ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಕೋರ್ಟ್ ವಿಚಾರಣೆಗೆ ಗೈರಾಗಿ, ನೆಚ್ಚಿನ ಗೆಳೆಯ, ಶಿಷ್ಯ ಧನ್ವೀರ್ ಅಭಿನಯದ ವಾಮನ ಸಿನಿಮಾ ವೀಕ್ಷಿಸಿದ್ದಾರೆ. ದರ್ಶನ್ ನಡೆ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು. ನ್ಯಾಯಾಲಯಕ್ಕೆ ಬರುವುದಕ್ಕೆ ಅಡ್ಡಿಯಾಗಿದ್ದ ಬೆನ್ನು ನೋವು, ಸಿನಿಮಾ ವೀಕ್ಷಣೆಗೆ ಅಡ್ಡಿಯಾಗಲಿಲ್ಲವೇ ಎಂಬ ಪ್ರಶ್ನೆಗಳು ಮೂಡತೊಡಗಿವೆ.
ಬುಧವಾರ ರಾತ್ರಿ ಜಿಟಿ ಮಾಲ್ನಲ್ಲಿ ವಾಮನ ಚಿತ್ರದ ವಿಶೇಷ ಶೋ ಆಯೋಜಿಸಲಾಗಿತ್ತು. ಈ ಶೋ ವೀಕ್ಷಿಸಲು ದರ್ಶನ್ ರಾತ್ರಿ 8 ಗಂಟೆಯ ವೇಳೆಗೆ ಮಾಲ್ಗೆ ಆಗಮಿಸಿದ್ದರು. ಬೆನ್ನು ನೋವನ್ನು ಲೆಕ್ಕಿಸದೇ ಧನ್ವೀರ್ ಅಭಿನಯದ ಸಿನಿಮಾವನ್ನು ದರ್ಶನ್ ಸುಮಾರು ಮೂರು ಗಂಟೆಗಳ ಕಾಲ ಕುಳಿತು ವೀಕ್ಷಿಸಿದ್ದಾರೆ. ದರ್ಶನ್ನ ಈ ನಡೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ :ಬಿರು ಬೇಸಿಗೆಯಲ್ಲಿ ಜನರಿಗೆ ಬ್ಲಾಂಕೆಟ್ ವಿತರಿಸಿದ ಬಿಹಾರದ ಕ್ರೀಡಾ ಸಚಿವ
ಏಕೆಂದರೆ ಏ.8 ರಂದು ದರ್ಶನ್ 57ನೇ ಸಿಸಿಹೆಚ್ ನ್ಯಾಯಾಲಯದ ವಿಚಾರಣೆಗೆ ಹಾಜರಾಗಲಿಲ್ಲ. ವಿಚಾರಣೆ ಸಂದರ್ಭದಲ್ಲಿ ವಕೀಲರು, ದರ್ಶನ್ ಅವರಿಗೆ ಬೆನ್ನು ನೋವಿದೆ. ಹೀಗಾಗಿ ವಿಚಾರಣೆಗೆ ಬರಲು ವಿನಾಯಿತಿ ಕೋರಿದ್ದರು. ಈ ವೇಳೆ ನ್ಯಾಯಾಧೀಶರು ವಿಚಾರಣೆಗೆ ಗೈರಾಗದಂತೆ ಸೂಚನೆ ನೀಡಿ. ವಿಚಾರಣೆ ಇದ್ದಾಗ ಆರೋಪಿಗಳು ಹಾಜರಾಗಲೇಬೇಕು ಎಂದು ತಿಳಿಸಿದ್ದರು.
ಆದರೆ ಇದೀಗ ಮಾರನೇ ದಿನವೇ ನಟ ದರ್ಶನ್ ಸ್ನೇಹಿತ ಧನ್ವೀರ್ ಅಭಿನಯದ ವಾಮನ ಸಿನಿಮಾ ವೀಕ್ಷಿಸಲು ಜಿಟಿ ಮಾಲ್ಗೆ ಭೇಟಿ ನೀಡಿದ್ದು. ಇಲ್ಲಿ ಬೆನ್ನು ನೋವಿರಲಿಲ್ಲವೇ ಎಂದು ಕೇಳಲಾಗುತ್ತಿದೆ. ಜೊತೆಗೆ ಕೊಲೆ ಆರೋಪಿ ಚಿಕ್ಕಣ್ಣನನ್ನು ದರ್ಶನ್ ಭೇಟಿಯಾಗಿದ್ದು. ಇದು ಸಾಕ್ಷಿಯ ಮೇಲೆ ಪ್ರಭಾವ ಬೀರುವುದಲ್ಲವೇ ಎಂದು ಕೇಳಲಾಗುತ್ತಿದೆ.