Thursday, September 12, 2024

ಕ್ರಿಕೆಟ್​​ ಅಭಿಮಾನಿಗಳಿಗೆ ಗುಡ್​ ನ್ಯೂಸ್; ಕರ್ನಾಟಕಕ್ಕೆ ಮರಳಿ ಬಂದ ಆಪದ್ಬಾಂಧವ

ಕರ್ನಾಟಕ ಕ್ರಿಕೆಟ್ ತಂಡದ ಅಪ್ಪಟ ಅಭಿಮಾನಿಗಳಿಗೆ ಇದು ಶುಭ ಸುದ್ದಿ. ಕರ್ನಾಟಕ ರಣಜಿ ತಂಡದ ಆಪತ್ಬಾಂಧನ ಮರಳಿ ರಾಜ್ಯಕ್ಕೆ ಬಂದಿದ್ದಾರೆ. ಕರ್ನಾಟಕ ಪರ 11 ವರ್ಷ ಆಡಿ, ಕಳೆದ ಬಾರಿ ಕೇರಳ ತಂಡ ಸೇರಿಕೊಂಡಿದ್ದ ಶ್ರೇಯಸ್ ಗೋಪಾಲ್ ಈ ವರ್ಷದಿಂದ ಮತ್ತೆ ಕರ್ನಾಟಕ ಪರ ಆಡಲು ಸಜ್ಜಾಗಿದ್ದಾರೆ.

ಕಳೆದ 10 ವರ್ಷಗಳಲ್ಲಿ ಕರ್ನಾಟಕ ತಂಡವನ್ನು ತೊರೆದಿರುವ ಪ್ರಮುಖ ಆಟಗಾರರ ಸಂಖ್ಯೆ 10. ದಾವಣಗೆರೆ ಎಕ್ಸ್​ಪ್ರೆಸ್​​ ವಿನಯ್ ಕುಮಾರ್, ರಾಬಿನ್ ಉತ್ತಪ್ಪ, ಗಣೇಶ್ ಸತೀಶ್, ಅಮಿತ್ ವರ್ಮಾ, ಸ್ಟುವರ್ಟ್ ಬಿನ್ನಿ, ಕರುಣ್ ನಾಯರ್, ಶ್ರೇಯಸ್ ಗೋಪಾಲ್, ಕೆ.ವಿ ಸಿದ್ಧಾರ್ಥ್, ರೋಹನ್ ಕದಂ, ಆರ್. ಸಮರ್ಥ್. ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಕಳೆದ ವರ್ಷ ಕರ್ನಾಟಕ ತಂಡವನ್ನು ತೊರೆದು ಕೇರಳ ತಂಡ ಸೇರಿಕೊಂಡಿದ್ದ ಶ್ರೇಯಸ್ ಗೋಪಾಲ್ ಕರ್ನಾಟಕದ ರಣಜಿ ಹೀರೋಗಳಲ್ಲಿ ಒಬ್ಬ. ಶ್ರೇಯಸ್ ಗೋಪಾಲ್ ರಾಜ್ಯ ತಂಡ 2013-15ರವರೆಗೆ ಸತತ ಎರಡು ಬಾರಿ ರಣಜಿ ಟ್ರೋಫಿ, ಇರಾನಿ ಕಪ್, ವಿಜಯ್ ಹಜಾರೆ ಟ್ರೋಫಿಗಳನ್ನು ಗೆದ್ದು ಅವಳಿ ತ್ರಿವಳಿ ಸಾಧನೆ ಮಾಡಿದಾಗ, ಆ ಐತಿಹಾಸಿಕ ತಂಡದ ಭಾಗವಾಗಿದ್ದವರು.

ಶ್ರೇಯಸ್ ಗೋಪಾಲ್ ಪರಿಣಾಮಕಾರಿ ಲೆಗ್​ ಸ್ಪಿನ್ನರ್, ಕೆಳ ಮಧ್ಯಮ ಕ್ರಮಾಂಕದ ನಂಬಿಕಸ್ಥ ಬ್ಯಾಟ್​​ಮನ್​. ಕೇರಳಕ್ಕೆ ವಲಸೆ ಹೋಗುವ ಮುನ್ನ ಕರ್ನಾಟಕ ರಣಜಿ ತಂಡದ ಆಪದ್ಬಾಂಧವನಾಗಿದ್ದರು. ಆದರೆ, ಕ್ರಿಕೆಟ್​ನ ಮೂರೂ ಫಾರ್ಮ್ಯಾಟ್​ಗಳಲ್ಲಿ ಆಡಲು ಬಯಸಿದ್ದ ಶ್ರೇಯಸ್ ಗೋಪಾಲ್​ಗೆ ಆ ಅವಕಾಶ ತಪ್ಪಿತ್ತು. ಪ್ರವೀಣ್ ದುಬೆ ಎಂಬ ಆಟಗಾರನಿಗಾಗಿ ಶ್ರೇಯಸ್ ಗೋಪಾಲ್​ನನ್ನು ಕಡೆಗಣಿಸಲಾಯಿತು. ಆತನನ್ನು ರೆಡ್ ಬಾಲ್ ಕ್ರಿಕೆಟ್​ಗೆ ಮಾತ್ರ ಬ್ರ್ಯಾಂಡ್ ಮಾಡಲಾಯಿತು. ವೈಟ್ ಬಾಲ್ ಕ್ರಿಕೆಟ್’ನಲ್ಲಿ ಕೈ ತಪ್ಪಿದ ಅವಕಾಶ ಆತನ ಐಪಿಎಲ್ ವೃತ್ತಿಜೀವನಕ್ಕೂ ಪೆಟ್ಟು ಕೊಟ್ಟಿತು.

ತನ್ನ ಪ್ರತಿಭೆಗೆ ಬೆಲೆ ಇರದ ಕಡೆ ಇರುವುದಕ್ಕಿಂತ ಹೊರ ನಡೆಯುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದ ಶ್ರೇಯಸ್ ಗೋಪಾಲ್, ಕೇರಳ ಪರ ಆಡಲು 2 ವರ್ಷ ಒಪ್ಪಂದ ಮಾಡಿಕೊಂಡು ಬಿಟ್ಟ. ಈಗ ಶ್ರೇಯಸ್ ಗೋಪಾಲನ ಮೌಲ್ಯ ನಮ್ಮವರಿಗೆ ಅರ್ಥವಾದಂತಿದೆ.

ಹೋಗುವುದಾದರೆ ಹೋಗಲಿ ಬಿಡಿ ಎಂದವರೇ ಶ್ರೇಯಸ್’ನನ್ನು ಮರಳಿ ಕರೆಸಿಕೊಂಡಿದ್ದಾರೆ. ಕೇರಳ ಕ್ರಿಕೆಟ್ ಸಂಸ್ಥೆ ಜೊತೆ ಮಾಡಿಕೊಂಡಿದ್ದ ಒಪ್ಪಂದವನ್ನು ಕಡಿದುಕೊಂಡು ಕರ್ನಾಟಕ ಪರ ಆಡಲು ಶ್ರೇಯಸ್ ಗೋಪಾಲ್ ರೆಡಿಯಾಗಿದ್ದಾರೆ.

RELATED ARTICLES

Related Articles

TRENDING ARTICLES