Tuesday, July 9, 2024

ದೇವೇಗೌಡ್ರು ಮಗ ಎಂಬ ಕಾರಣಕ್ಕೆ ಕುಮಾರಸ್ವಾಮಿಗೆ ಬೆಲೆ : ಚಲುವರಾಯಸ್ವಾಮಿ

ಶಿವಮೊಗ್ಗ : ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡರ ಮಗ ಎಂಬ ಕಾರಣಕ್ಕೆ ಕುಮಾರಸ್ವಾಮಿಗೆ ಬೆಲೆ ಇದೆ ಅಷ್ಟೇ. ಮೊದಲಿನಿಂದಲೂ ಅವರು ಹೆದರಿಸುವ, ಬೆದರಿಸುವ ಕೆಲಸವನ್ನೇ ಮಾಡಿಕೊಂಡು ಬಂದಿದ್ದಾರೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಕುಟುಕಿದರು.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ರಚಿಸಿದೆ. ಅವರೊಬ್ಬ ಮಾಜಿ ಪ್ರಧಾನಿ ಮಗ, ಎರಡು ಬಾರಿ ಸಿಎಂ ಆಗಿದ್ದವರು. ಅವರ ಸರ್ಕಾರ ಇದ್ದಾಗ ನಮ್ಮ ಪೊಲೀಸರು ಒಳ್ಳೆಯವರು. ಬೇರೆ ಸರ್ಕಾರ ಇದ್ದಾಗ ನಂಬಿಕೆ ಇರಲ್ಲ ಎಂದರೆ ಹೇಗೆ? ಎಂದು ಪ್ರಶ್ನೆ ಮಾಡಿದರು.

ಪ್ರಜ್ವಲ್ ರೇವಣ್ಣ ಪ್ರಕರಣದ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಾಗಬೇಕಲ್ಲವೇ? ಎಸ್ಐಟಿ ತನಿಖೆಯಿಂದ ಸತ್ಯಾಂಶ ಹೊರಬರಲಿ ಎಂದ‌ ಕುಮಾರಸ್ವಾಮಿಗೆ ಈಗ ಏಕೆ ಅನುಮಾನ ಬಂತೋ ಗೊತ್ತಿಲ್ಲ. ಅವರು ಆಡುವ ಪ್ರತಿಯೊಂದು ಮಾತು ದೇವೇಗೌಡರ ಮೇಲೆ ಪರಿಣಾಮ ಬೀರುತ್ತದೆ. ಕುಮಾರಸ್ವಾಮಿ ನನ್ನ ಸ್ನೇಹಿತರಾಗಿದ್ದವರು. ಅವರಿಂದ ಇಂತಹದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಚಾಟಿ ಬೀಸಿದರು.

ಇದೊಂದು ಸಾಮಾನ್ಯ ಪ್ರಕರಣವೇ?

ಈ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಮುಚ್ಚಿ ಹಾಕಿದರೆ ಜನ ಬಿಡುತ್ತಾರೆಯೇ? ಅಷ್ಟಕ್ಕೂ ಇದೊಂದು ಸಾಮಾನ್ಯ ಪ್ರಕರಣವೇ..? ಇಡೀ ದೇಶದಲ್ಲೇ ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿರುವ ಪ್ರಕರಣ ಇದು. ಒಬ್ಬ ಸಾಮಾನ್ಯ ವ್ಯಕ್ತಿ ಮಾಡುವಂತಹ ಕೆಲಸ ಇದಲ್ಲ ಎಂದು ಅಸಮಾಧಾನ ಹೊರಹಾಕಿದರು.

ಪಟ್ಟು ಹಿಡಿದು ಟಿಕೆಟ್​​​ ಕೊಡಿಸಿದ್ದಾರೆ

ಪ್ರಧಾನಿ ಮೋದಿ, ಅಮಿತ್ ಶಾ, ಅವರಿಗೆ ಈ ರೀತಿಯ ವಿಚಾರ ಸಿಕ್ಕಿದ್ರೆ ಅವರು ಸುಮ್ಮನಿರುತ್ತಿದ್ರಾ? ಅಮಿತ್ ಶಾ ಅವರಿಗೆ ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ಕೊಡುತ್ತಿರಲಿಲ್ಲ. ಜೆಡಿಎಸ್ ವರಿಷ್ಠರು ಟಿಕೆಟ್ ಕೊಡಬೇಕೆಂಬ ಪಟ್ಟು ಹಿಡಿದ್ದಿದ್ದರು. ಪ್ರಜ್ವಲ್ ವಿಷಯ ಬಿಜೆಪಿ ನಾಯಕರಿಗೆ ಮೊದಲೇ ಗೊತ್ತಿತ್ತು. ಹಾಗಾಗಿ, ಪ್ರಜ್ವಲ್​​ಗೆ ಟಿಕೆಟ್ ನೀಡಲು ಬಿಜೆಪಿ ನಾಯಕರು ಒಪ್ಪಿರಲಿಲ್ಲ. ಆದರೆ, ಜೆಡಿಎಸ್ ನಾಯಕರ ಒತ್ತಡಕ್ಕೆ ಮಣಿದು ಟಿಕೆಟ್ ನೀಡಿದ್ದರು ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.

RELATED ARTICLES

Related Articles

TRENDING ARTICLES