Saturday, May 18, 2024

ಕಾಂಗ್ರೆಸ್‌ ಶಾಸಕನಿಗೆ ಸಾಂತ್ವನ ಹೇಳಲು ಎಷ್ಟು ಜನ ಕಾಂಗ್ರೆಸ್ ನಾಯಕರು ಹೋಗಿದ್ದಾರೆ – ಸಿ.ಸಿ ಪಾಟೀಲ್ ಸವಾಲ್

ಗದಗ : ಕೇವಲ ಮತ ಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ನಾಟಕವನ್ನಾಡುತ್ತಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಸಿ.ಸಿ ಪಾಟೀಲ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಜಿಲ್ಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸುವ ಹಾಗೂ ಬೆಂಗಳೂರು ಗಲಭೆ ಕುರಿತು ಕಾಂಗ್ರೆಸ್ ವಿರುದ್ಧ ಕಿಡಿ‌ಕಾರಿದರು. ರೈತರಿಗೆ ಸ್ವಯಂ ಅಧಿಕಾರ ಸರ್ಕಾರ ಕೊಟ್ಟಿದೆ. ಯಾರು ಬೇಕಾದರೂ, ಎಲ್ಲಿ ಬೇಕಾದರೂ ಭೂಮಿ ಕೊಂಡುಕೊಳ್ಳಬಹುದು. ಇದು ರೈತರಿಗೆ ಮರಣ ಶಾಸನ ಅಲ್ಲ, ರೈತನಿಗೆ ಕೊಟ್ಟ ಸರ್ಕಾರದ ವಿಶೇಷ ಅಧಿಕಾರ ಎಂದರು. ಕಾಂಗ್ರೆಸ್​ನವರಿಗೆ ಹೇಳೋಕೆ ಬೇರೇನೂ ಮಾತಿಲ್ಲ. ಭೂ ಸುಧಾರಣಾ ಬಗ್ಗೆ ಮಾತನಾಡುವವರು ಡಿಜೆ ಹಳ್ಳಿ ಪ್ರಕರಣ ಹೇಳಲಿ? ಅದನ್ನು ಬಿಡ್ತಾರೆ ಗಲಭೆ ಮುಚ್ಚಿ ಕೊಳ್ಳಲು ಯಾವುದಕ್ಕಾದ್ರೂ ಹೋಗ್ತಾರೆ. ಒಬ್ಬ ದಲಿತ ಶಾಸಕನಿಗೆ ರಕ್ಷಣೆ ಕೊಡಲು ಅವರಿಂದಲೇ ಆಗ್ತಿಲ್ಲ.

ಕಾಂಗ್ರೆಸ್‌ ಶಾಸಕನಿಗೆ ಸಾಂತ್ವನ ಹೇಳಲು ಎಷ್ಟು ಜನ ಕಾಂಗ್ರೆಸ್ ನಾಯಕರು, ಎಷ್ಟು ಪ್ರಯತ್ನ ಮಾಡಿದ್ದಾರೆ ಎಂಬುದನ್ನು ಹೇಳಲಿ ಅಂತ ಕಾಂಗ್ರೆಸ್ ನಾಯಕರಿಗೆ ಸಚಿವ ಸಿ.ಸಿ ಪಾಟೀಲ್ ಸವಾಲು ಹಾಕಿದರು. ಇನ್ನು ಶಾಸಕ ಜಮೀರ್ ಅಹ್ಮದ್ ಗಲಭೆಕೋರರನ್ನು ಪ್ರೋತ್ಸಾಹಿಸಿದ್ದಕ್ಕೆ ಏಕವಚನದಲ್ಲಿ ಮಾತನಾಡಿದ ಅವರು ಪಾದರಾಯನಪುರ ಗಲಾಟೆಯಲ್ಲಿ ಜೈಲಿನಿಂದ ಬಂದವರಿಗೆ ಜಮೀರ್ ಅಹ್ಮದ್ ಸನ್ಮಾನ ಮಾಡಿದ. ಈಗ ಗಲಭೆಯಲ್ಲಿ‌ ಮೃತರಿಗೆ ಪರಿಹಾರ ನೀಡಲು ಮುಂದಾದ. ಅವರೇನು ಸ್ವಾತಂತ್ರ್ಯ ಭಾರತಕ್ಕಾಗಿ ಹೋರಾಡಿದ್ರಾ? ಯಡಿಯೂರಪ್ಪ ಮುಖ್ಯ ಮಂತ್ರಿಯಾದ್ರೆ ಮನೆ ಮುಂದೆ ವಾಚ್ ಮನ್ ಆಗ್ತೀನಿ ಅಂದಿದ್ದ ಜಮೀರ್ ನಾಲಿಗೆಗೆ ಇತಿ-ಮಿತಿ ಇರಬೇಕು. ಪರಿಹಾರ ಅವರ ಹಣ ಅವರು ಕೊಡಲಿ, ಆದರೆ ಯಾವ ಹೋರಾಟದ ಕೆಲಸಕ್ಕೆ ಕೊಟ್ಟ ಅಂತ ಹೇಳಲಿ ಎಂದು ಜಮೀರ್ ಅಹ್ಮದ್ ಗೆ ಪ್ರಶ್ನೆ ಮಾಡಿದರು. ಹಿಂದು ದೇವಾಲಯ ರಕ್ಷಣೆ ಮಾಡಿದರು ಅಂತಾರೆ. ಯಾರಿಂದ ರಕ್ಷಣೆ ಆಯಿತು? ನಾಟಕ ವಾಡಲು ಒಂದು ಇತಿ-ಮಿತಿ ಇರಬೇಕು. ಜಮೀರ್ ನಾಟಕ ಎಂಬುದು ಮಾಧ್ಯಮಗಳಿಗೂ ಗೊತ್ತು, ನಂಗೂ ಗೊತ್ತು, ಎಲ್ಲಾ ಜನರಿಗೂ ಗೊತ್ತಿದೆ ಎಂದು ಕಿಡಿ‌ಕಾರಿದರು.

RELATED ARTICLES

Related Articles

TRENDING ARTICLES