ಮಂಗಳೂರು : ಕಾಂಗ್ರೆಸ್ ಪಕ್ಷವನ್ನ ಟೀಕಿಸಿದ್ದಾರೆ ಅನ್ನೋ ಕಾರಣಕ್ಕೆ ಮುಸ್ಲಿಂ ಧಾರ್ಮಿಕ ಗುರುವೊಬ್ಬರ ವಿರುದ್ಧ ಕಾನೂನು ಕ್ರಮದ ಬೆದರಿಕೆ ಒಡ್ಡಿದ್ದ ಕಾಂಗ್ರೆಸ್ ಮುಖಂಡನ ವಿರುದ್ಧ ಕರಾವಳಿಯ ಮುಸ್ಲಿಮರು ತಿರುಗಿಬಿದಿದ್ದಾರೆ. ಟ್ವಿಟ್ಟರ್ ನಲ್ಲಿ #ResighnDKcongressSevadalPresident ಅನ್ನೋ ಹ್ಯಾಷ್ ಟ್ಯಾಗ್ ಮೂಲಕ ಕಾಂಗ್ರೆಸ್ ಸೇವಾದಳ ಜಿಲ್ಲಾಧ್ಯಕ್ಷ ಹಾಜಿ HM ಅಶ್ರಫ್ ಅವರ ರಾಜೀನಾಮೆ ಪಡೆಯುವಂತೆ ಕಾಂಗ್ರೆಸ್ ನಾಯಕರನ್ನ ಒತ್ತಾಯಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಮಾಜಿ ಸಚಿವ ಯುಟಿ ಖಾದರ್, ಕೆಪಿಸಿಸಿ, ಸಿದ್ದರಾಮಯ್ಯ ಅವರನ್ನ ಟ್ಯಾಗ್ ಮಾಡಿ ಮಾಡಲಾದ ಟ್ವೀಟ್ ಗಳಲ್ಲಿ ರಾಜೀನಾಮೆ ಪಡೆಯುವಂತೆ ಒತ್ತಾಯಿಸಲಾಗಿದೆ. ಇನ್ನು ಟ್ವೀಟ್ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಧಾರ್ಮಿಕ ನಾಯಕರು ಭಾಗವಹಿಸಿದ್ದು, ಕಾಂಗ್ರೆಸ್ ನಾಯಕನ ‘ಕಾನೂನು ಬೆದರಿಕೆ’ ಆಡಿಯೋ ಸಂದೇಶಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಆಗಸ್ಟ್ 6 ರಂದು ಟ್ವೀಟ್ ಮಾಡಿದ್ದ ರಾಜ್ಯ ಉಲೆಮಾ ಒಕ್ಕೂಟದ ಕಾರ್ಯದರ್ಶಿ ಮೊಹಿಯುದ್ದೀನ್ ಕಾಮಿಲ್ ಸಖಾಫಿ ತೋಕೆ ಅವರು, “ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ತೀವ್ರ ಹಿಂದುತ್ವವಾದಿ ಪಕ್ಷಗಳು” ಎಂದು ಟೀಕಿಸಿದ್ದರು. ಇದರ ವಿರುದ್ಧ ಕಾಂಗ್ರೆಸ್ ಸೇವಾದಳ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹಾಜಿ HM ಅಶ್ರಫ್ ಅವರು ಆಡಿಯೋ ಸಂದೇಶವನ್ನ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಕಾನೂನು ಕ್ರಮ ಕೈಗೊಳ್ಳವುದಾಗಿ ಬೆದರಿಸಿ ಅವಹೇಳನಕಾರಿ ಮಾತಾಡಿದ್ದಾಗಿ ಹಲವರು ಆರೋಪಿಸಿದ್ದಾರೆ. ಇದೀಗ ಇದರ ವಿರುದ್ಧ ನಡೆದ ಟ್ವೀಟ್ ಅಭಿಯಾನದಲ್ಲಿ ನೂರಾರು ಮಂದಿ ಪಾಲ್ಗೊಂಡು ಅಶ್ರಫ್ ಅವರ ರಾಜೀನಾಮೆ ಪಡೆಯುವಂತೆ ಕೈ ನಾಯಕರನ್ನ ಒತ್ತಾಯಿಸಿದ್ದಾರೆ. ಜೊತೆಗೆ ಹ್ಯಾಷ್ ಟ್ಯಾಗ್ ನಲ್ಲಿ ರಾಜಿನಾಮೆ (Resighn) ಪದವನ್ನು ತಪ್ಪಾಗಿ ಬರೆದು, ಅದನ್ನು ಅರ್ಥೈಸುವ ಸಾಮರ್ಥ್ಯ ಕೂಡಾ ಸೇವಾದಳಕ್ಕಿಲ್ಲ ಎಂಬಂತ ಟ್ವೀಟ್ ಗಳು ರವಾನಿಸಿ ಟ್ರೋಲ್ ಮಾಡಿದ್ದಾರೆ.
ಇರ್ಷಾದ್ ಕಿನ್ನಿಗೋಳಿ
ಪವರ್ ಟಿವಿ, ಮಂಗಳೂರು