Sunday, October 27, 2024

ಹಾಲಿ ಸಚಿವರಿಂದ ರಾಜೀನಾಮೆ, ಅತೃಪ್ತರಿಗೆ ಮಂತ್ರಿಗಿರಿ : ಕೆಸಿವಿ, ಸಿದ್ದರಾಮಯ್ಯ

ಬೆಂಗಳೂರು : ‘ದೋಸ್ತಿ’ ಸರ್ಕಾರ ಉಳಿಸಿಕೊಳ್ಳಲು ಮೈತ್ರಿ ನಾಯಕರು ಅಂತಿಮ ಹಂತದ ಕಸರತ್ತು ನಡೆಸ್ತಾ ಇದ್ದಾರೆ. ಹಾಲಿ ಸಚಿವರಿಂದ ರಾಜೀನಾಮೆ ಪಡೆದು ಅತೃಪ್ತರಿಗೆ ಮಂತ್ರಿಗಿರಿ ನೀಡಲು ನಾಯಕರು ತೀರ್ಮಾನಿಸಿದ್ದಾರೆ.
ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಕೆ.ಸಿ ವೇಣುಗೋಪಾಲ್​ ಹಾಗೂ ಸಿದ್ದರಾಮಯ್ಯ ಜಂಟಿ ಸುದ್ದಿಗೋಷ್ಠಿ ನಡೆಸಿ ಈ ವಿಷಯವನ್ನು ಸ್ಪಷ್ಟಪಡಿಸಿದ್ರು.
‘ ಬಿಜೆಪಿ ಕಳೆದ 5 ವರ್ಷಗಳಲ್ಲಿ ಪ್ರಜಾಪ್ರಭುತ್ವ ವಿರೋಧಿ ಕೆಲಸ ಮಾಡ್ತಾ ಬಂದಿದೆ. ಅದು ತಾನು ಅಧಿಕಾರದಲ್ಲಿಲ್ಲದ ರಾಜ್ಯಗಳಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸೋ ಕೆಲಸ ಮಾಡ್ತಿದೆ. ರಾಜ್ಯದಲ್ಲೂ ಮೈತ್ರಿ ಸರ್ಕಾರ ಬೀಳಿಸಲು ಪ್ರಯತ್ನಿಸುತ್ತೆ. ಆದರೆ, ನಮ್ಗೆ ಈಗಲೂ ನಂಬಿಕೆ ಇದೆ. ನಮ್ಮ ಸರ್ಕಾರ ಮುಂದುವರೆಯುತ್ತೆ ಅಂತ ವೇಣುಗೋಪಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಮ್ಮ ಸಚಿವರು ಸ್ವಯಂ ಪ್ರೇರಿತರಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಯಾರೆಲ್ಲಾ ಮಂತ್ರಿ ಸ್ಥಾನದ ಆಕಾಂಕ್ಷೆಯಿಂದ ರಾಜೀನಾಮೆ ನೀಡಿದ್ದಾರೋ, ಅವರಿಗೆಲ್ಲಾ ಸಚಿವ ಸ್ಥಾನ ನೀಡ್ತೀವಿ. ಅವ್ರೆಲ್ಲಾ ತಮ್ಮ ರಾಜೀನಾಮೆ ವಾಪಸ್ ಪಡಿಬೇಕು. ಆತುರದ ನಿರ್ಧಾರ ಬೇಡ ಅಂತ ಅತೃಪ್ತರಲ್ಲಿ ಮನವಿ ಮಾಡಿದ್ರು.
ಇನ್ನು ಸಿದ್ದರಾಮಯ್ಯ ಅವರು ಕೂಡ ಇದೇ ಮಾತುಗಳನ್ನಾಡಿದ್ದಾರೆ. ”ನಮ್ಮ ಪಕ್ಷದಲ್ಲಿ ಮಂತ್ರಿ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಸಹಜವಾಗಿ ಕೆಲವರಿಗೆ ಬೇಸರವಿದೆ. ಅದನ್ನು ಸರಿಪಡಿಸುವುದಕ್ಕಾಗಿ ನಮ್ಮ ಮಂತ್ರಿಗಳೆಲ್ಲರೂ ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಿದ್ದು, ಪಕ್ಷದ ಭವಿಷ್ಯ ಮುಖ್ಯವೇ ಹೊರತು ವೈಯಕ್ತಿಕ ಸ್ಥಾನಮಾನ ಮುಖ್ಯವಲ್ಲ ಎಂಬ ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ” ಅಂತ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ,
”2008 ರಲ್ಲಿ ಯಡಿಯೂರಪ್ಪನವರು ಇದೇ ರೀತಿ ನಮ್ಮ ಶಾಸಕರಿಂದ ರಾಜೀನಾಮೆ ಕೊಡಿಸಿ, ಕೋಟ್ಯಂತರ ಹಣ ಸುರಿದ ಉಪಚುನಾವಣೆಯಲ್ಲಿ ಗೆಲ್ಲಿಸುವ ಪ್ರಯತ್ನ ಮಾಡಿದ್ದರು. ಅದರ ಮುಂದುವರಿದ ಭಾಗವೇ ಈ ಬಾರಿಯ ಆಪರೇಷನ್ ಕಮಲ. ಈ ಹಿಂದೆ ಐದು ಬಾರಿ ಸರ್ಕಾರ ಕೆಡವುವ ವಿಫಲ ಯತ್ನ ಮಾಡಿದ್ದರು, ಅದಕ್ಕೆ ಈ ಬಾರಿಯ ಪ್ರಯತ್ನ ಇನ್ನೊಂದು ಹೊಸ ಸೇರ್ಪಡೆಯಾಗುತ್ತದೆ ಅಷ್ಟೆ. ಕೇಂದ್ರ ಸರ್ಕಾರ ತನ್ನ ಅಂಗ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ವಾಮ ಮಾರ್ಗದ ಮೂಲಕ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಇಳಿದಿದೆ. ಇದರ ಹಿಂದೆ ರಾಜ್ಯ ಬಿಜೆಪಿ ನಾಯಕರಷ್ಟೇ ಅಲ್ಲ‌ ಕೇಂದ್ರದ ಕೈವಾಡ ಕೂಡ ಸ್ಪಷ್ಟವಾಗಿದೆ. ಈ ಬಾರಿಯ ಪ್ರಯತ್ನದಲ್ಲಿ ಬಿಜೆಪಿ ತನ್ನ ಕೈವಾಡವೇ ಇಲ್ಲ ಎಂಬ ಹೊಸ ನಾಟಕ ಶುರುಮಾಡಿದೆ ಅಷ್ಟೆ. ಬಿಜೆಪಿಗೆ ಪ್ರಜಾಪ್ರಭುತ್ವ ಹಾಗೂ ಸಂಸದೀಯ ವ್ಯವಸ್ಥೆಯಲ್ಲಿ ನಂಬಿಕೆಯಿಲ್ಲ. ಅವರಿಗೆ ಸ್ಪಷ್ಟ ಬಹುಮತವೂ ಇಲ್ಲ, ಬೇರೆ ಪಕ್ಷಗಳ ಬೆಂಬಲವೂ ಇಲ್ಲ ಆದರೂ ಸಹ ಅಸಂವಿಧಾನಿಕ ಮಾರ್ಗದ ಮೂಲಕ ಶಾಸಕರನ್ನು ತಮ್ಮತ್ತ ಸೆಳೆದುಕೊಂಡು ಸರ್ಕಾರ ರಚಿಸುವ ವಿಫಲ ಯತ್ನಕ್ಕೆ ಕೈಹಾಕಿದೆ.‌ ಇದೂ ಸಹ ಹಿಂದಿನಂತೆ ಯಶಸ್ವಿಯಾಗುವುದಿಲ್ಲ”ಅಂತ ಸರಣಿ ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

RELATED ARTICLES

Related Articles

TRENDING ARTICLES