Friday, May 17, 2024

ಜನರು ಕಷ್ಟಪಡುವುದನ್ನು ಸರ್ಕಾರ ನೋಡಿ ಆನಂದಿಸುತ್ತಿದೆ : ಯು.ಟಿ. ಖಾದರ್

ಶಿವಮೊಗ್ಗ : ಸರ್ಕಾರ ಮೌನವಾಗಿದ್ದುಕೊಂಡು, ಜನರು ಕಷ್ಟಪಡುತ್ತಿರುವುದನ್ನು ಆನಂದಿಸುತ್ತಿದೆ ಎಂದು ಶಿವಮೊಗ್ಗದಲ್ಲಿ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಬಿಜೆಪಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು ಬಿಜೆಪಿ ಸರ್ಕಾರವನ್ನು ಜನರು ಕ್ಷಮಿಸುವುದಿಲ್ಲ. ಕೋಮುವಾದಿಗಳಿಂದ ಸೃಷ್ಟಿಸುವ ವಿವಾದವನ್ನು ಬಗೆಹರಿಸುವ ಬದಲು, ಮತ್ತಷ್ಟು ಗೊಂದಲ ಸೃಷ್ಟಿಸುತ್ತಿದೆ. ಶೇ 95 ರಷ್ಟು ಎಲ್ಲಾ ಧರ್ಮದವರು ಪ್ರೀತಿ ವಿಶ್ವಾಸದಿಂದ ಇದ್ದಾರೆ. ಕೆಲವು ಕಡೆಗಳಲ್ಲಿ ಅವರ ಸ್ವಾರ್ಥಕೋಸ್ಕರ ಇನ್ನಿತರ ವಿಚಾರ ಇಟ್ಟುಕೊಂಡು, ವೈಮನಸ್ಸು ಹುಟ್ಟಿಸುವಂತಹ ಹೇಳಿಕೆಗಳನ್ನುನೀಡುತ್ತಿದ್ದಾರೆ. ಹಾಗು ವೈಮನಸ್ಸು ಹುಟ್ಟಿಸುವ ರೀತಿಯ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದಾರೆ. ಇಂತಹವರ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ಇನ್ನು ಎಲ್ಲರೂ, ಎಲ್ಲರ ಜೊತೆ ವ್ಯಾಪಾರ ಮಾಡಿಕೊಳ್ಳಲಿ, ವ್ಯಾಪಾರ ಯಾರ ಜೊತೆ ಮಾಡಬೇಕೆಂಬುದು, ಗ್ರಾಹಕರಿಗೆ ವರ್ತಕರಿಗೆ ಬಿಟ್ಟ ವಿಚಾರ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಮಾಡುವ ವಿಚಾರವಲ್ಲ. ಜನರು ಇಂದು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಎಲ್ಲಾ ವಸ್ತುಗಳ ಬೆಲೆ ಹೆಚ್ಚಾಗಿದೆ. ಜನರು ಒಂದು ಬಿಸ್ಕೆಟ್ ಕೊಳ್ಳಲು ಕೂಡ ಯೋಚಿಸುವ ಪರಿಸ್ಥಿತಿ ಇದೆ. ಇದರ ಬಗ್ಗೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದರು.

ಅಲ್ಲದೇ ಪ್ರಸ್ತುತ ಗ್ಯಾಸ್ ಸಿಲಿಂಡರ್ ಬೆಲೆ ಕೂಡ ಹೆಚ್ಚಾಗಿದೆ. ಮಹಿಳೆಯರು ಸಮಾಧಾನದಿಂದ ಅಡುಗೆ ಮಾಡುವ ಪರಿಸ್ಥಿತಿಯಲ್ಲಿ ಇಲ್ಲ. ಹೊಟೇಲ್​​ನಲ್ಲಿ ಕಾಫಿ ಕುಡಿಯಲು ಕೂಡ ಯೋಚಿಸಬೇಕಾದ ಸ್ಥಿತಿಯಲ್ಲಿದ್ದಾರೆ, ಇದರ ಬಗ್ಗೆ ಸರ್ಕಾರ ಚರ್ಚಿಸಬೇಕಿದೆ. ಅದನ್ನು ಬಿಟ್ಟು ಜನರು ಸಂಕಷ್ಟಪಡುವುದನ್ನು ಸರ್ಕಾರ, ನೋಡಿ ಆನಂದಿಸುತ್ತಿದೆ, ಇದನ್ನು ಎಂದಿಗೂ ಜನತೆ ಕ್ಷಮಿಸುವುದಿಲ್ಲ ಎಂದು ಯು.ಟಿ. ಖಾದರ್ ಕಿಡಿಕಾರಿದ್ದಾರೆ.

RELATED ARTICLES

Related Articles

TRENDING ARTICLES