ಬೆಂಗಳೂರು: ನಟ ದರ್ಶನ್ ಚಿತ್ರದುರ್ಗ ಮೂಲದ ವ್ಯಕ್ತಿ ರೇಣುಕಾಸ್ವಾಮಿ ಎಂಬಾತನ ಕಿಡ್ನಾಪ್ ಮಾಡಿ ಬಳಿಕ ಆತನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿ ಜೈಲುಪಾಲಾಗಿರುವ ಬೆನ್ನಲ್ಲೇ ರಾಜ್ಯಾದ್ಯಂತ ದರ್ಶನ್ ವಿರುದ್ದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಸದ್ಯ ಈ ಕುರಿತು ರಾಜ್ಯ ರಾಜಕಾರಣಿಗಳು ಪ್ರತಿಕ್ರಿಯಿಸಿದ್ದಾರೆ.
ಅಂತಿಮವಾಗಿ ಕೋರ್ಟ್ ಶಿಕ್ಷೆ ಕೊಡುತ್ತೆ:
ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನ ವಿಚಾರಕ್ಕೆ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಿಮಗೆ ಗೊತ್ತಿರುವಷ್ಟೇ ನನಗೂ ಗೊತ್ತಿರೋದು. ಏನೇ ಇದ್ರೂ ಗೃಹ ಸಚಿವರು ನೋಡಿಕೊಳ್ಳುತ್ತಾರೆ.ಬಿರಿಯಾನಿ, ಸಿಗರೇಟ್ ಕೊಟ್ಟ ವಿಚಾರ ನನಗೆ ಗೊತ್ತಿಲ್ಲ. ನಮ್ಮ ಇಲಾಖೆಯಲ್ಲಿ ಆ ರೀತಿ ನಡೆಯಲ್ಲ. ಅಂತಿಮವಾಗಿ ಕೋರ್ಟ್ ಶಿಕ್ಷೆ ಕೊಡುತ್ತೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್ ತಿರುಚಲು ಕೇ‘D’ ಗ್ಯಾಂಗ್ 1 ಕೋಟಿಗೆ ಡೀಲ್ ಯತ್ನ!
ಕಾನೂನಿಗಿಂತ ಯಾರೂ ದೊಡ್ಡವರಿಲ್ಲ- ಆರ್. ಅಶೋಕ್:
ದರ್ಶನ್ ಪ್ರಕರಣ ಬಗ್ಗೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾನೂನಿಗಿಂತ ಯಾರೂ ದೊಡ್ಡವರಿಲ್ಲ, ಎಲ್ಲರಿಗೂ ಕಾನೂನು ಒಂದೇ. ರೇಣುಕಾಸ್ವಾಮಿ ಅಮಾಯಕ, ಆತನ ದೇಹ ನೋಡಿ ಅಯ್ಯೋ ಅನಿಸಿತು.
ಆತನ ಪತ್ನಿ ಐದು ತಿಂಗಳ ಗರ್ಭಿಣಿ ಪಾಪ. ದರ್ಶನ್ ಸೈಬರ್ ಕ್ರೈಂಗೆ ದೂರು ಕೊಡಬಹುದಿತ್ತು. ಹಾಗೆ ಮಾಡದೇ ದರ್ಶನ್ ಕಾನೂನು ಕೈಗೆ ತೆಗೆದುಕೊಂಡಿದ್ದಾರೆ. 13 – 15 ಜನ ಹೊಡೆದು ಸಾಯಿಸಿದ್ದಾರೆ. ಕಾನೂನು ಪ್ರಕಾರ ಪೊಲೀಸರು ಸರಿಯಾದ ಕ್ರಮ ತಗೋಬೇಕು ಎಂದು ಹೇಳಿದರು.
ಕಾನೂನು ಕೈಗೆ ತೆಗೆದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ:
ಸಂಸದರಾಗಿ ಆಯ್ಕೆಯಾದ ಬಳಿಕ ಮಂತ್ರಿಗಿರಿ ನಿರೀಕ್ಷೆಯಲ್ಲಿ ದೆಹಲಿಗೆ ತೆರಳಿದ್ದ ಬಸವರಾಜ್ ಬೊಮ್ಮಾಯಿ, ನರೇಂದ್ರ ಮೋದಿ ಪ್ರಮಾಣ ವಚನ ಸಮಾರಂಭದಲ್ಲಿ ಭಾಗಿಯಾದ ಬಳಿಕ ಹುಬ್ಬಳ್ಳಿಗೆ ಮರಳಿದ್ದಾರೆ. ಈ ವೇಳೆ ಮಾದ್ಯಮದವರೊಂದಿಗೆ ರೇಣುಕಾಸ್ವಾಮಿ ಕೊಲೆ ಖಂಡಿಸಿರುವ ಅವರು, ಸೆಲೆಬ್ರಿಟಿಗಳು, ರಾಜಕಾರಣಿಗಳು ಸೇರಿದಂತೆ ಕಾನೂನು ಮುಂದೆ ಎಲ್ಲರೂ ಸಮಾನರು. ಅಮಾನವೀಯವಾಗಿ ವರ್ತನೆ ಮಾಡುವಂಥದ್ದು, ಕೈಗೆ ಕಾನೂನು ತೆಗೆದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ, ಅದು ಅಕ್ಷಮ್ಯ ಎಂದು ಬೊಮ್ಮಾಯಿ ಖಂಡಿಸಿದ್ದಾರೆ.
ಯಾವುದೇ ಪ್ರಕರಣ ಆಗಿರಲಿ, ತಪ್ಪಿತಸ್ಥರು ಯಾರೇ ಇರಲಿ ಮರ್ಡರ್ ಹಂತಕ್ಕೆ ಹೋದರೆ ಬಹಳ ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡಬೇಕಾಗುತ್ತದೆ. ಈ ಪ್ರಕರಣದ ಪ್ರಾರಂಭದಲ್ಲಿ ತನಿಖಾ ಅಧಿಕಾರಿಗಳು ಚುರುಕಾಗಿ ಕೆಲಸ ಮಾಡುತ್ತಿದ್ದಾರೆ. ಕೊನೆವರೆಗೂ ಚುರುಕಾಗಿ ಕಾನೂನು ಬದ್ಧವಾಗಿ ಕೆಲಸ ಮಾಡಿದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.