ನಟ ದರ್ಶನ್ ಮತ್ತು ಸಹಚಚರಿಂದ ಬೆಂಗಳೂರಿನ ಕಾಮಾಕ್ಷಿ ಪಾಳ್ಯದಲ್ಲಿ ರೇಣುಕಾಸ್ವಾಮಿ ಎನ್ನುವ ವ್ಯಕ್ತಿಯನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿಂತೆ ನಟ ದರ್ಶನ್ ಮತ್ತು ಸಹಚರರನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ. ದರ್ಶನ್ ಗೆಳತಿ ಪವಿತ್ರಾ ಗೌಡ ಸೋಶಿಯಲ್ ಮೀಡಿಯಾ ಪೋಸ್ಟ್ಗಳಿಗೆ ರೇಣುಕಾ ಸ್ವಾಮಿ ಕೆಟ್ಟ ಕಾಮೆಂಟ್ ಹಾಕುತ್ತಿದ್ದದ್ದೇ ಇದಕ್ಕೆ ಕಾರಣ ಎನ್ನಲಾಗಿದೆ.
ಈ ಹಿಂದೆ ಕೂಡ ಸಾಕಷ್ಟು ವಿವಾದಗಳಿಂದ ನಟ ದರ್ಶನ್ ಸುದ್ದಿ ಆಗಿದ್ದರು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 12 ವರ್ಷಗಳ ಹಿಂದೆ ನಟ ದರ್ಶನ್ ಸೆರೆವಾಸವನ್ನು ಸಹ ಅನುಭವಿಸಿದ್ದರು.
ಮಾಸ್ ಹೀರೊ ಆಗಿ ಸಿನಿರಸಿಕರ ಮನಗೆದ್ದ ನಟ ದರ್ಶನ್ ತಮ್ಮ ಮಾಸ್ ನಡೆ ನುಡಿಯಿಂದ ನಿಜ ಜೀವನದಲ್ಲಿ ಸಾಕಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ದರ್ಶನ್ ವಿವಾದಗಳ ಹಿಂದೆ ಹೋಗುತ್ತಾರೋ ಅಥವಾ ವಿವಾದಗಳು ದರ್ಶನ್ ಅವರನ್ನು ಬಿಡಲ್ವೋ ಗೊತ್ತಿಲ್ಲ. ಸದಾ ಒಂದಿಲ್ಲೊಂದು ವಿವಾದದಿಂದ ದರ್ಶನ್ ಸುದ್ದಿ ಆಗುತ್ತಿರುತ್ತಾರೆ. ಇನ್ನು ದರ್ಶನ್ ವಿವಾದಗಳ ಪಟ್ಟಿ ಮುಂದೆ ಇದೆ ಓದಿ.
ಇದನ್ನೂ ಓದಿ: ಕೊಲೆ ಪ್ರಕರಣದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂಧನ!
1. ಪತ್ನಿ ಮೇಲೆ ಹಲ್ಲೆ
2011ರಲ್ಲಿ ನಟ ದರ್ಶನ್ ತಮ್ಮ ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ನಡೆಸಿದ್ದು ಭಾರೀ ಚರ್ಚೆ ಹುಟ್ಟು ಹಾಕಿತ್ತು. ಸೆಪ್ಟೆಂಬರ್ 8, 2011ರಲ್ಲಿ ನಟ ದರ್ಶನ್ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು ಎನ್ನಲಾಗಿತ್ತು. ಈ ಸಂಬಂಧ ಸ್ವತಃ ಪತ್ನಿ ವಿಜಯಲಕ್ಷ್ಮೀ ವಿಜಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮರು ದಿನವೇ ಪೊಲೀಸರು ದರ್ಶನ್ ಅವರನ್ನು ಬಂಧಿಸಿದ್ದರು.
ಇನ್ನು ಈ ಪ್ರಕರಣದಲ್ಲಿ ನಟಿ ನಿಖಿತಾ ತುಕ್ರಾಲ್ ಹೆಸರು ಕೇಳಿ ಬಂದಿತ್ತು. 28 ದಿನಗಳ ಕಾಲ ದರ್ಶನ್ ಜೈಲಿನಲ್ಲಿದ್ದರು. ಇದೇ ಸಮಯದಲ್ಲಿ ‘ಸಾರಥಿ’ ಸಿನಿಮಾ ರಿಲೀಸ್ ಆಗಿ ಗೆದ್ದಿತ್ತು. ಬಳಿಕ ರಾಜಿ ಸಂಧಾನ ನಡೆದು ಪ್ರಕರಣ ಸುಖಾಂತ್ಯ ಕಂಡಿತ್ತು.
2. ದರ್ಶನ್ – ಸುದೀಪ್ ದೂರಾ ದೂರ
ನಟ ಸುದೀಪ್ ಹಾಗೂ ನಟ ದರ್ಶನ್ ಬಹಳ ಆತ್ಮೀಯ ಸ್ನೇಹಿತರಾಗಿದ್ದರು. ಆದರೆ ಅದೊಂದು ದಿನ ಇದ್ದಕ್ಕಿದಂತೆ “ನಾನು ಹಾಗೂ ಸುದೀಪ್ ಸ್ನೇಹಿತರಲ್ಲ, ನಾವು ಕೇವಲ ಕನ್ನಡ ಚಿತ್ರರಂಗದ ನಟರಷ್ಟೆ. ಯಾವುದೇ ಉಹಾಪೋಹಗಳು ಬೇಡ. ಎಲ್ಲಾ ಮುಗೀತು” ಎಂದು ದರ್ಶನ್ ಟ್ವೀಟ್ ಮಾಡಿದ್ದರು. ಆ ಮೂಲಕ ಕಿಚ್ಚನ ಜೊತೆಗಿನ ಸ್ನೇಹಕ್ಕೆ ಎಳ್ಳು ನೀರು ಬಿಟ್ಟರು. ಆ ಬಳಿಕ ಎಂದೂ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳಲಿಲ್ಲ. ಸಂದರ್ಶನವೊಂದರಲ್ಲಿ ದರ್ಶನ್ಗೆ ‘ಮೆಜೆಸ್ಟಿಕ್’ ಸಿನಿಮಾ ಅವಕಾಶ ಕೊಡಿಸಿದ್ದು ನಾನೇ. ಆ ಚಿತ್ರವನ್ನ ನಾನೇ ಮಾಡಬೇಕಿತ್ತು. ಆದರೆ ನನ್ನ ಡೇಟ್ಸ್ ಇಲ್ಲದ ಕಾರಣಕ್ಕೆ ಆ ಅವಕಾಶವನ್ನ ದರ್ಶನ್ಗೆ ಕೊಡಿಸಿದೆ ಎಂದು ಸುದೀಪ್ ಹೇಳಿದ್ದರು. ಇದರ ಬಗ್ಗೆ ಸುದೀಪ್ ಕ್ಲಾರಿಟಿ ಕೊಡಲಿ ಎಂದು ದರ್ಶನ್ ಆಗ್ರಹಿಸಿದ್ದರು.
3. ‘ಚಿಂಗಾರಿ’ ನಿರ್ಮಾಪಕರ ಜೊತೆ ಕಿರಿಕ್?
ದರ್ಶನ್ ನಟನೆಯ ‘ಚಿಂಗಾರಿ’ ಸಿನಿಮಾ 2012ರಲ್ಲಿ ಬಿಡುಗಡೆಯಾಗಿ ಯಶಸ್ಸು ಕಂಡಿತ್ತು. ಆದರೆ ಸಿನಿಮಾ ಸಕ್ಸಸ್ ಬೆನ್ನಲ್ಲೇ ಚಿತ್ರದ ನಿರ್ಮಾಪಕ ಮಹದೇವ್ ಹಾಗೂ ದರ್ಶನ್ ನಡುವೆ ಕಿರಿಕ್ ನಡೆದಿದೆ ಎನ್ನುವ ಸುದ್ದಿ ಹರಿದಾಡಿತ್ತು. ನಟ ದರ್ಶನ್, ಚಿತ್ರದ ನಿರ್ಮಾಪಕರಿಗೆ ಕರೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು ಎನ್ನುವ ಗುಸುಗುಸು ಕೇಳಿ ಬಂದಿತ್ತು.
4. ಬುಲೆಟ್ ಪ್ರಕಾಶ್- ದಿನಕರ್ ಕಿರಿಕ್
‘ಸುಲ್ತಾನ್’ ಸಿನಿಮಾ ವಿಚಾರವಾಗಿ ನಟ ಬುಲೆಟ್ ಪ್ರಕಾಶ್ ಹಾಗೂ ದರ್ಶನ್ ಸಹೋದರ ದಿನಕರ್ ನಡುವೆ ಸಣ್ಣ ಜಗಳವಾಗಿತ್ತು. ತಮಿಳಿನ ‘ಪೂಜೈ’ ಸಿನಿಮಾ ರೈಟ್ಸ್ ತಂದು ದರ್ಶನ್ ಜೊತೆ ಸಿನಿಮಾ ಮಾಡಲು ಬುಲೆಟ್ ಪ್ರಕಾಶ್ ಮುಂದಾಗಿದ್ದರು. ಆದರೆ ಸಿನಿಮಾ ಪ್ರಮೋಷನ್ ವಿಚಾರದಲ್ಲಿ ದಿನಕರ್ ಹಾಗೂ ಬುಲೆಟ್ ನಡುವೆ ಕಿರಿಕ್ ಆಗಿ ದಿನಕರ್ ವಿರುದ್ಧ್ ಬುಲೆಟ್ ಪ್ರಕಾಶ್ ದೂರು ದಾಖಲಿಸಿದ್ದರು. ಈ ವಿವಾದದಲ್ಲಿ ನೇರವಾಗಿ ದರ್ಶನ್ ಹೆಸರು ಬರದೇ ಇದ್ದರೂ ಭಾರೀ ಸುದ್ದಿ ಆಗಿದ್ದಂತೂ ಸುಳ್ಳಲ್ಲ.
4. ಜ್ಯೂ. ಆರ್ಟಿಸ್ಟ್ ಮೇಲೆ ದರ್ಶನ್ ಹಲ್ಲೆ?
‘ಯಜಮಾನ’ ಚಿತ್ರದ ಹಾಡಿನ ಚಿತ್ರೀಕರಣದ ವೇಳೆ ನಟ ದರ್ಶನ್ ಹಲ್ಲೆ ನಡೆಸಿದ್ದಾರೆಂದು ಸಹ ಕಲಾವಿದ ಶಿವಶಂಕರ್ ಆರೋಪಿಸಿದ್ದರು. ಹಾಡಿನ ಚಿತ್ರೀಕರಣದ ವೇಳೆಗೆ ಮೊಬೈಲ್ನಲ್ಲಿ ಚಿತ್ರೀಕರಣ ನಡೆಸುತ್ತಿದ್ದರು ಎನ್ನುವ ಕಾರಣಕ್ಕೆ ದರ್ಶನ್ ಗರಂ ಆಗಿದ್ದರು ಎನ್ನುವ ಗುಸುಗುಸು ಕೇಳಿ ಬಂದಿತ್ತು. ಕೋಟ್ಯಂತರ ರೂಪಾಯಿ ಹಾಕಿ ಸಿನಿಮಾ ನಿರ್ಮಾಣ ಮಾಡಲಾಗುತ್ತದೆ. ಆದರೆ ಚಿತ್ರೀಕರಣದ ವೇಳೆಗೆ ಈ ರೀತಿ ದೃಶ್ಯಗಳನ್ನು ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಡುವುದು ತಪ್ಪು ಎನ್ನುವ ಕಾರಣಕ್ಕೆ ದರ್ಶನ್ ಅಸಮಾಧನಗೊಂಡಿದ್ದರು ಎನ್ನಲಾಗಿತ್ತು.