ಹುಬ್ಬಳ್ಳಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇಹಾ ತಂದೆ ನಿರಂಜನ್ ಹಿರೇಮಠ ಅವರ ಬಳಿ ಫೋನ್ನಲ್ಲಿ ಮಾತನಾಡಿದ್ದಾರೆ. ಈ ವೇಳೆ ‘ವೆರಿ ಸಾರಿ’ ಎಂದು ಕ್ಷಮೆ ಕೋರಿದ್ದಾರೆ.
ನೇಹಾ ಕೊಲೆ ವೈಯಕ್ತಿಕ ವಿಚಾರವಾಗಿ ನಡೆದ ಕೊಲೆ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದರು. ಇದಕ್ಕೆ ನೇಹಾ ತಂದೆ ಆಕ್ರೋಶ ವ್ಯಕ್ತಪಡಿಸಿದ್ದರು.
ಸಚಿವ ಹೆಚ್.ಕೆ. ಪಾಟೀಲ್ ಇಂದು ನಿರಂಜನ ಹಿರೇಮಠ ಅವರ ನಿವಾಸಕ್ಕೆ ಭೇಟಿ ನೀಡಿ, ಸಾಂತ್ವನ ಹೇಳಿದರು. ಈ ವೇಳೆ ಹೆಚ್.ಕೆ. ಪಾಟೀಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಕರೆ ಮಾಡಿದರು. ಆಗ ಸಿಎಂ ಸಿದ್ದರಾಮಯ್ಯ, ನೇಹಾ ತಂದೆ ನಿರಂಜನ ಹಿರೇಮಠ ಜೊತೆ ಮಾತನಾಡಿದರು.
‘ನಾವು ನಿಮ್ಮ ಜೊತೆ ಇರುತ್ತೇವೆ. ವೆರಿ ಸಾರಿ’ (ನನ್ನನ್ನು ಕ್ಷಮಿಸು) ಎಂದರು. ಈ ಪ್ರಕರಣವನ್ನು ಸಿಐಡಿಗೆ ನೀಡಿದ್ದಕ್ಕೆ ನಿಮಗೆ ಧನ್ಯವಾದ ಅಂತ ನಿರಂಜನ ಹಿರೇಮಠ ಸಿಎಂಗೆ ಹೇಳಿದರು. ಬಳಿಕ ಹೆಚ್.ಕೆ ಪಾಟೀಲ್ ಮಾತನಾಡಿ, ಪ್ರಕರಣವನ್ನು ಸಿಐಡಿಗೆ ಹಸ್ತಾಂತರ ಮಾಡಿದ್ದಕ್ಕೆ ಸಮಾಧಾನ ಇದೆ. ವಿಶೇಷ ನ್ಯಾಯಾಲಯ ಸ್ಥಾಪನೆ ವಿಚಾರಕ್ಕೂ ಸಮಾಧಾನ ಇದೆ ಎಂದು ಸಿದ್ದರಾಮಯ್ಯಗೆ ಮಾಹಿತಿ ನೀಡಿದರು.
ನಾನು ತಪ್ಪಾಗಿ ಮಾತನಾಡಿದ್ದರೆ ಕ್ಷಮಿಸಿ
ಸಿಎಂ ಸಿದ್ದರಾಮಯ್ಯ ಜೊತೆ ಮಾತನಾಡಿದ ನೇಹಾ ತಂದೆ ನಿರಂಜನ್ ಹಿರೇಮಠ, ನಾನು ತಪ್ಪಾಗಿ ಮಾತನಾಡಿದ್ದರೆ ಕ್ಷಮಿಸಿ. ಕಮಿಷನರ್ ಬಗ್ಗೆಯೂ ತಪ್ಪಾಗಿ ಮಾತನಾಡಿದ್ದೇನೆ. ದುಃಖದಲ್ಲಿ ಮಾತನಾಡಿದ್ದೇನೆ ದಯವಿಟ್ಟು ಕ್ಷಮಿಸಿ. ನನ್ನ ಬೆನ್ನ ಹಿಂದೆ ನಿಂತು ಸರ್ಕಾರ ಕೆಲಸ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಜೊತೆ ಮಾತನಾಡಿದ್ದಾರೆ.