ಶಿವಮೊಗ್ಗ: ಮಾಜಿ ಸಚಿವ ಬಿ.ಸಿ.ಪಾಟೀಲ್ ಅಳಿಯ ಕೆ.ಜಿ.ಪ್ರತಾಪ್ ಕುಮಾರ್ (41) ಆತ್ಮಹತ್ಯೆ ಮಾಡಿಕೊಂಡಿರುವುದರ ಬಗ್ಗೆ ಬಿ.ಸಿ.ಪಾಟೀಲ್ ಪ್ರತಿಕ್ರಿಯಿಸಿದ್ದಾರೆ. ಬೆಳಿಗ್ಗೆ ಒಟ್ಟಿಗೆ ತಿಂಡಿ ತಿಂದಿದ್ವಿ. ಪ್ರತಾಪ್ಗೆ ಮಕ್ಕಳ ವಿಚಾರದಲ್ಲಿ ಕೊರಗಿತ್ತು. ಎರಡು ತಿಂಗಳು ಡಿ ಅಡಿಕ್ಷನ್ ಸೆಂಟರ್ನಲ್ಲಿ ಇದ್ದರು. ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಗೊತ್ತಿಲ್ಲವೆಂದು ತಿಳಿಸಿದ್ದಾರೆ.
ಇದನ್ನು ಓದಿ: ರೈತರ ‘ಜೀವ ಹಿಂಡುತ್ತಿದೆ’ ಈ ಹಂತಕ ಸರ್ಕಾರ: ಬಿಜೆಪಿ ಕಿಡಿ
ಇಂದು ಇದ್ದಕ್ಕಿದ್ದಂತೆ ಪ್ರತಾಪ್ ಕಾಣೆಯಾಗಿದ್ದರು. ಕರೆ ಮಾಡಿದರೆ ಸ್ವೀಕರಿಸಲಿಲ್ಲ. ಬಳಿಕ ಕರೆ ಸ್ವೀಕರಿಸಿ ಹೊನ್ನಾಳಿ ಮಲೆಬೆನ್ನೂರಿನ ರಸ್ತೆಯಲ್ಲಿ ಇರುವುದಾಗಿ ಮಾಹಿತಿ ನೀಡಿದ್ದರು. ಈ ಸಂಬಂಧ ದಾವಣಗೆರೆ, ಶಿವಮೊಗ್ಗ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೆ ಎಂದು ಮಾಹಿತಿ ನೀಡಿದರು.
ಮಧ್ಯಾಹ್ನ 1.45ಕ್ಕೆ ಸಹೋದರ ಕರೆ ಮಾಡಿ ಅಳಿಯ ಪ್ರತಾಪ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರ ಬಗ್ಗೆ ಮಾಹಿತಿ ನೀಡಿದರು. ದಾವಣಗೆರೆಗೆ ಶಿಫ್ಟ್ ಮಾಡೋಕೆ ಹೇಳಿದ್ದೆ. ಆದರೆ ಶಿವಮೊಗ್ಗ ಆಸ್ಪತ್ರೆ ಹತ್ತಿರವಿದ್ದ ಕಾರಣ ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಶಿಕಾರಿಪುರ ಹತ್ತಿರ ಹೋಗುವಾಗ ಜೀವ ಹೋಗಿದೆಯಂತೆ ಎಂದು ತಿಳಿಸಿದರು.
ಮಗಳು ಹಾಗೂ ಪ್ರತಾಪ್ಗೆ ಮದುವೆಯಾಗಿ 16 ವರ್ಷಗಳು ಆಗಿತ್ತು. ನಮ್ಮ ರಾಜಕೀಯ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದರು. ಮಂಗಳವಾರ ಕತ್ತಲಗೆರೆ ಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ. ಬಿ.ಸಿ.ಪಾಟೀಲ್ ಅವರ ದೊಡ್ಡ ಮಗಳ ಗಂಡ ಪ್ರತಾಪ್ ಕುಮಾರ್ ಸೋಮವಾರ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಅರಣ್ಯ ಪ್ರದೇಶದಲ್ಲಿ ರಸ್ತೆ ಬದಿ ಕಾರು ನಿಲ್ಲಿಸಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.