ತುಮಕೂರು : ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣನವರಿಗೆ ಯಾವುದೇ ಕಾರಣಕ್ಕೂ ಮತ ನೀಡಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ತುಮಕೂರು ಜಿಲ್ಲೆಯ ತಿಪಟೂರಿನ ಕೆ.ಬಿ. ಕ್ರಾಸ್ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಎಸ್.ಪಿ. ಮುದ್ದಹನುಮೇಗೌಡ ರೈತರ ಕೊಬ್ಬರಿ ಬೆಲೆ ಬಗ್ಗೆ ಮಾತನಾಡಿದ್ರು. ಇಂತವರನ್ನ ಗೆಲ್ಲಿಸಿ ಸಂಸತ್ ಕಳಿಸುವ ಕೆಲಸ ನೀವೆಲ್ಲ ಮಾಡಬೇಕು. ಕಳಿಸುತ್ತೀರಾ ಅಲ್ವಾ..? ಎಂದು ಜನರನ್ನ ಪ್ರಶ್ನಿಸಿದರು.
25 ಜನ ಬಿಜೆಪಿಯಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಅದರಲ್ಲಿ ಸಂಸದ ಜಿ.ಎಸ್. ಬಸವರಾಜ್ ಕೂಡ ಒಬ್ಬರು. ಈಗ 27 ಜನ ಆಗಿದ್ದಾರೆ. ಮಂಡ್ಯಂದಿಂದ ಗೆದ್ದಿದ್ದ ಸುಮಲತಾ, ಹಾಸನದ ಪ್ರಜ್ವಲ್ ರೇವಣ್ಣ. ನೀವು ಅವರಿಗೆ ಕೇಳಬೇಕು. ಕರ್ನಾಟಕಕ್ಕೆ ಬರಗಾಲ ಬಂದರೂ ಒಂದು ರೂಪಾಯಿ ಹಣ ಕೊಡಲಿಲ್ಲ. ಭದ್ರಮೇಲ್ದಂಡೆ ಯೋಜನೆಗೆ ಹಣ ನೀಡಲಿಲ್ಲ. ಎಲ್ಲಾ ಸಮಸ್ಯೆಗಳಿದ್ರು ಬಿಜೆಪಿ ಸಂಸದರು ಒಬ್ಬರಾದ್ರು ಸಂಸತ್ನಲ್ಲಿ ಬಾಯಿ ಬಿಟ್ಟಿದ್ದಾರಾ..? ಎಂದು ವಾಗ್ದಾಳಿ ನಡೆಸಿದರು.
ಮೋದಿ ಎದುರು ನಿಲ್ಲುವು ಧೈರ್ಯ ಇದ್ಯಾ?
ಸೋಮಣ್ಣ ಅವರನ್ನ ಬೆಂಗಳೂರಿನಿಂದ ಕರೆತಂದು ತುಮಕೂರಿನಲ್ಲಿ ನಿಲ್ಲಿಸಿದ್ದಾರೆ. ವರುಣಾದಲ್ಲಿ ನನ್ನ ಮೇಲೆ ತಂದು ನಿಲ್ಲಿಸಿದ್ರು. ಸೊಮಣ್ಣ ವಸತಿ ಸಚಿವರಾಗಿದ್ದರು. ಬಡವರಿಗೆ ಒಂದೇ ಒಂದು ಮನೆ ಕೊಡುವ ಯೋಜನೆ ತಂದಿದ್ದಿರಾ? ಬಡವರಿಗೆ ಒಂದೇ ಒಂದು ಮನೆ ಕೊಟ್ಟಿರೋ ಉದಾಹರಣೆ ಇದೆಯೇ? ನಾನು ಕೆಲಸಗಾರ ನಾನು ಕೆಲಸಗಾರ ಅಂತಾರೆ. ಇವರು ಗೆದ್ದು ಹೋದ್ರೆ ಮೋದಿ ಎದುರು ನಿಲ್ಲುವು ಧೈರ್ಯ ಇದೆಯಾ..? ಮೋದಿ ಎದುರಿಗೆ ನಿಂತರೇ ಗಡ ಗಡ ಅಂತ ನಡುಗುತ್ತಾರೆ. ಇವರಿಂದ ಕರ್ನಾಟಕದ ಹಿತವನ್ನ ರಕ್ಷಣೆ ಮಾಡುವ ಶಕ್ತಿ ಇಲ್ಲ ಎಂದು ಸಿದ್ದರಾಮಯ್ಯ ಹರಿಹಾಯ್ದರು.