ಬೆಂಗಳೂರು : ಅಕ್ರಮ ಸಂಬಂಧ ಹಿನ್ನಲೆ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕೋರಂಮಗಲದ 6ನೇ ಬ್ಲಾಕ್ನಲ್ಲಿ ನಡೆದಿದೆ.
ಹೆಂಡತಿ ಮೇಲೆ ಅನುಮಾನ ಪಟ್ಟು ಕೋರಂಮಗಲದ ಪೊಲೀಸ್ ಠಾಣೆ ಕೂಗಳತೆ ದೂರದಲ್ಲಿ ಈ ಕೊಲೆ ನಡೆದಿದೆ. ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಹಂತಕ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಸೆಲ್ವಿನ್ ಫ್ರಾನ್ಸಿಸ್ ಬಂಧಿತ ಆರೋಪಿ. ಇಂದು ಮೃತಪಟ್ಟಿರುವ ಪತ್ನಿ. ಹತ್ಯೆ ನಡೆದು 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸೆಲ್ವಿನ್ ಮತ್ತು ಇಂದು ಕಳೆದ 12 ವರ್ಷದ ಹಿಂದೆ ಪ್ರೀತಿಸಿ, ಮದುವೆ ಆಗಿದ್ದರು. ಆದರೆ, ಕಳೆದ ಒಂದು ವರ್ಷದಿಂದ ಕುಟುಂಬದಲ್ಲಿ ವೈಮನಸ್ಸು ಉಂಟಾಗಿತ್ತು. 5 ತಿಂಗಳ ಹಿಂದೆ ಇಬ್ಬರು ಬೇರೆ ಕೂಡ ಆಗಿದ್ದರು. ನಂತರ ಇಂದು ವೆಂಕಟಾಪುರದಲ್ಲಿದ್ದ ತನ್ನ ತಾಯಿ ಮನೆಯಲ್ಲಿ ಮಕ್ಕಳೊಂದಿಗೆ ವಾಸವಿದ್ದಳು. ಆದರೂ, ಒಂದಲ್ಲ ಒಂದು ರೂಪದಲ್ಲಿ ಇವರಿಬ್ಬರ ನಡುವಿನ ವೈಮನಸ್ಸು ಮುಂದುವರೆಯುತ್ತಲೇ ಇತ್ತು.
ಸೆಲ್ವಿನ್ ಯಾವಾಗಲೂ ಇಂದುವನ್ನು ಅಕ್ರಮ ಸಂಬಂಧದ ಹಿನ್ನಲೆಯಲ್ಲಿ ಅನುಮಾನಿಸುತ್ತಲೇ ಇದ್ದ. ಮೇ 2ರಂದು ಅದೇನಾಯ್ತೋ ಏನೋ, ಕೋರಮಂಗಲ ಪೊಲೀಸ್ ಠಾಣೆ ಮತ್ತು ಡಿಸಿಪಿ ಕಚೇರಿಯಿಂದ ಕೆಲವೇ ಮೀಟರ್ ಗಳಷ್ಟು ಅಂತರದಲ್ಲಿ ಪತಿ ಸೆಲ್ವಿನ್ ಫ್ರಾನ್ಸಿಸ್ ಇಂದುಳನ್ನ ಚಾಕುವಿನಿಂದ ಹಲವು ಬಾರಿ ಚುಚ್ಚಿ ಕೊಂದು ಬಿಟ್ಟಿದ್ದಾನೆ.
ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಪತ್ನಿ
ಕಳೆದ ಐದು ತಿಂಗಳ ಹಿಂದೆ ಬೇರೆಯಾದರೂ ಇವರಿಬ್ಬರ ಜಗಳ ಮುಂದುವರೆದಿತ್ತು. ಈ ಹಿನ್ನಲೆ ಪತಿ ಸೆಲ್ವಿನ್ ತಾನು ಕೆಲಸ ಮಾಡುವ ಜಾಗದಲ್ಲೂ ತೊಂದರೆ ಕೊಡುತ್ತಿದ್ದಾನೆಂದು ಪತ್ನಿ ಠಾಣೆ ಮೆಟ್ಟಿಲೇರಿದ್ದಳು. ಘಟನೆಯ ದಿನವೂ ಠಾಣೆಗೆ ಬಂದಿದ್ದಳು. ಸೆಲ್ವಿನ್ಗೆ ಪೊಲೀಸರು ಕರೆ ಮಾಡಿದ್ದರು. ತಾನು ದೂರದಲ್ಲಿ ಇದ್ದೇನೆ ಎಂದು ಸೆಲ್ವಿನ್ ಹೇಳಿದ್ದ. ಆದರೆ, ಯಾರಿಗೂ ತಿಳಿಯದಂತೆ ನೇರವಾಗಿ ಪೊಲೀಸ್ ಠಾಣೆಯ ಬಳಿ ಸೆಲ್ವಿನ್ ಬಂದಿದ್ದ.
ಠಾಣೆ ಬಳಿಯೇ ಕೊಂದ ಪತಿ
ಇಂದು ಪೊಲೀಸ್ ಠಾಣೆಯಿಂದ ಹೊರಬರುವುದನ್ನೇ ಕಾದು ಕುಳಿತಿದ್ದ ಸೆಲ್ವಿನ್, ಆಕೆಯನ್ನು ಮಾತನಾಡಿಸಿಕೊಂಡು ಕೊಂಚ ದೂರ ಕರೆದೊಯ್ದಿದ್ದ. ಬಳಿಕ, ಚಾಕುವಿನಿಂದ ಹಲವು ಬಾರಿ ಇರಿದಿದ್ದಾನೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ತಕ್ಷಣವೇ ಇಂದುವನ್ನು ಆಸ್ಪತ್ರೆಗೆ ರವಾನೆ ಮಾಡಿದರಾದರೂ, ಆಕೆ ಮೃತಪಟ್ಟಿದ್ದಾಳೆ. ಇತ್ತ, ಇಂದು ಮತ್ತು ಸೆಲ್ವಿನ್ ದಂಪತಿಯ ಮಕ್ಕಳು ತಬ್ಬಲಿಗಳಾಗಿದ್ದಾರೆ.