Friday, September 20, 2024

ರಾಜಕೀಯ ಮೇಲಾಟಕ್ಕೆ ಕಣವಾಗುತ್ತಿದೆ ಚಾಮರಾಜಪೇಟೆ ಮೈದಾನ

ಬೆಂಗಳೂರು : ಚಾಮರಾಜಪೇಟೆ ಮೈದಾನ ಕುರಿತು ಬಂದ್ ಆಯಿತು. ಅದೇ ಉತ್ಸಾಹದಲ್ಲಿ ಇದೀಗ ಮತ್ತಷ್ಟು ಹೋರಾಟಕ್ಕೆ ನಾಗರಿಕ ಒಕ್ಕೂಟ ವೇದಿಕೆ ಮುಂದಾಗಿದೆ. ಈ ಬಾರಿ ಸಂಸದ ಪಿ.ಸಿ. ಮೋಹನ್ ಕಣಕ್ಕಿಳಿದಿದ್ದಾರೆ.

ಕಳೆದೊಂದು ತಿಂಗಳಿನಿಂದ ಚಾಮರಾಜಪೇಟೆ ಈದ್ಗಾ ಮೈದಾನ ಭೂ ಮಾಲಿಕತ್ವ ವಿವಾದ ಚರ್ಚೆಯಲ್ಲಿದೆ. ಸದ್ಯ ಈ ಮೈದಾನ ಯಾರಿಗೆ ಸೇರಿದ್ದು ಎಂಬ ಕುರಿತು ಬಿಬಿಎಂಪಿ ವರ್ಸಸ್ ವಕ್ಫ್ ಬೋರ್ಡ್ ದಾಖಲೆಗಳ ಮೇಲಾಟ ಮುಂದುವರೆದಿದೆ. ಇದೀಗ ಈ ಮೈದಾನ ರಾಜಕೀಯ ತಿರುವು ಪಡೆದಿದೆ. ಕೆಲ ದಿನಗಳ ಹಿಂದೆ ತನ್ನ ಬೆಂಬಲಿಗರ ಸಭೆ ಕರೆದ ಸ್ಥಳೀಯ ಜಮೀರ್ ಅಹ್ಮದ್ ಟಾಂಗ್ ಕೊಡುವಂತೆ ಇಂದು ನಾಗರಿಕ ಒಕ್ಕೂಟ ವೇದಿಕೆ ಜೊತೆ ಬಿಜೆಪಿ ಸಂಸದ ಪಿ ಸಿ ಮೋಹನ್ ಕಾಣಿಸಿಕೊಂಡರು. ಇಂದು ಬಿಬಿಎಂಪಿ ಕಮಿಷಿನರ್ ತುಷಾರ್ ಗಿರಿನಾಥ್ ಭೇಟಿ ಮಾಡಿ ಮೈದಾನ ಕುರಿತು ಸಂಸದ ಪಿ ಸಿ ಮೋಹನ್ ಪ್ರತ್ಯೇಕ ಮನವಿ ಪತ್ರ ಸಲ್ಲಿಸಿದರು‌‌.

ಸಂಸದ ಪಿ ಸಿ ನೋಹನ್ ಮನವಿ ಪತ್ರದಲ್ಲೇನಿದೆ? :

ಚಾಮರಾಜಪೇಟೆ ಮೈದಾನವನ್ನು ಮರು ನಾಮಕರಣ ಮಾಡುವಂತೆ ಮನವಿ

ಜಯಚಾಮರಾಜೇಂದ್ರ ಒಡೆಯರ್ ಹೆಸರು ಇಡಲು ಮನವಿ

ಚಾಮರಾಜಪೇಟೆ ಮೈದಾನಕ್ಕೆ ಕುರಿ ಮೈದಾನ, ಎಮ್ಮೆ ಮೈದಾನ ,ಈದ್ಗಾ ಮೈದಾನ ಅಂತ ಎಲ್ಲಾ ಹೆಸರಿದೆ

ಬಿಬಿಎಂಪಿ ವತಿಯಿಂದ ಒಂದು ಅಧಿಕೃತ ಹೆಸರಿಡಬೇಕು

ರಾಷ್ಟ್ರೀಯ ಹಬ್ಬ, ಧ್ವಜಾರೋಹಣ ಮಾಡಬೇಕು

ಗಣೇಶ ಹಬ್ಬ , ಶಿವರಾತ್ರಿ ಹಬ್ಬ , ದಸರಾ ಆಚರಣೆ ಮಾಡಲು ಅವಕಾಶ

ಇನ್ನು ಜು.12ರ ಚಾಮರಾಜಪೇಟೆ ಬಂದ್ ಯಶಸ್ವಿ ಹಿನ್ನೆಲೆ ಚಾಮರಾಜಪೇಟೆಯ ಈದ್ಗಾ ಮೈದಾನ ಆಟದ ಮೈದಾನವಾಗಿಯೇ ಉಳಿಯಬೇಕೆಂದು ಒತ್ತಾಯಿಸಿ ಚಾಮರಾಜಪೇಟೆ ನಾಗರಿಕರ ವೇದಿಕೆ ವತಿಯಿಂದ ಬಿಬಿಎಂಪಿ ಕಮಿಷನರ್ ತುಷಾರ್ ಗಿರಿ ನಾಥ್ ಭೇಟಿ ಮಾಡಿ ಮನವಿ ಮಾಡಿದರು. ಚಾಮರಾಜಪೇಟೆ ಮೈದಾನವನ್ನು ಜಯಚಾಮರಾಜೇಂದ್ರ ಒಡೆಯರ್ ಹೆಸ್ರು ನಾಮಕರಣ ಮಾಡುವಂತೆ ಮನವಿ ಮಾಡಿದ್ದಾರೆ. ಸರ್ಕಾರ ಆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಬಿಬಿಎಂಪಿ ಕಮಿಷಿನರ್ ತುಷಾರ್ ಗಿರಿನಾಥ್ ತಿಳಿಸಿದರು.

ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಮೈದಾನ ವಿವಾದ ಮತ್ತಷ್ಟು ತೀವ್ರಗೊಳ್ಳುತ್ತಿದೆ. ನಾಗರಿಕ ಹೋರಾಟ ಇದೀಗ ರಾಜಕೀಯ ಜಿದ್ದಾಜಿದ್ದಿಗೆ ವೇದಿಕೆಯಾಗಿ ಮಾರ್ಪಟ್ಟಿರುವುದು ಸುಳ್ಳಲ್ಲ.

RELATED ARTICLES

Related Articles

TRENDING ARTICLES