ಆನೇಕಲ್ : ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ, ಮಗನೇ ಚಿಕ್ಕಪ್ಪನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ರಾಜ್ಯ ಗಡಿಭಾಗದ ತಮಿಳುನಾಡಿನ ಕಾವೇರಿ ಪಟ್ಟಣಂ ಸಮೀಪದ ಚಂದಾಪುರ ಗ್ರಾಮದಲ್ಲಿ ನಡೆದಿದೆ.
55 ವರ್ಷದ ಚಿನ್ನವನ್ ಎಂಬಾತ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ. 25 ವರ್ಷದ ಸೆಂಥಿಲ್ ಚಿಕ್ಕಪ್ಪನಿಗೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟ ಆರೋಪಿಯಾಗಿದ್ದಾನೆ.
ಇದನ್ನೂ ಓದಿ: ATM ನಲ್ಲಿ ಅಗ್ನಿ ಅವಘಡ, 5 ಲಕ್ಷ ಹಣ ಭಸ್ಮ
ಘಟನೆಯ ಹಿನ್ನೆಲೆ :
ಕಳೆದ ಕೆಲ ವರ್ಷಗಳಿಂದ ಎರಡು ಕುಟುಂಬಗಳ ನಡುವೆ ಜಮೀನು ವಿವಾದ ನಡೆಯುತ್ತಿತ್ತು. ಸೆಂಥಿಲ್ ಜಮೀನಿಗೆ ಚಿನ್ನವನ್ ಅವರ ಜಮೀನಿನ ಮೂಲಕವೇ ಓಡಾಡಬೇಕಿತ್ತು ಎನ್ನಲಾಗಿದೆ. ಆದರೆ ತನ್ನ ಜಮೀನಿನಲ್ಲಿ ಓಡಾಡಬಾರದೆಂದು ಚಿನ್ನವನ್ ಕುಟುಂಬ ಅಡ್ಡಿ ಪಡಿಸಿತ್ತು ಎನ್ನಲಾಗಿದೆ. ಈ ಸಂಬಂಧ ಕಳೆದ ನವೆಂಬರ್ 19ನೇ ತಾರೀಖಿನಂದು ಎರಡು ಕುಟುಂಬಗಳ ನಡುವೆ ಗಲಾಟೆಗೆ ಕಾರಣವಾಗಿತ್ತುಎನ್ನಲಾಗಿದೆ. ಆ ಬಳಿಕ ಸೆಂಥಿಲ್ ಕುಟುಂಬ ಕಾವೇರಿಪಟ್ಟಣಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಪರಿಹಾರಕ್ಕಾಗಿ ಪೊಲೀಸರ ಮೊರೆ ಹೋಗಿದ್ದರು ಎನ್ನಲಾಗಿದೆ. ಆದರೆ ಅಂದಿನಿಂದ ಇಲ್ಲಿಯವರೆಗೆ ಯಾರಿಗೂ ಸಿಗದೆ ಚಿನ್ನವನ್ ಕುಟುಂಬ ಪರಾರಿಯಾಗಿತ್ತು ಎನ್ನಲಾಗಿದೆ.
ಈ ನಡುವೆ ನಿನ್ನೇ ಕಾವೇರಿಪಟ್ಟಣಂನ ಅಂಗಡಿ ಸಮೀಪ ಚಿನ್ನವನ್ ಎದುರಾಗಿದ್ದಾರೆ. ಈ ವೇಳೆ ವಾಟರ್ ಬಾಟಲ್ ನಲ್ಲಿ ಪೆಟ್ರೋಲ್ ತಂದಿದ್ದ ಸೆಂಥಿಲ್, ನಡುರಸ್ತೆಯಲ್ಲಿ ಚಿನ್ನವನ್ ಮೇಲೆ ಪೆಟ್ರೋಲ್ ಎರಚಿ ನೋಡನೋಡುತ್ತಿದ್ದಂತೆ ಬೆಂಕಿ ಹಚ್ಚಿದ್ದಾನೆ.
ಈ ವೇಳೆ ಅಲ್ಲಿನ ಜನರು ಸೆಂಥಿಲ್ ನನ್ನು ಹಿಡಿಯಲು ಮುಂದಾಗಿದ್ದು, ಆದರೆ ಅವರನ್ನು ಪಕ್ಕಕ್ಕೆ ತಳ್ಳಿ ಆಕ್ರೋಶಗೊಂಡಿದ್ದ ಸೆಂಥಿಲ್ ತನ್ನ ಚಿಕ್ಕಪ್ಪ ಚಿನ್ನವನ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಧಗಧಗನೆ ಹೊತ್ತಿಉರಿಯುತ್ತಿದ್ದ ಬೆಂಕಿಯಲ್ಲಿ ಚಿನ್ನವನ್ ನರಳಾಡುತ್ತಿದ್ದ ದೃಶ್ಯಗಳು ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಕಾವೇರಿಪಟ್ಟಣಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.