Sunday, May 19, 2024

ಬಿಜೆಪಿಗೆ ಮತ ನೀಡಿದ್ರೆ ‘ಅಮೂಲ್’ಗೆ ಮತ ನೀಡಿದಂತೆ : ಜೆಡಿಎಸ್ ಲೇವಡಿ

ಬೆಂಗಳೂರು : ಜೆಡಿಎಸ್​ಗೆ ಮತ ನೀಡಿದರೆ ಕಾಂಗ್ರೆಸ್​ಗೆ ಮತ ನೀಡಿದಂತೆ ಎಂದು ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಜೆಡಿಎಸ್ ತಿರುಗೇಟು ನೀಡಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ಅಮಿತ್ ಶಾ ಅವರನ್ನು ‘ಚುನಾವಣಾ ಕುತಂತ್ರಿ’ ಎಂದು ಲೇವಡಿ ಮಾಡಿದೆ.

ಜೆಡಿಎಸ್ ಗೆ ಮತ ನೀಡಿದರೆ ಕಾಂಗ್ರೆಸ್‌ಗೆ ಮತ ನೀಡಿದಂತೆ ಎಂದು ‘ಚುನಾವಣಾ ಕುತಂತ್ರಿ’ ಅಮಿತ್ ಶಾ ಸಕಲೇಶಪುರದಲ್ಲಿ ಹೇಳಿದ್ದಾರೆ. ಮಿಸ್ಟರ್‌ ಅಮಿತ್ ಶಾ ಅವರೇ, ಬಿಜೆಪಿಗೆ ಮತ ನೀಡುವುದೆಂದರೆ ‘ಅಮೂಲ್‌’ಗೆ, ‘ಹಿಂದಿ ಹೇರಿಕೆ’ಗೆ, ‘ಗುಜರಾತಿ ಗುಲಾಮಗಿರಿ’ಗೆ ಮತ ನೀಡಿದಂತೆ ಎಂಬುವುದು ಪ್ರತಿಯೊಬ್ಬ ಕನ್ನಡಿಗನಿಗೂ ಗೊತ್ತಿದೆ ಎಂದು ಕುಡುಕಿದೆ.

ಇದನ್ನೂ ಓದಿ : ಕುಮಾರಸ್ವಾಮಿ ‘ಈ.. ಹೇಳಿಕೆ ತುಂಬಾ ಹೇಸಿಗೆ’ ಅನಿಸುತ್ತೆ : ಸುಮಲತಾ ಕಿಡಿ

ಹಾಸನದ ಅಕೌಂಟ್ ಬಂದ್ ಆಗುತ್ತೆ

ನಿಮ್ಮ ಕುತಂತ್ರಗಳನ್ನು ಬಚ್ಚಿಡಲು ನೀವು ಬೇರೆ ಮಾರ್ಗ ಹುಡುಕುತ್ತೀರಿ ಎಂಬುವುದು ನಮಗೆ ಗೊತ್ತಿದೆ. ಕನ್ನಡಿಗರು ಬೆವರು ಸುರಿಸಿ ಕಟ್ಟಿದ ನಂದಿನಿಯನ್ನು ನುಂಗಲು ನೀವು ಆಡಿದ ಆಟಗಳನ್ನು ನಾಡಿನ ಜನತೆ ಕಣ್ಣಾರೆ ಕಂಡಿದ್ದಾರೆ. ಕಳೆದ ಬಾರಿ ಹಾಸನದಲ್ಲಿ ತೆರೆದ ಒಂದು ಅಕೌಂಟನ್ನೂ ನಾಡ ಪ್ರೇಮಿಗಳು ಈ ಬಾರಿ ಬಂದ್‌ ಮಾಡಿಸುತ್ತಾರೆ ಎಂದು ಛೇಡಿಸಿದೆ.

ಕೋಮು ಆಧಾರದಲ್ಲಿ ಮಾತ್ರ ಮತ ಪಡೆಯಲು ಇದು ಉತ್ತರ ಪ್ರದೇಶವಲ್ಲ, ಹಾಸನ ಎಂಬುವುದು ನೆನಪಿರಲಿ. ಸೌಹಾರ್ದತೆಯೆ ನಮ್ಮ ನಾಡಿನ ಉಸಿರು. ಇಲ್ಲಿ ರೈತರು ಅಭಿವೃದ್ಧಿ ಮತ್ತು ಸೌಹಾರ್ದತೆಯ ಮೇಲೆ ಮತ ನೀಡುತ್ತಾರೆಯೆ ಹೊರತು, ಒಡೆದು ಆಳುವ ನಿಮ್ಮ ದ್ವೇಷ ಭಾಷಣಕ್ಕೆ ಅಲ್ಲ ಎಂದು ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದೆ.

RELATED ARTICLES

Related Articles

TRENDING ARTICLES