Friday, September 20, 2024

ಮೇಕೆದಾಟು ಪಾದಯಾತ್ರೆ : ಸರ್ಕಾರವನ್ನ ತರಾಟೆಗೆ ತೆಗೆದುಕೊಂಡ ಹೈಕೋರ್ಟ್

ರಾಜ್ಯ : ದಿನೇ ದಿನೇ ಕೊರೊನಾ ಅಬ್ಬರ ತೀವ್ರಗೊಳ್ಳುತ್ತಿದೆ. ದಿನದಿಂದ ದಿನಕ್ಕೆ ಕೊವೀಡ್ ಸೋಂಕಿತರ ಸಂಖ್ಯೆ ಏರುತ್ತಿದ್ದು, ಸರ್ಕಾರವನ್ನ ಆತಂಕಕ್ಕಿಡು ಮಾಡಿದೆ. ಈ ನಡುವೆ ಕಾಂಗ್ರೆಸ್ ಪಕ್ಷವು ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ನಡೆಸುತ್ತಿದೆ‌. ಕೊವಿಡ್ ಹೆಚ್ಚಿರುವ ಈ ಸಮಯದಲ್ಲಿ ಕಾಂಗ್ರೆಸ್ ನಾಯಕರು ಮೇಕೆದಾಟು ಪಾದಯಾತ್ರೆ ಹಮ್ಮಿಕೊಂಡಿರುವುದನ್ನ ಪ್ರಶ್ನಿಸಿ ವಕೀಲ ಶ್ರೀಧರ್ ಪ್ರಭು ಎಂಬುವರು ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ರಾಜ್ಯ ಸರ್ಕಾರವನ್ನ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ಕೊವಿಡ್ ಹೆಚ್ಚುತ್ತಿರುವ ವೇಳೆ ರ್‍ಯಾಲಿ ನಡೆಸಿದ್ದೀರಾ, ರ್‍ಯಾಲಿಗೆ ಮುನ್ನ ನೀವು ಅನುಮತಿ ಪಡೆದಿದ್ದೀರಾ ಎಂದು ಕೆಪಿಸಿಸಿಯನ್ನ ಪ್ರಶ್ನೆ ಮಾಡಿತು. ಬಳಿಕ ಸರ್ಕಾರದ ಕ್ರಮಗಳನ್ನ ಪ್ರಶ್ನಿಸಿದ ನ್ಯಾಯಾಲಯ ಸರ್ಕಾರ ರ್‍ಯಾಲಿ ತಡೆಯಲು ಅಸಮರ್ಥವಾಗಿದಿಯಾ, ಅನುಮತಿ ಕೊಟ್ಟಿಲ್ಲದಿದ್ದರೆ ಯಾರಿಗಾಗಿ ಕಾಯುತ್ತಿದ್ದೀರಿ, ಸರ್ಕಾರ ಸಂಪೂರ್ಣ ಅಸಮರ್ಥವಾಗಿದೆಯೇ ಎಂದು ರಾಜ್ಯ ಸರ್ಕಾರವನ್ನ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತು. ಅಲ್ಲದೆ ಹೈಕೋರ್ಟ್ ಆದೇಶದವರೆಗೆ ನೀವು ಕ್ರಮ ಕೈಗೊಳ್ಳುವುದಿಲ್ಲವೇ ಎಂದು ಸರ್ಕಾರವನ್ನ ಪ್ರಶ್ನೆ ಮಾಡಿತು. ಈ ವೇಳೆ ಉತ್ತರಿಸಿದ ಎಎಜಿ ಈಗಾಗಲೇ ಮೂರು ಎಫ್ಐಆರ್ ದಾಖಲು ಮಾಡಲಾಗಿದೆ ಎಂದರು. ಈ ಬಗ್ಗೆ ಉತ್ತರಿಸಲು ಸರ್ಕಾರಕ್ಕೆ ಒಂದು ದಿನದ ಗಡುವನ್ನ ಹೈಕೋರ್ಟ್ ನೀಡಿ ವಿಚಾರಣೆ ಜನವರಿ 14 ಕ್ಕೆ ಮುಂದೂಡಿತು. ಹೈಕೋರ್ಟ್ ಆದೇಶದ ಬಳಿಕ ಎಚ್ಚೆತ್ತ ಗೃಹ ಸಚಿವ ಆರಗ ಜ್ಞಾನೇಂದ್ರ ದಿಢೀರನೆ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಕರೆದು ಚರ್ಚೆ ನಡೆಸಿದರು. ಬಳಿಕ ಮಾತನಾಡಿದ ಅರಗ ಜ್ಞಾನೇಂದ್ರ ಹೈಕೋರ್ಟ್ ಅಭಿಪ್ರಾಯ ಗಮನಿಸಿದ್ದು, ಎಜಿಯವರಿಂದ ವಿವರವಾಗಿ ಮಾಹಿತಿ ಪಡೆದು ಸಿಎಂ ಜೊತೆ ಚರ್ಚೆ ನಡೆಸಲಾಗುವುದು. ವಿರೋಧ ಪಕ್ಷವಾಗಿ ಈ ನಡೆ ನಿರೀಕ್ಷಿಸಿರಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರ ಹಾಕಿದರು.

ಸದ್ಯ ಸರ್ಕಾರಕ್ಕೆ ಮೇಕೆದಾಟು ಪಾದಯಾತ್ರೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಇದೀಗ ಹೈಕೋರ್ಟ್ ನಲ್ಲಿ ಪಿಐಎಲ್ ವಿಚಾರಣೆಯಾಗಿದ್ದು, ಕೇವಲ ಒಂದು ದಿನದಲ್ಲಿ ಸರ್ಕಾರ ಕೈಗೊಂಡ ಕ್ರಮಗಳ ಕುರಿತು ವರದಿ ನೀಡಬೇಕಿದೆ. ಅದ್ರಿಂದ ಸರ್ಕಾರ ಮೇಕೆದಾಟು ಪಾದಯಾತ್ರೆಗೆ ಬ್ರೇಕ್ ಹಾಕ್ತಾರಾ ಅಥವಾ ಏನ್ ಕ್ರಮ ಕೈಗೊಳ್ತಾರೆ ಅನ್ನೋದು ತೀವ್ರ ಕುತೂಹಲ ಕಾರಣವಾಗಿದೆ.

RELATED ARTICLES

Related Articles

TRENDING ARTICLES