Friday, May 17, 2024

ಸಿದ್ದರಾಮಯ್ಯ ಬಂದು ಹುಲಿ ಆಗಿದ್ದ ನನ್ನ ಇಲಿ ಮಾಡ್ಯಾರ’

ಬಾದಾಮಿ : ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನಿಲ್ ಗೌಡ ಪಾಟೀಲ ಪ್ರಚಾರ ಸಭೆಯಲ್ಲಿ ಸಿದ್ದರಾಮಯ್ಯ ಎದುರೇ ಚಿಮ್ಮನಕಟ್ಟಿ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ. ಚಿಮ್ಮನಕಟ್ಟಿ ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರಿಗಾಗಿ ಬಾದಾಮಿ ಕ್ಷೇತ್ರ ಬಿಟ್ಟುಕೊಟ್ಟಿದ್ದರು. ಈ ಬಾರಿ ಮತ್ತೊಮ್ಮೆ ಅಲ್ಲಿಯೇ ಸ್ಪರ್ಧಿಸುವುದಾಗಿ ಸಿದ್ದರಾಮಯ್ಯ ನೀಡಿದ್ದ ಹೇಳಿಕೆಗೆ ಭಾಷಣದಲ್ಲಿ ವಿರೋಧ ವ್ಯಕ್ತಪಡಿಸಿದರು.
ಒಂದೆಡೆ ಕ್ಷೇತ್ರದ ಸಾರ್ವಜನಿಕರ ಅಹವಾಲು ಸ್ವಿಕರಿಸುತ್ತಿರುವ ಕ್ಷೇತ್ರದ ಶಾಸಕ. ಮತ್ತೊಂದೆಡೆ ಕಾಂಗ್ರೆಸ್‌ನ ಪರಿಷತ್ ಅಭ್ಯರ್ಥಿ ಪರ ಮತಯಾಚನೆ ಸಮಾವೇಶಕ್ಕೆ ಚಾಲನೆ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ.

ಬಾದಾಮಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಪರಿಷತ್‌ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಗೌಡ ಪಾಟೀಲ್ ಪರ ಮತಯಾಚನೆಗೆ ಮುಂದಾಗಬೇಕಿದ್ದ ಸಿದ್ದರಾಮಯ್ಯಗೆ ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಶಾಕ್ ನೀಡಿದ್ದಾರೆ. ವರುಣಾ ಬಿಟ್ಟು ಬದಾಮಿಗೆ ಯಾಕೆ ಬಂದ್ರಿ ಎಂದು ವೇದಿಕೆಯಲ್ಲೇ ಪ್ರಶ್ನಿಸಿದ್ರು ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ.

ಚಿಮ್ಮನಕಟ್ಟಿ ಮಾತನಾಡುತ್ತಲೇ ಉಭಯ ಬೆಂಬಲಿಗರಲ್ಲಿ ಅಸಮಾಧಾನ‌ ಉಂಟಾಗಿ ಗೊಂದಲ ಸೃಷ್ಠಿಯಾಯಿತು. ಸಿದ್ದರಾಮಯ್ಯಗೆ ಕ್ಷೇತ್ರ ತ್ಯಾಗ ಮಾಡಿದ್ದು ನಾನು. ಅಭಿಮಾನಿಗಳ ಕೂಗಿಗೆ ಭಾವುಕರಾದ ಚಿಮ್ಮನಕಟ್ಟಿ, ನಾನು ಹುಲಿಯಾನೇ, ಆದ್ರೆ ಈಗ ಇಲಿ ಆಗಿದ್ದೇನೆ. ನೀವು ಮಾಡಿದ್ರೆ ಹುಲಿನೂ ಆಗ್ತೀನಿ. ಮಂತ್ರಿನೂ ಆಗ್ತೀನಿ, ಮುಖ್ಯಮಂತ್ರಿನೂ ಆಗ್ತೀನಿ. ನಿಮ್ಮಿಂದ ಎಲ್ಲ ಆಗುತ್ತೆ ಎಂದು ಸಿದ್ದು ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ರು.

ಬಾದಾಮಿ ಕ್ಷೇತ್ರ ಕಾಂಗ್ರೆಸ್ ಗ್ರಾಮ ಪಂಚಾಯತಿ ಸದಸ್ಯರೊಂದಿಗೆ ಕುಷಲೋಪರಿ ಮಾತನಾಡುತ್ತಾ ಕಾಂಗ್ರೆಸ್ ಪಕ್ಷದ ಪರಿಷತ್ ಅಭ್ಯರ್ಥಿ ಗೆಲ್ಲಿಸುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಕೈ ಸದಸ್ಯರಿಗೆ ಸೂಚನೆ ನೀಡಿದ್ರು. ಕಾಂಗ್ರೆಸ್ ಪ್ರಚಾರ ಸಭೆಗೂ ಮುನ್ನ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು. ಅದ್ರಲ್ಲೂ ಮಾಜಿ ಸಿಎಂ ಸಿದ್ದರಾಮಯ್ಯ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಗುಡುಗಿದ್ರು. ನಾನು ಮುಂದಿನ ಚುನಾವಣೆಗೆ ಈಶ್ವರಪ್ಪ ಕೇಳಿ ನಿಲ್ಲಬೇಕಾ? ಅವನು ಯಾರು ಎಂದು ವಾಗ್ದಾಳಿ ನಡೆಸಿದ್ದಾರೆ.

ಒಟ್ಟಿನಲ್ಲಿ, ಪರಿಷತ್‌ ಚುನಾವಣಾ ಪ್ರಚಾರಕ್ಕೆ ಬಂದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಭೆಯಲ್ಲಿ ಮಾಜಿ ಸಚಿವ ಚಿಮ್ಮನಕಟ್ಟಿ ಮುಜುಗರ ತಂದರು ಹಾಗಾದ್ರೆ, ಮುಂದಿನ ಚುನಾವಣೆಯಲ್ಲಿ ಬಾದಾಮಿ ಬಿಟ್ಟು ಬರ್ತಾರಾ ಸಿದ್ದರಾಮಯ್ಯ..? ತಮ್ಮ ಕ್ಷೇತ್ರ ವರುಣಾದಿಂದಲೇ ಸ್ಪರ್ಧೆ ಮಾಡ್ತಾರಾ..? ಈ ಎಲ್ಲಾ ಪ್ರಶ್ನೆಗಳ ನಡುವೆ ಸಿದ್ದು ನಡೆ ನಿಗೂಢವಾಗಿದೆ..

RELATED ARTICLES

Related Articles

TRENDING ARTICLES