ಬೆಂಗಳೂರು : ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾನೂನು ಪ್ರಕಾರ ಎಲ್ಲರನ್ನು ಒದ್ದು ಒಳಗೆ ಹಾಕ್ತಾರೆ ಎಂದು ಹೇಳಿದ್ದಾರೆ.
ನಮ್ಮ ಮಂತ್ರಿಗಳನ್ನು ನೇಹಾ ಹಿರೇಮಠ ಮನೆಗೆ ಭೇಟಿ ಮಾಡುವುದಕ್ಕೆ ಹೇಳಿದ್ದೇವೆ. ಅವರು ಹೋಗ್ತಾರೆ, ಯಾವ ಕಾರಣಕ್ಕೂ ಕೊಲೆ ಆರೋಪಿಯನ್ನು ಬಿಡಲ್ಲ. ನಮ್ಮ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಡೀಲ್ ಮಾಡ್ತಾ ಇದ್ದಾರೆ. ಏನೂ ಮಾಡಬೇಕೋ ಅದನ್ನ ಮಾಡ್ತೇವೆ ಎಂದು ತಿಳಿಸಿದ್ದಾರೆ.
ರಾಜ್ಯಕ್ಕೆ ಮೋದಿ ಆಗಮನ ವಿಚಾರವಾಗಿ ಮಾತನಾಡಿ, ಬರಲಿ ಅನುದಾನ ಯಾಕೆ ಕೊಡಲಿಲ್ಲ ಹೇಳಲಿ. ಭದ್ರಾ ಮೇಲ್ದಂಡೆ ಯೋಜನೆ ದುಡ್ಡು ಯಾಕೆ ಕೊಟ್ಟಿಲ್ಲ ಹೇಳಲಿ. ಮಹದಾಯಿಗೆ ಯಾಕೆ ಪರ್ಮಿಶನ್ ಕೊಟ್ಟಿಲ್ಲ ಹೇಳಲಿ. ಮೇಕೆದಾಟಿಗೆ ಧೈರ್ಯವಾಗಿ ಯಾಕೆ ತೀರ್ಮಾನ ತೆಗೆದುಕೊಂಡಿಲ್ಲ ಹೇಳಲಿ ಎಂದು ಕುಟುಕಿದ್ದಾರೆ.
ಚೆಂಬು ಪ್ರತಿಭಟನೆಗೆ ನಾನು ಹೋಗಬೇಕಿತ್ತು
ಕೇಂದ್ರ ಸರ್ಕಾರ ವಿರುದ್ದ ಕಾಂಗ್ರೆಸ್ ಚೆಂಬು ಪ್ರತಿಭಟನೆ ವಿಚಾರವಾಗಿ ಮಾತನಾಡಿ, ಹೌದು. ಚೆಂಬು ಪ್ರತಿಭಟನೆಗೆ ನಾನು ಹೋಗಬೇಕಿತ್ತು. ನನಗೆ ಬೇರೆ ಏನೋ ಕೆಲಸ ಇತ್ತು. ಈಗ ನನಗೆ ಮೈಸೂರು, ಮಂಡ್ಯ ಪ್ರವಾಸವಿದೆ. ಪ್ರಧಾನಿ ಮೋದಿ ಕರ್ನಾಟಕಕ್ಕೆ ಕೊಟ್ಟಿರೋದು ಚೆಂಬು. ನಾವು ಪ್ರಶ್ನೆ ಕೇಳಿದ್ದೇವೆ, ಅದಕ್ಕೆ ಅವರು ಉತ್ತರ ಕೊಡಲಿ ಸಾಕು ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.