Sunday, September 22, 2024

ಧರ್ಮ,ಸಿದ್ಧಾಂತದ ಹೆಸರಿನಲ್ಲಿ ಅಶಾಂತಿ ಸೃಷ್ಟಿ: NSA ಅಜಿತ್ ದೋವಲ್

ನವದೆಹಲಿ: ಕೋಮುಭಾವನೆಯಿಂದ ದೇಶವೇ ಹೊತ್ತಿ ಉರಿಯುತ್ತಿದೆ. ಧರ್ಮ-ಧರ್ಮಗಳ ಮಧ್ಯೆ ದೊಡ್ಡ ಮಟ್ಟದ ಸಂಘರ್ಷವೇ ನಡೆದು ಹೋಗ್ತಿದೆ. ಈ ಮಧ್ಯೆ, ಹಿಂದೂ-ಮುಸ್ಲಿಂ ಮುಖಂಡರು ಸಭೆ ನಡೆದಿದೆ. ಇದರ ನೇತೃತ್ವ ವಹಿಸಿದ್ದು ಅಜಿತ್‌ ದೋವಲ್‌. ಹಾಗಾದ್ರೆ, ಏನೆಲ್ಲಾ ಚರ್ಚೆಯಾಯ್ತು..?

ದೇಶದಲ್ಲಿ ಧರ್ಮ ಮತ್ತು ಸಿದ್ಧಾಂತಗಳ ಹೆಸರಲ್ಲಿ ಸೌಹಾರ್ದತೆ ಕದಡುವ ಕೆಲ್ಸ ಆಗ್ತಿದೆ. ಜೊತೆಗೆ, ಅಶಾಂತಿ ಸೃಷ್ಠಿಸುವ ಷಡ್ಯಂತ್ರ ಮಾಡಲಾಗ್ತಿದೆ. ಇಂತಹ ದುಷ್ಟಶಕ್ತಿಗಳಿಂದ ದೇಶವು ಎಚ್ಚರಿಕೆಯಿಂದ ಇರಬೇಕು. ಹೌದು, ಹೀಗೆಂದು ಹೇಳಿದ್ದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌.

ದೆಹಲಿಯಲ್ಲಿ ಅಖಿಲ ಭಾರತ ಸೂಫಿ ಸಜ್ಜದನಾಶಿನ್ ಕೌನ್ಸಿಲ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೋವಲ್ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಹೌದು, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸರ್ವಧರ್ಮ ಸಮನ್ವಯ ಸಭೆ ಕರೆದಿದ್ರು. ಈ ವೇಳೆ ಹಿಂದೂ ಮತ್ತು ಮುಸ್ಲಿಂ ಮುಖಂಡರಿಗೆ ಹಲವು ಸಲಹೆ ಸೂಚನೆ ನೀಡಿದ್ದಾರೆ.

ಈ ವೇಳೆ, ಪಿಎಫ್‌ಐ ನಿಷೇಧಕ್ಕೆ ಒತ್ತಾಯಿಸಲಾಗಿದೆ. ಅಖಿಲ ಭಾರತ ಸೂಫಿ ಸಜ್ಜದನಾಶಿನ್ ಕೌನ್ಸಿಲ್ ಅಂದ್ರೆ AISSC ಅಂತಾ. ಇದ್ರ ಮುಖ್ಯಸ್ಥ ನಾಸಿರುದ್ದೀನ್ ಚಿಸ್ತಿ ಪಿಎಫ್ಐ ನಿಷೇಧಕ್ಕೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಯಾವುದೇ ಸಂಘಟನೆಯಾಗಿರಲಿ, ಅವರ ವಿರುದ್ಧ ಪುರಾವೆಗಳಿದ್ದರೆ ಅವುಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ಭಾರತ ದೇಶವು ಎಲ್ಲ ಧರ್ಮ ಮತ್ತು ಪಂಗಡಗಳ ಸಮ್ಮಿಲನವಾಗಿದೆ. ಇಂಥಹ ನೆಲದಲ್ಲಿ ನಾವು ನೆಲೆಸಿದ್ದು, ಅದರ ಶಾಂತಿ ಸೌಹಾರ್ದತೆ ಕಾಪಾಡಲು ಎಲ್ಲಾ ರಾಜ್ಯಗಳಲ್ಲೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮುಸ್ಲಿಂ ಮುಖಂಡರು ಹೇಳಿದ್ದಾರೆ.

ಬಿಜೆಪಿ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ಅವರ ಹೇಳಿಕೆಯನ್ನು ಬೆಂಬಲಿಸಿ ಪೋಸ್ಟ್ ಮಾಡಿದ್ದಕ್ಕೆ ಉದಯಪುರದಲ್ಲಿ ಟೈಲರ್ ಓರ್ವನನ್ನು ಹತ್ಯೆ ಮಾಡಿ ಅದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಮಹಾರಾಷ್ಟ್ರದಲ್ಲೂ ಇದೇ ಮಾದರಿಯ ಘಟನೆ ವರದಿಯಾಗಿತ್ತು. ಮಹಾರಾಷ್ಟ್ರದ ಅಮರಾವತಿಯಲ್ಲಿ ಇದೇ ರೀತಿಯ ದ್ವೇಷದ ಹತ್ಯೆ ನಡೆದಿದ್ದು, ಉಮೇಶ್ ಕೋಲ್ಹೆ ಎಂಬ ಔಷಧಿಕಾರನನ್ನು ಹತ್ಯೆ ಮಾಡಲಾಗಿದೆ. ಈ ಮಧ್ಯೆ, ಕರ್ನಾಟಕದಲ್ಲೂ ಧ್ವೇಷಮಯ ವಾತಾವರಣ ನಿರ್ಮಾಣವಾಗಿದ್ದು, ಹಿಂದೂ ಮುಸ್ಲಿಂ ಒಟ್ಟಾಗಿಸಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ದೇಶದ ಮಟ್ಟದಲ್ಲಿ ನಡೆದ ಈ ಸಭೆ ಪ್ರಮುಖ ಪಾತ್ರ ವಹಿಸಿದೆ.

ಬ್ಯೂರೋ ರಿಪೋರ್ಟ್‌ ಪವರ್‌ ಟಿವಿ

RELATED ARTICLES

Related Articles

TRENDING ARTICLES