Sunday, October 27, 2024

ಪರಂ ವಿರುದ್ಧ ಕಾರ್ಯಕರ್ತರು ಗರಂ..!

ತುಮಕೂರು : ಪರಮೇಶ್ವರ್ ಹಠಾವೋ, ಕಾಂಗ್ರೆಸ್​ ಬಚಾವೋ ಅಂತ ತುಮಕೂರಿನಲ್ಲಿ ಕೆಲ ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟರ್​ಗಳನ್ನು ಅಂಟಿಸಿದ್ದು, ಪರಂ ಫುಲ್ ಗರಂ ಆಗಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನ ನಗೆಬೀರಿದೆ. ಕಾಂಗ್ರೆಸ್​ ಕೇವಲ ಬೆಂಗಳೂರು ಗ್ರಾಮಾಂತರದಲ್ಲಿ (ಡಿ.ಕೆ ಸುರೇಶ್​​) ಗೆದ್ದಿದ್ದರೆ, ಜೆಡಿಎಸ್​ ಹಾಸನದಲ್ಲಿ (ಪ್ರಜ್ವಲ್​ ರೇವಣ್ಣ) ಮಾತ್ರ ಜಯಭೇರಿ ಬಾರಿಸಿದೆ. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸಮಲತಾ ಅಂಬರೀಶ್ ಅವರಿಗೆ ವಿಜಯ ಲಕ್ಷ್ಮಿ ಒಲಿದಿದ್ದಾಳೆ.
ಇನ್ನು ತುಮಕೂರಿನಲ್ಲಿ ಮೈತ್ರಿ ಅಭ್ಯರ್ಥಿ, ಮಾಜಿ ಪ್ರಧಾನಿ ದೇವೇಗೌಡರು ಬಿಜೆಪಿಯ ಜಿ.ಎಸ್​ ಬಸವರಾಜ್​ ಅವರ ವಿರುದ್ಧ ಸೋಲನುಭವಿಸಿದ್ದಾರೆ. ಕಾಂಗ್ರೆಸ್​ನ ಸಂಸದರಿಗೇ ಟಿಕೆಟ್ ನೀಡದೆ ಮೈತ್ರಿ ಧರ್ಮದ ಹೆಸರಲ್ಲಿ ದೇವೇಗೌಡರಿಗೆ ಟಿಕೆಟ್​ ನೀಡಿದ್ದು, ಸ್ಥಳೀಯ ‘ಕೈ’ ನಾಯಕರಿಗೆ ಮಾತ್ರವಲ್ಲದೆ ಅನೇಕ ಕಾರ್ಯಕರ್ತರಿಗೆ ಅಸಮಾಧಾನ ತಂದಿತ್ತು.
ಇದೀಗ ಮೈತ್ರಿ ಅಭ್ಯರ್ಥಿ ದೇವೇಗೌಡರು ಸೋಲನುಭವಿಸಿದ ಹಿನ್ನೆಲೆಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ದೇವೇಗೌಡರನ್ನು ತುಮಕೂರಿಗೆ ಕರೆತಂದಿದ್ದಕ್ಕೆ ‘ಕೈ’ಯ ಕೆಲವು ನೊಂದ ಕಾರ್ಯಕರ್ತರು ಪರಮೇಶ್ವರ್ ಅವರ ವಿರುದ್ಧ ಪೋಸ್ಟರ್​ಗಳನ್ನು ಅಂಟಿಸೋ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.
ಕಳೆದ ರಾತ್ರಿಯಿಂದ ತುಮಕೂರಿನಲ್ಲಿ ‘ಪರಮೇಶ್ವರ್ ಹಠಾವೋ, ಕಾಂಗ್ರೆಸ್ ಬಚಾವೋ’ ಅನ್ನೋ ಪೋಸ್ಟರ್ ರಾರಾಜಿಸುತ್ತಿದ್ದು, ಪರಂ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಜಿಲ್ಲಾ ಕಾಂಗ್ರೆಸ್​​ ವಿರುದ್ಧ ಪರಮೇಶ್ವರ್ ಕೆಂಡಾಮಂಡಲರಾಗಿದ್ದು, ಜಿಲ್ಲಾ ಕಾಂಗ್ರೆಸ್​ ಕಾರ್ಯಕರ್ತರಿಂದ ಆ ಪೋಸ್ಟರ್​ಗಳನ್ನು ತೆಗೆಸಿ ಡಿಸಿಎಂಗೆ ಆದ ಮುಜುಗರವನ್ನು ತಪ್ಪಿಸಲು ಮುಂದಾಗಿದೆ.
ಬಿತ್ತಿಪತ್ರ ಅಂಟಿಸಿದವರ ವಿರುದ್ಧ ಕಾಂಗ್ರೆಸ್​ ಕ್ರಮಗಳೊಳ್ಳಲು ಮುಂದಾಗಿದ್ದು, ಕಿಡಿಗೇಡಿಗಳ ಕೃತ್ಯಕ್ಕೆ ಪೊಲೀಸರಿಗೆ ದೂರು ನೀಡೋ ಸಾಧ್ಯತೆ ಕೂಡ ಇದೆ.

RELATED ARTICLES

Related Articles

TRENDING ARTICLES