ಬೆಂಗಳೂರು ಗ್ರಾಮಾಂತರ : ಪಿಕ್ ಪಾಕೆಟ್ ಸರ್ಕಾರ ಎಂಬ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಸಂಸದ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ತಿರುಗೇಟು ನೀಡಿದ್ದಾರೆ.
ಹಾರೋಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅವರು ಸರ್ಕಾರ ನಡೆಸಿದ್ದವರು. ಅವರು ಪಿಕ್ ಪಾಕೆಟ್ ಮಾಡಿದ್ರಾ, ಕಳ್ಳತನ ಮಾಡಿದ್ರಾ ಎಲ್ಲಾ ಗೊತ್ತು. ಅವರದ್ದು ಕಳ್ಳತನದ ಸರ್ಕಾರ ಆಗಿತ್ತಲ್ವಾ? ಎಂದು ಕುಟುಕಿದ್ದಾರೆ.
ಪ್ರಧಾನಿ ಮೋದಿ ಎಲ್ಲಾ ಕಡೆ ನನ್ನ ಹೆಸರನ್ನ ಉಲ್ಲೇಖಿಸಿ ಭಾಷಣ ಮಾಡ್ತಿದ್ದಾರೆ. ಯಾಕಂದ್ರೆ ನಾನು ಕನ್ನಡಿಗರ ತೆರಿಗೆ ಹಣದ ಬಗ್ಗೆ ಪ್ರಸ್ತಾಪ ಮಾಡಿದ್ದೇನೆ. ರಾಜ್ಯಕ್ಕೆ ಆದ ಅನ್ಯಾಯದ ಬಗ್ಗೆ ಧ್ವನಿ ಎತ್ತಿದ್ದೇನೆ. ಇದು ಅವರಿಗೆ ಸಹಿಸಲು ಆಗ್ತಿಲ್ಲ. ನಮ್ಮ ತೆರಿಗೆ ಹಣವನ್ನ ಗುಜರಾತ್, ಉತ್ತರ ಪ್ರದೇಶಕ್ಕೆ ನೀಡ್ತಿದ್ದಾರೆ ಎಂದು ಚಾಟಿ ಬೀಸಿದ್ದಾರೆ.
ನ್ಯಾಯ ಕೇಳಿದ್ದಕ್ಕೆ ದೇಶದ್ರೋಹಿ ಪಟ್ಟ ಕಟ್ಟುತ್ತಿದ್ದಾರೆ
ಕೇವಲ ಭಾಷಣ ಮಾಡಿದ್ರೆ ಏನೂ ಆಗಲ್ಲ. ನ್ಯಾಯ ಕೇಳಿದ್ದಕ್ಕೆ ದೇಶದ್ರೋಹಿ ಪಟ್ಟ ಕಟ್ಟುತ್ತಿದ್ದಾರೆ. ಆದರೆ, ನಾನು ನನ್ನ ಹೋರಾಟ ಮುಂದುವರೆಸುತ್ತೇನೆ. ಮೋದಿ 2008ರಲ್ಲಿ ಸಿಎಂ ಆದಾಗ ಏನು ಮಾತನಾಡಿದ್ರೂ ಒಮ್ಮೆ ನೆನಪು ಮಾಡೊಕೊಳ್ಳಲಿ. ಅವರು ಮಾತನಾಡಿದ್ದು ದೇಶ ಪ್ರೇಮವಾ ಅಥವಾ ದೇಶದ್ರೋಹವಾ? ಎಂದು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.