ಬೆಂಗಳೂರು : ಯಾವುದೋ ವಿಚಾರ ಕುರಿತು ಮಾತನಾಡಿದ್ದಕ್ಕೆ ದೇವರಾಜೇಗೌಡ ನನ್ನನ್ನೇ ಸಿಲುಕಿಸಿದ್ದಾನೆ ಎಂದು ದೇವರಾಜೇಗೌಡ ವಿರುದ್ಧ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವನು ನಾಲಾಯಕ್. ಹುಚ್ಚುನಾಯಿ ಯಾರನ್ನು ಬೇಕಾದ್ರೂ ಕಡಿಯುತ್ತದೆ. ಇನ್ನು ಯಾರದ್ದು ರೆಕಾರ್ಡಿಂಗ್ ಮಾಡಿಕೊಂಡಿದ್ದಾನೋ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಪೆನ್ಡ್ರೈವ್ಗೂ ನನಗೂ ಸಂಬಂಧ ಇಲ್ಲ. ಈ ಪ್ರಕರಣದ ಬಗ್ಗೆ SIT ತನಿಖೆ ಮಾಡುತ್ತಿದೆ. ದೇವರಾಜೇಗೌಡ ಕರೆತರಲು ಡಿ.ಕೆ. ಶಿವಕುಮಾರ್ ನನಗೆ ತಿಳಿಸಿರಲಿಲ್ಲ. ದೇವರಾಜೇಗೌಡ ಭೇಟಿ ಮಾಡಿಸಿ ಅಂದಿದ್ರು. ಅದಕ್ಕೆ ಕಾಲ್ ಮಾಡಿದ್ದೆ, ಕರೆ ಮಾಡಿದ್ದಕ್ಕೆ ಷಡ್ಯಂತ್ರ ಮಾಡಿದ್ದಾರೆ. ನನ್ನ ಹೆಸರು ಇದ್ರಲ್ಲಿ ತಳುಕು ಹಾಕೊಂಡಿದೆ, ಪ್ರಾಮಾಣಿಕವಾಗಿ ತನಿಖೆಯಾಗಲಿ ಎಂದು ತಿಳಿಸಿದ್ದಾರೆ.
ದೇವರಾಜೇಗೌಡ ಹೇಳಿದ್ದೆಲ್ಲ ನೂರಕ್ಕೆ ನೂರು ಸತ್ಯ
ವಕೀಲ ದೇವರಾಜೇಗೌಡ ಬಳಿ ಸಾಕ್ಷ್ಯ ಇದೆ ಎಂದೇ ಅವರನ್ನು ಬಂಧನ ಮಾಡಲಾಗಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ದೇವರಾಜೇಗೌಡ ಹೊರಗಿದ್ರೆ ದಾಖಲೆ ಬಿಡ್ತಾರೆ ಅಂತ ಭಯ ಇದೆ. ಈ ಕಾರಣದಿಂದಲೇ ಅರೆಸ್ಟ ಮಾಡಲಾಗಿದೆ. ಮೊನ್ನೆ ದೇವರಾಜೇಗೌಡ ಏನೆಲ್ಲ ಆರೋಪ ಮಾಡಿದ್ದಾರೋ ಅದೆಲ್ಲ ನಿಜ ಇರಬೇಕು. ಅದಕ್ಕೆಲ್ಲ ಅವರ ಬಳಿ ಸಾಕ್ಷ್ಯ ಇದೆ ಎನಿಸುತ್ತದೆ. ದೇವರಾಜೇಗೌಡ ಹೇಳಿದ್ದೆಲ್ಲ ನೂರಕ್ಕೆ ನೂರು ಸತ್ಯ ಎಂದು ಆರ್. ಅಶೋಕ್ ಹೇಳಿದ್ದಾರೆ.