Saturday, September 21, 2024

ವಿಮ್ಸ್‌ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿರುವರ ಸಂಖ್ಯೆ 5ಕ್ಕೆ ಏರಿಕೆ

ಬಳ್ಳಾರಿ : ವಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಾಗಿದ್ದ 8 ವರ್ಷದ ಬಾಲಕನೋರ್ವ ಕೂಡ ಮೃತಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ. ಸಿರುಗುಪ್ಪದ ಕೆ.ಮಹೇಶ್ ಹಾಗೂ ಈರಮ್ಮ ದಂಪತಿಗಳ ಪುತ್ರ ನಿಖಿಲ್ (08) ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ. ದಿನಾಂಕ 11ರಂದು ನಿಖಿಲ್‍ನನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡೆಂಗ್ಯೂ ಜ್ವರಕ್ಕೆ ಸಂಬಂಧಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಬುಧವಾರ ಸರಣಿ ಸಾವುಗಳ ಪ್ರಕರಣ ಹೊರ ಬೀಳುತ್ತಿದ್ದಂತೆಯೇ ಈ ವಿಚಾರ ಬಹಿರಂಗ ಆಗಿದೆ. ಮೃತ ಬಾಲಕ ನಿಖಿಲ್‍ನ ತಾಯಿ ಈರಮ್ಮ ಅವರು ಆರೋಪ ಮಾಡುವ ಪ್ರಕಾರ ನನ್ನ ಮಗನನ್ನು ಐಸಿಯುದಲ್ಲಿ ಅಡ್ಮಿಟ್ ಮಾಡಿದ್ದೆವು, ವೆಂಟಿಲೇಟರ್ ಮೇಲೆ ನನ್ನ ಮಗ ಇದ್ದ, ಆದರೆ ಬೆಳಿಗ್ಗೆ ಕರೆಂಟ್ ಹೋದಾಗ ಮಶೀನ್‍ಗಳೆಲ್ಲ ಬಂದ್ ಆದವು, ಇದು ಯಾಕೆ ಹೀಗೆ ಎಂದು ಅಲ್ಲಿದ್ದ ಸಿಬ್ಬಂದಿಯನ್ನು ಕೇಳಿದೆವು, ಕರೆಂಟ ಹೋಗಿದೆ ಎಂದರು, ಕೆಲವೇ ಕ್ಷಣಗಳಲ್ಲಿ ನನ್ನ ಮಗ ಸತ್ತು ಹೋದ ಎಂದಿದ್ದಾರೆ.

ಈ ಮೂಲಕ ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ವ್ಯತ್ಯಯದಿಂದ ಮೃತರಾದವರು ಎಷ್ಟು ಜನ? ಎಂಬ ಪ್ರಶ್ನೆ ಉದ್ಭವವಾಗಿದೆ. ಈಗಾಗಲೇ ಮೌಲಾ ಹುಸೇನ್, ಚಿಟ್ಟೆಮ್ಮ, ಚಂದ್ರಮ್ಮ ಹಾಗೂ ಮನೋಜ್ ಅವರು ವಿದ್ಯುತ್ ವ್ಯತ್ಯಯದಿಂದ ವೆಂಟಿಲೇಟರ್ ಸ್ಥಗಿತ ಆಗಿ ಮೃತರಾಗಿದ್ದರು ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದರು. ಈಗ ನಿಖಿಲ್ ಪೋಷಕರು ಆರೋಪ ಮಾಡುವ ಮೂಲಕ ವಿದ್ಯುತ್ ವ್ಯತ್ಯಯದಿಂದ ವೆಂಟಿಲೇಟರ್ ಸ್ಥಗಿತವಾಗಿ, ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿರುವವರ ಸಂಖ್ಯೆ ಐದಕ್ಕೇರಿದಂತಾಗಿದೆ. ಈ ಸಾವುಗಳ ಕುರಿತು ಈಗಾಗಲೇ ಸರ್ಕಾರ ತನಿಖಾ ಸಮಿತಿಯನ್ನು ರಚಿಸಿದ್ದು, ಸತ್ಯ ಏನೆಂದು ಹೊರ ಬರಬೇಕಿದೆ.

RELATED ARTICLES

Related Articles

TRENDING ARTICLES