Friday, September 20, 2024

ವಿಕಲಚೇತನರು ಸಮಾಜಕ್ಕೆ ಹೊರೆ ಅಲ್ಲ: ಸಿಎಂ ಸಿದ್ದರಾಮಯ್ಯ!

ಬೆಂಗಳೂರು: 2023-24ನೇ ಸಾಲಿನಲ್ಲಿ 4000 ವಿಶೇಷ ಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ವಿಶ್ವ ವಿಕಲಚೇತನರ ದಿನಾಚರಣೆ 2023 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಂದು ವಿಶ್ವ ವಿಕಲಚೇತನರ ದಿನ. 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ 13,24,205 ವಿಕಲಚೇತನರಿದ್ದಾರೆ . ವಿಕಲಚೇತನರು ಸಮಾಜಕ್ಕೆ ಹೊರೆ ಅಲ್ಲ. ಅವರೂ ಕೂಡ ಬೇರೆಯವರಂತೆ ಈ ಸಮಾಜದಲ್ಲಿ ಎಲ್ಲ ಅವಕಾಶಗಳನ್ನು ಪಡೆದು ಉದ್ಯೋಗ, ಬದುಕಿಗೆ ಹಕ್ಕುಗಳನ್ನು ಪಡೆದಿದ್ದಾರೆ. ವಿಕಲಚೇತನರಿಗೆ ಶಿಕ್ಷಣ ಉದ್ಯೋಗಗಳಲ್ಲಿ ಸಮಾನ ಅವಕಾಶ ದೊರಕಿಸುವುದು ಸರ್ಕಾರದ ಕರ್ತವ್ಯ ಎಂದರು.

ಇದನ್ನೂ ಓದಿ: ಚಾಮುಂಡಿ ಬೆಟ್ಟಕ್ಕೆ ಭೇಟಿ: ದೇವಿ ದರ್ಶನ ಪಡೆದ ರಾಹುಲ್ ದ್ರಾವಿಡ್ ದಂಪತಿ!

ಇತ್ತೀಚೆಗೆ ನಡೆಸಲಾದ ಜನಸ್ಪಂದನ ಕಾರ್ಯಕ್ರಮದಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ವಿಕಲಚೇತನರು ಆಗಮಿಸಿದ್ದರು. ಉದ್ಯೋಗ, ಶಿಕ್ಷಣ ಹಾಗೂ ವಾಹನ ಖರೀದಿಗೆ ನೆರವು ಸೇರಿದಂತೆ ಹಲವು ಬೇಡಿಕೆಗಳಿಗೆ ಸಂಬಂಧಪಟ್ಟ ಇಲಾಖೆಯು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.

ಪ್ರಸಕ್ತ ಸಾಲಿನಲ್ಲಿ 10 ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಗಳನ್ನು 2 ಕೋಟಿ ವೆಚ್ಚದಲ್ಲಿ ಏಳು ಜಿಲ್ಲೆಗಳಲ್ಲಿ ನಿರ್ಮಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ವಿಕಲಚೇತನರ ಶೈಕ್ಷಣಿಕ, ವೈದ್ಯಕೀಯ, ಪುನರ್ವಸತಿ, ಹಿರಿಯ ನಾಗರಿಕ ಕ್ಷೇಮಾಭಿವೃದ್ಧಿಗಾಗಿ 284.27ಕೋಟಿ ರೂ. ಇಡಲಾಗಿದೆ. ಮರಣ ಹೊಂದಿದ ವಿಕಲಚೇತನರಿಗೆ ಪರಿಹಾರವನ್ನು 50 ಸಾವಿರದಿಂದ 1 ಲಕ್ಷಕ್ಕೆ ಏರಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ವಿಕಲಚೇತನರು ಕ್ರೀಡೆಯೂ ಸೇರಿದಂತೆ ಎಲ್ಲ ರಂಗಗಳಲ್ಲಿ ಅಪ್ರತಿಮ ಸಾಧನೆ ತೋರುತ್ತಿದ್ದಾರೆ. ಆದ್ದರಿಂದ ವಿಕಲಚೇತನರು ಸಮಾಜಕ್ಕೆ ಹೊರೆ ಎನ್ನುವ ಸಮಾಜದಲ್ಲಿರುವ ಭಾವನೆಯನ್ನು ದೂರ ಮಾಡಬೇಕಿದೆ ಎಂದರು.

RELATED ARTICLES

Related Articles

TRENDING ARTICLES