ಹುಬ್ಬಳ್ಳಿ : ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿರುವವರೆಲ್ಲಾ ದಲಿತ ವಿರೋಧಿಗಳು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕುಟುಕಿದ್ದಾರೆ.
ಹುಬ್ಬಳ್ಳಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ”ಕಳೆದ 70 ವರ್ಷಗಳಿಂದ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಿಂದ ಸಾಕಷ್ಟು ನಿರಾಶ್ರಿತರು ಭಾರತಕ್ಕೆ ಬಂದಿದ್ದಾರೆ. ಅವರಿಗೆ ಇನ್ನೂ ಯಾಕೆ ಮೂಲಸೌಕರ್ಯ ಕಲ್ಪಿಸಿಲ್ಲ? ದೇಶದಲ್ಲಿ ಅನೇಕ ಮಾನವ ಹಕ್ಕುಗಳ ಹೋರಾಟಗಾರರಿದ್ದಾರೆ. ಅವರು ಯಾಕೆ ಇನ್ನೂ ತುಟಿ ಬಿಚ್ಚುತ್ತಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷ ಎರಡು ನಾಲಗೆ ಹೊಂದಿದೆ. ರಾಜಸ್ಥಾನ ಚುನಾವಣೆ ಸಂದರ್ಭದಲ್ಲಿ ವಲಸಿಗರಿಗೆ ಪೌರತ್ವ ನೀಡುತ್ತೇವೆ ಎಂಬ ಅಂಶವನ್ನು ಪ್ರಣಾಳಿಕೆಯಲ್ಲಿ ಪ್ರಕಟಿಸಿತ್ತು. ಆದ್ರೆ ಈಗ ಇದೇ ಕಾಂಗ್ರೆಸ್ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತಿದೆ. ರಾಹುಲ್ ಗಾಂಧಿ ಈ ಕಾಯ್ದೆಯನ್ನು ವಿರೋಧಿಸುವ ಮೊದಲು ಕಾಯ್ದೆಯ ಕುರಿತು ಕೂಲಂಕುಶವಾಗಿ ಅಧ್ಯಯನ ನಡೆಸಲಿ. ಈ ಕಾಯ್ದೆಯಲ್ಲಿ ಯಾರ ಪೌರತ್ವವನ್ನು ಕಿತ್ತುಕೊಳ್ಳುವ ಪ್ರಸ್ತಾಪವಿಲ್ಲ. ಆದ್ರೆ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಜನರ ದಿಕ್ಕು ತಪ್ಪಿಸಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿವೆ ಎಂದು ಕಿಡಿ ಕಾರಿದರು.