ಬೆಂಗಳೂರು ಗ್ರಾಮಾಂತರ : ಮುಂದಿನ ದಿನಗಳಲ್ಲಿ ಹಾರೋಹಳ್ಳಿ ಸುಂದರ ಪಟ್ಟಣವಾಗಿ ನಿರ್ಮಾಣ ಆಗುತ್ತೆ. ನಾನು ಸತ್ರೂ ಇದೇ ರಸ್ತೆಯಲ್ಲಿ ಹೋಗೋದು, ಬದುಕಿದ್ರೂ ಇಲ್ಲೇ ಓಡಾಡೋದು ಎಂದು ಸಂಸದ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಹೇಳಿದ್ದಾರೆ.
ಹಾರೋಹಳ್ಳಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ಬೆಂಗಳೂರು ಗ್ರಾಮಾಂತರದಲ್ಲಿ ನಾನು ಸಾಕಷ್ಟು ಓಡಾಡಿದ್ದೇನೆ. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಜನರ ಕಷ್ಟಸುಖ ಕೇಳಿದ್ದೇನೆ. ನಿಮ್ಮ ಆಶೀರ್ವಾದದಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಅಭಿವೃದ್ಧಿ ಪರವಾಗಿ ಸರ್ಕಾರ ಕೆಲಸ ಮಾಡ್ತಿದೆ. ಹಾರೋಹಳ್ಳಿ ಹೊಸ ತಾಲೂಕಾಗಿ ರಚನೆ ಆಗಿದೆ. ಆದರೆ, ಸೂಕ್ತ ತಾಲೂಕು ಕಚೇರಿ ಕಟ್ಟಡವಿಲ್ಲ. ಈಗಾಗಲೇ ಹೊಸ ಕಟ್ಟಡಕ್ಕೆ ಜಾಗ ಗುರುತು ಮಾಡಿದ್ದೇವೆ. ಹಾರೋಹಳ್ಳಿ ಪಟ್ಟಣ ಬಹಳ ವೇಗವಾಗಿ ಬೆಳೆಯುತ್ತಿದೆ. ಸೂಕ್ತ ಮೂಲಭೂತ ಸೌಕರ್ಯಗಳನ್ನೂ ಕೊಡಬೇಕು. ಈಗಾಗಲೇ ಹಾರೋಹಳ್ಳಿ ಪಟ್ಟಣಕ್ಕೆ ಬೈಪಾಸ್ ನಿರ್ಮಾಣ ಮಾಡಿದ್ದೇವೆ. ಹಾರೋಹಳ್ಳಿ ಕೆರೆ ಶುದ್ದೀಕರಣ ಮಾಡಲು ಕ್ರಮವಗಿಸಿದ್ದು ನಾವೇ ಎಂದು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಹಾರೋಹಳ್ಳಿ ಸುಂದರ ಪಟ್ಟಣವಾಗಿ ನಿರ್ಮಾಣ ಆಗುತ್ತೆ. ಇಲ್ಲಿ 25 ವರ್ಷ ಆಡಳಿತ ಮಾಡಿದವರಿಗೆ ಹಾರೋಹಳ್ಳಿ ಮೇಲೆ ಪ್ರೀತಿ ಇಲ್ಲ. ಮಾಜಿ ಪ್ರಧಾನಿ ಆಗಿದ್ರು, ಮಾಜಿ ಸಿಎಂ ಆಗಿದ್ರೂ ಇಲ್ಲಿ ಅಭಿವೃದ್ಧಿ ಆಗಿರಲಿಲ್ಲ. ಅವರಿಗೆ ಅವರ ಕುಟುಂಬಕ್ಕೆ ಒಳ್ಳೆಯದಾದ್ರೆ ಸಾಕಾಗಿತ್ತು. ಜನರಿಗೆ ಒಳ್ಳೆಯದು ಮಾಡಬೇಕು ಅಂತ ಅವರಿಗೆ ಭಾವನೆ ಇಲ್ಲ. ನಾನು ಸತ್ತೂ ಇದೇ ರಸ್ತೆಯಲ್ಲಿ ಹೋಗೋದು, ಬದುಕಿದ್ರೂ ಇಲ್ಲೇ ಓಡಾಡೋದು. ಬೇರೆಯವರ ರೀತಿ ಇಲ್ಲಿ ಒಂದು ಕಣ್ಣು ಅಂದುಬಿಟ್ಟು ಮಂಡ್ಯಕ್ಕೆ ಹೋಗೋದಲ್ಲ. ಇದನ್ನ ಜನ ಗಮನದಲ್ಲಿಟ್ಟುಕೊಳ್ಳಬೇಕು. ಹಾರೋಹಳ್ಳಿ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ ಎಂದು ದಳಪತಿಗಳ ವಿರುದ್ಧ ಡಿ.ಕೆ. ಸುರೇಶ್ ವಾಗ್ದಾಳಿ ನಡೆಸಿದ್ದಾರೆ.
ಇಂದು ರಾಮನಗರದ ಹಾರೋಹಳ್ಳಿ ಸರ್ಕಲ್ ಬಳಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನರನ್ನು ಉದ್ದೇಶಿಸಿ ಚುನಾವಣಾ ಪ್ರಚಾರ ನಡೆಸಿದೆ.
ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ನನ್ನ ಕಾರ್ಯಕ್ಕೆ ಕೂಲಿ ನೀಡಿ, ಚುನಾವಣೆಯಲ್ಲಿ ಹಸ್ತದ ಗುರುತಿಗೆ ಮತ ನೀಡುವ ಮೂಲಕ ಆಶೀರ್ವದಿಸಬೇಕೆಂದು ಮತಯಾಚಿಸಿದೆ.#DKSuresh #BangaloreRural pic.twitter.com/UsmtUS72fB
— DK Suresh (@DKSureshINC) April 16, 2024