Tuesday, October 22, 2024

ದೇಶದಾದ್ಯಂತ ಸಿಆರ್‌ಪಿಎಫ್ ಶಾಲೆಗಳು, 30 ವಿಮಾನಗಳಿಗೆ ಬಾಂಬ್ ಬೆದರಿಕೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ರೋಹಿಣಿ ಪ್ರದೇಶದ ಸಿಆರ್‌ಪಿಎಫ್ ಶಾಲೆ ಬಳಿಯ ಸ್ಫೋಟ ಪ್ರಕರಣ ಮಾಸುವ ಮುನ್ನವೇ ಇಂದು (ಮಂಗಳವಾರ) ದೇಶದಾದ್ಯಂತ ಸಿಆರ್‌ಪಿಎಫ್ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ ಸೋಮವಾರ ತಡರಾತ್ರಿ ದೆಹಲಿಯ ಎರಡು ಮತ್ತು ಹೈದರಾಬಾದ್‌ನ ಒಂದು ಸಿಆರ್‌ಪಿಎಫ್ ಶಾಲೆಯ ಆಡಳಿತ ಮಂಡಳಿಗೆ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ರವಾನಿಸಲಾಗಿದೆ.

ದೆಹಲಿಯ ರೋಹಿಣಿ ಪ್ರದೇಶದ ಪ್ರಶಾಂತ್ ವಿಹಾರದಲ್ಲಿ ಭಾನುವಾರ ಬೆಳಿಗ್ಗೆ ಸ್ಫೋಟ ಸಂಭವಿಸಿತ್ತು. ಶಾಲೆಯ ಆವರಣ ಗೋಡೆ ಹಾಗೂ ಸಮೀಪದ ಕೆಲ ಅಂಗಡಿಗಳಿಗೆ ಹಾನಿಯುಂಟಾಗಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಭಾರಿ ಸ್ಫೋಟದ ಸದ್ದು ಹಾಗೂ ಸ್ಥಳದಲ್ಲಿ ದಟ್ಟವಾದ ಬಿಳಿ ಹೊಗೆಯಿಂದ ಗಾಬರಿಗೊಂಡ ಜನರು, ಮನೆಗಳಿಂದ ಹೊರಗೆ ಓಡಿ ಬಂದಿದ್ದರು. ಕಚ್ಚಾಬಾಂಬ್ ಅನ್ನು ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಸುತ್ತಿ, ಒಂದು ಅಡಿ ಆಳದ ಗುಂಡಿ ಅಗೆದು ಅದರಲ್ಲಿ ಇಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದರು. ಘಟನೆ ಸಂಬಂಧ ಭಾರತೀಯ ನ್ಯಾಯಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿದ್ದರು.

ದೆಹಲಿಯ ಸಿಆರ್‌ಪಿಎಫ್ ಶಾಲೆ ಸಮೀಪ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೂ ಖಾಲಿಸ್ತಾನಿ ಪ್ರತ್ಯೇಕತಾವಾದಿಗಳಿಗೂ ಸಂಬಂಧ ಇದೆಯೇ ಎಂಬ ಬಗ್ಗೆ ದೆಹಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.ಈ ಸಂಬಂಧ ಸಾಮಾಜಿಕ ಮಾಧ್ಯಮ ‘ಟೆಲಿಗ್ರಾಂ’ಗೆ ಪತ್ರ ಬರೆದು, ಸ್ಫೋಟದ ಹೊಣೆ ಹೊತ್ತ ಗುಂಪಿನ ಬಗ್ಗೆ ಮಾಹಿತಿ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಖಾಲಿಸ್ತಾನಿ ಪ್ರತ್ಯೇಕತಾವಾದಿಗಳನ್ನು ಬೆಂಬಲಿಸುವವರನ್ನು ಭಾರತ ಗುರಿಯಾಗಿಸಿದ್ದಕ್ಕೆ ಪ್ರತಿಯಾಗಿ ಈ ದಾಳಿ ನಡೆಸಲಾಗಿದೆ ಎಂದು ಹೇಳಲಾದ ಟೆಲಿಗ್ರಾಂ ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಹೀಗಾಗಿ ‘ಜಸ್ಟೀಸ್ ಲೀಗ್ ಇಂಡಿಯನ್’ ಗುಂಪಿನ ಸೃಷ್ಟಿಕರ್ತರ ಕುರಿತು ಮಾಹಿತಿ ನೀಡುವಂತೆ ಟೆಲಿಗ್ರಾಂಗೆ ಪೊಲೀಸರು ಪತ್ರ ಬರೆದಿದ್ದಾರೆ ಸೋಮವಾರ ರಾತ್ರಿ ಭಾರತೀಯ ವಿಮಾನಯಾನ ಸಂಸ್ಥೆಗಳು ನಿರ್ವಹಿಸುವ ಸುಮಾರು 30 ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ . ಇಂಡಿಗೊ, ವಿಸ್ತಾರ ಮತ್ತು ಏರ್ ಇಂಡಿಯಾದ ವಿಮಾನಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ವಿಮಾನಯಾನ ಸಂಸ್ಥೆಗಳ ವಕ್ತಾರರು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES