀಶ್ ರೆಡ್ಡಿ ಮಳೆಹಾನಿ ಸ್ಥಳಗಳನ್ನು ಪರಿಶೀಲಿಸಿದರು. ಇದೇ ವಿಚಾರಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪ್ರತಿಕ್ರಿಯಿಸಿದ್ದು, ಮಳೆ ಗಾಳಿಯಿಂದಾಗಿ ಕ್ರೀಡಾಂಗಣ ಬಿದ್ದಿದೆ. ಗುತ್ತಿಗೆದಾರರೇ ಅದನ್ನ ಮರು ನಿರ್ಮಾಣ ಮಾಡಬೇಕಿದೆ.ಗುತ್ತಿಗೆದಾರ ಯಾರು ಎಂದು ಇನ್ನೂ ಗೊತ್ತಿಲ್ಲ. ಈ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕಲಾಗುತ್ತಿದೆ. ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಇನ್ನು ಈ ದುರ್ಘಟನೆಗಳು ಒಂದು ಕಡೆಯಾದ್ರೆ ಇನ್ನೂ ಐದು ದಿನಗಳ ಕಾಲ ಸೈಕ್ಲೋನ್ ಎಫೆಕ್ಟ್ ಹೊಡೆಯಲಿದೆ ಅಂತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಒಡಿಶಾ ಮತ್ತು ಆಂಧ್ರ ಪ್ರದೇಶದಲ್ಲಿ ಈಗಾಗಲೇ ಸೈಕ್ಲೋನ್ ಅಬ್ಬರ ಶುರುವಾಗಿದ್ದು, ಬೆಂಗಳೂರಿಗೂ ಬಿಸಿ ತಟ್ಟಲಿದೆ.ಅಲ್ಲದೆ, ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲೂ ವಾತಾವರಣ ಏರುಪೇರಾಗಲಿದ್ದು, ಜೋರು ಮಳೆಯಾಗೋ ಮುನ್ಸೂಚನೆ ಸಿಕ್ಕಿದೆ.

ಒಂದು ಕಡೆ ಬಿಸಿಲಿನ ಬೇಗೆಯಲ್ಲಿದ್ದ ಜನರಿಗೆ ಮಳೆ ತಂಪೆರೆದರೆ, ಮತ್ತೊಂದು ಕಡೆ ಧಾರಾಕಾರ ಮಳೆಗೆ ಹಲವು ಅನಾಹುತಗಳು ಕೂಡಾ ನಡೆಯುತ್ತಿವೆ. ಇದ್ರಿಂದ ಪಾಲಿಕೆ ಕೂಡ ಮಳೆಗಾಲದ ಕಟ್ಟೆಚ್ಚರದ ಜೊತೆಗೆ ಸಾರ್ವಜನಿಕರು ಕೂಡ ಎಚ್ಚರಿಕೆ ವಹಿಸೋದು ಒಳ್ಳೆಯದು.

RELATED ARTICLES

Related Articles

TRENDING ARTICLES