ಮುಂಬೈ: ಬೀರ್ ಬೈಸೆಪ್ಸ್ ಎಂದೇ ಖ್ಯಾತಿ ಪಡೆದಿರುವ ಯೂಟ್ಯೂಬರ್ ರಣವೀರ್ ಅಲ್ಲಾಬಾದಿಯಾ ನೀಡಿರುವ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು. ಮಹರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೇರಿದಂತೆ ಅನೇಕರು ರಣವೀರ್ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ.
ಸಮಯ್ ರೈನಾ ಅವರ ಇಂಡಿಯಾಸ್ ಗಾಟ್ ಲೇಟೆಂಟ್ ಕಾರ್ಯಕ್ರಮದಲ್ಲಿ ರಣವೀರ್ ತೀರ್ಪುಗಾರರಾಗಿ ಭಾಗವಹಿಸಿದ್ದರು. ಈ ವೇಳೆ ಸ್ಪರ್ಧಿಯೊಬ್ಬರಿಗೆ, ನಿಮ್ಮ ಪೋಷಕರು ಜೀವನದುದ್ದಕ್ಕೂ ಪ್ರತಿದಿನ ಲೈಂಗಿಕ ಕ್ರಿಯೆ ನಡೆಸುವುದನ್ನು ನೀವು ನೋಡುತ್ತೀರಾ ಅಥವಾ ಒಮ್ಮೆ ಅವರೊಂದಿಗೆ ಸೇರಿ ಅದನ್ನು ಶಾಶ್ವತವಾಗಿ ನಿಲ್ಲಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಅಲ್ಲಿದ್ದವರೂ ಕೂಡ ರಣವೀರ್ ಹೇಳಿಕೆಗೆ ಚಪ್ಪಾಳೆ ತಟ್ಟಿದ್ದಾರೆ. ಆದರೆ ಇದೀಗ ಈ ಹೇಳಿಕೆ ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗುತ್ತಿದೆ.
ಇದನ್ನೂ ಓದಿ :
ರಣವೀರ್ ಯೂಟ್ಯೂಬ್ನಲ್ಲಿ ಸುಮಾರು 1 ಕೋಟಿಗೂ ಹೆಚ್ಚು ಸಬ್ಸ್ಕ್ರೈಬರ್ಗಳನ್ನು ಹೊಂದಿದ್ದು. ಈತನಿಗೆ ಕಳೆದ ವರ್ಷ ಪ್ರಧಾನಿ ಮೋದಿ ರಾಷ್ಟ್ರೀಯ ಯುವ ಕಂಟೆಂಟ್ ಕ್ರಿಯೇಟರ್ ಪ್ರಶಸ್ತಿ ನೀಡಿದ್ದರು. ಆದರೆ ಇದೀಗ ರಣವೀರ್ ನೀಡಿರುವ ಹೇಳಿಕೆ ರಾಷ್ಟ್ರದ ಜನರ ಟೀಕೆಗೆ ಕಾರಣವಾಗಿದೆ. ಈ ಕುರಿತು ಮಹರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಕೂಡ ಹೇಳಿಕೆ ನೀಡಿದ್ದು. “ನಾನು ರಣವೀರ್ ಅವರ ಹೇಳಿಕೆಯ ಬಗ್ಗೆ ತಿಳಿದುಕೊಂಡಿದ್ದೇನೆ. ವಿಡಿಯೋವನ್ನು ನಾನು ನೋಡಿಲ್ಲ. ಪ್ರತಿಯೊಬ್ಬರಿಗೆ ವಾಕ್ ಸ್ವಾತಂತ್ರ್ಯವಿದೆ. ನಮ್ಮ ಸಮಾಜದಲ್ಲಿ, ನಾವು ಕೆಲವು ನಿಯಮಗಳನ್ನು ಮಾಡಿದ್ದೇವೆ. ಯಾರಾದರೂ ಅವುಗಳನ್ನು ಉಲ್ಲಂಘಿಸಿದರೆ ಅದು ಸಂಪೂರ್ಣವಾಗಿ ತಪ್ಪು ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಪ್ರತಿಕ್ರಿಯಿಸಿದ್ದಾರೆ.
ರಣವೀರ್ ವಿರುದ್ದ ಮುಂಬೈ ಕಮೀಷನರ್ ಮತ್ತು ಮಹಿಳಾ ಆಯೋಗದಲ್ಲಿ ದೂರು ದಾಖಲಾಗಿದೆ ಎಂದು ತಿಳಿದು ಬಂದಿದೆ. ರಣವೀರ್ ಹೇಳಿಕೆ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನಲೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿ ಕ್ಷಮೆ ಕೇಳಿದ್ದು. ಆ ರೀತಿ ನಾನು ಹೇಳಬಾರದಿತ್ತು. ನನ್ನ ಹೇಳಿಕೆ ತಪ್ಪಾಗಿದೆ. ಈ ಭಾಗವನ್ನು ಡಿಲೀಟ್ ಮಾಡುವಂತೆ ಕೇಳಿಕೊಂಡಿದ್ದೇನೆ. ನಿಮ್ಮ ಭಾವನೆಗಳಿಗೆ ನೋವಾಗಿದೆ. ಇನ್ನು ಮುಂದೆ ಈ ರೀತಿಯ ತಪ್ಪು ನಡೆಯದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.