Tuesday, October 22, 2024

Power tv 6th anniversary : ಕೊಡುಗೈ ದಾನಿ ಕೆ.ಪಿ ರಾಜು ಅವರಿಗೆ ಕರುನಾಡ ಕಣ್ಮಣಿ ಪ್ರಶಸ್ತಿ

ದಯೆಯಿಲ್ಲದ ಧರ್ಮವು ಯಾವುದಯ್ಯ.. ದಯೆಯೇ ಬೇಕು ಸಕಲ ಪ್ರಾಣಿಗಳೆಲ್ಲರಲಿ.. ಬಸವಣ್ಣನವರ ಈ ಅರ್ಥಗರ್ಭಿತ ವಚನ ಸರ್ವ ಕಾಲಕ್ಕೂ ಅನ್ವಯಿಸುವಂಥದ್ದು. ಆದರೆ ಸ್ವಾರ್ಥವೇ ಹೆಚ್ಚಾಗುತ್ತಿರುವ ಪ್ರಪಂಚದಲ್ಲಿ ದಾನ, ಧರ್ಮ, ದಯೆ ಹೇಳೋಕೆ ಮಾತ್ರ ಎಂಬಂತಾಗಿದೆ. ಇದೆಲ್ಲದರ ಮಧ್ಯೆಯೂ ಕೆಲವರು ತಮ್ಮ ಬದುಕಿನ ಮೂಲಕ ಮಾದರಿಯಾಗುತ್ತಾರೆ. ಅಂತಹ ಅಪರೂಪದ ಕೊಡುಗೈ ದಾನಿ ಕೆ.ಪಿ ರಾಜಣ್ಣ.

ಬೆಂಗಳೂರು ಬಳಿಯಲ್ಲಿರೋ ಆನೇಕಲ್​ ವ್ಯಾಪ್ತಿಯಲ್ಲಿ ಇವರ ಹೆಸರು ಕೇಳದವರೇ ಇಲ್ಲ ಅಂದ್ರೆ ಅತಿಶಯೋಕ್ತಿಯೇನಲ್ಲ. ಅಷ್ಟರಮಟ್ಟಿಗೆ ಸಮಾಜ ಸೇವೆಯಿಂದಲೇ ಇವರು ಚಿರಪರಿಚಿತರು. ಕಷ್ಟ ಅಂತ ಬಂದ ಬಡ ಜನರಿಗೆ ನೆನಪಾಗೋದೇ ಸ್ವಂತ ಅಣ್ಣನಂತಿರುವ ರಾಜಣ್ಣ. ಶಿಕ್ಷಣ, ಉನ್ನತ ಶಿಕ್ಷಣ, ಮದುವೆ, ತುರ್ತು ವೈದ್ಯಕೀಯ ಚಿಕಿತ್ಸೆ, ಹೀಗೆ ಯಾವುದೇ ಸಂದರ್ಭದಲ್ಲಿ ಕಷ್ಟ ಅಂತಾ ಬಂದವರಿಗೆ ತಮ್ಮ ಸಹಾಯ ಹಸ್ತ ಚಾಚುವ ಇವರ ಹೃದಯ ಶ್ರೀಮಂತಿಕೆಗೆ ಸಾಟಿಯಿಲ್ಲ. ನೂರಾರು ನಿರಾಶ್ರಿತರಿಗೆ ಕಮ್ಮಸಂದ್ರದಲ್ಲಿ ಆಶ್ರಯ ಒದಗಿಸಿ ಅವರ ಮಕ್ಕಳ ಶಿಕ್ಷಣಕ್ಕೂ ಆಸರೆಯಾಗಿದ್ದಾರೆ. ಹುಟ್ಟೂರಿನ ಸರ್ಕಾರಿ ಶಾಲೆಯ ಕಟ್ಟಡ ಕಟ್ಟಿಸಿ ಮಕ್ಕಳ ಓದಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

ತಮ್ಮ ಸಾಮಾಜಿಕ ಸೇವೆಯನ್ನು ಮತ್ತಷ್ಟು ವಿಸ್ತರಿಸುವ ಆಶಯದಿಂದ ರಾಜಕೀಯದಲ್ಲೂ ಆಸಕ್ತಿ ತೋರಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಪ್ರಭಾವಿಯಾಗಿರುವ ಇವರು, ಎಂದಿಗೂ ನೆರವು ಕೋರಿ ಬಂದವರನ್ನ ತಮ್ಮ ಹಿತಾಸಕ್ತಿಗೆ ಬಳಸಿಕೊಂಡಿಲ್ಲ. ಅದಕ್ಕೆ ಸಾಕ್ಷಿ ಎಂಬಂತೆ, ಕೊಡಗು ಜಿಲ್ಲೆ ಗಡಿಯಂಚಿನ ಗಿರಿಜನರ ಪಾಲಿಗೂ ಇವರು ಆಶ್ರಯದಾತರಾಗಿದ್ದಾರೆ. ಅಲ್ಲಿನ ನೂರಾರು ಮಕ್ಕಳ ಶಿಕ್ಷಣದ ಜವಾಬ್ದಾರಿ ಹೊತ್ತು, ಸಾಮಾಜಿಕವಾಗಿ ಆ ಜನರ ಪರಿವರ್ತನೆಗೆ ನಾಂದಿ ಹಾಡಿದ್ದಾರೆ.

ಇವರ ನಿಸ್ವಾರ್ಥ ಸೇವೆಗೆ ಸಾಕ್ಷಿ ಎಂಬಂತಿದೆ ಪ್ರಾಣಿ ಪ್ರೇಮ.. ತಮ್ಮ ಮನೆಯಂಗಳದಲ್ಲೇ ನೂರಾರು ಬೀದಿ ನಾಯಿಗಳಿಗೆ ಆಶ್ರಯ ನೀಡಿದ್ದಾರೆ.. ಅವುಗಳ ಪಾಲನೆಗಾಗಿ ಕಾರ್ಮಿಕರನ್ನು ನೇಮಿಸಿ ನೆರೆ ಹೊರೆಯವರಿಗೆ ತೊಂದರೆ ಆಗದಂತೆ ಮುತುವರ್ಜಿ ಕೂಡ ವಹಿಸಿದ್ದಾರೆ. ಇವರ ಮಾನವೀಯ ಮೌಲ್ಯಗಳು ನಿಜಕ್ಕೂ ಮಾದರಿಯಾಗಿವೆ. ಇಂತಹ ಸೇವಾಕಾಂಕ್ಷಿಗೆ ಸಾರ್ವಜನಿಕ ವಲಯದಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಗಬೇಕು ಎಂಬುದು ಬೆಂಬಲಿಗರ ಆಶಯವಾಗಿದೆ. ಆದರ್ಶಮಯ ವ್ಯಕ್ತಿತ್ವದ ರಾಜಣ್ಣ ಅವರಿಗೆ ಕರುನಾಡ ಕಣ್ಮಣಿ ಪ್ರಶಸ್ತಿ ನೀಡಲು ಪವರ್​ ಟಿವಿ ಹರ್ಷ ಪಡುತ್ತದೆ.

 

RELATED ARTICLES

Related Articles

TRENDING ARTICLES